ಒಗ್ಗಟ್ಟಿನಿಂದ BSY ಕುರ್ಚಿ ಗಟ್ಟಿಗೊಳಿಸಿದ ಶಾಸಕರಲ್ಲೇ ಭಿನ್ನಮತ ಸ್ಫೋಟ..?

By Suvarna NewsFirst Published Jan 25, 2020, 5:40 PM IST
Highlights

ಮೈತ್ರಿ ಸರ್ಕಾರದಲ್ಲಿ ಸರಿಯಾದ ಸ್ಥಾನಮಾನ ಸಿಗಲಿಲ್ಲವೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟು 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು, ಒಗ್ಗಟ್ಟಿನಿಂದ ಬಿಎಸ್‌ವೈ ಕುರ್ಚಿ ಗಟ್ಟಿಗೊಳಿಸಿದ್ದಾರೆ. ಆದ್ರೆ, ಇದೀಗ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಅವರಲ್ಲಿಯೇ ಮನಸ್ತಾಪ ಉಂಟಾಗಿರುವ ಲಕ್ಷಣಗಳು ಕಂಡುಬರುತ್ತಿವೆ.

ಮೈಸೂರು, (ಜ.25): ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬೈ ಎಲೆಕ್ಷನ್‌ನಲ್ಲಿ ಗೆದ್ದಿರುವ ನೂತನ ಬಿಜೆಪಿ ಶಾಸಕರು ಸಚಿವರಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ, ಇದಕ್ಕೆ ಬಿಜೆಪಿ ಹೈಕಮಾಂಡ್ ಮಾತ್ರ ಯಾವುದೇ ಪ್ರತಿಕ್ರಿಯೆಗಳು ಬರದಿದ್ದರಿಂದ ಕಂಗಾಲಾಗಿದ್ದಾರೆ. 

ಸಿಎಂ ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ: ಆರ್ ಶಂಕರ್ 

ಅಷ್ಟೇ ಅಲ್ಲದೇ ಬೈ ಎಲೆಕ್ಷನ್‌ನಲ್ಲಿ ಗೆದ್ದ 12ರಲ್ಲಿ ಕೇವಲ 6 ಶಾಸಕರನ್ನು ಸಂಪುಟ ಸೇರಿಸಿಕೊಳ್ಳುವ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರಲ್ಲಿಯೇ ಗುಂಪುಗಾರಿಕೆಗಳು ಶುರುವಾಗಿವೆ. ಇದಕ್ಕೆ ಪೂರಕವೆಂಬಂತೆ ನೂತನ ಶಾಸಕ ಎಸ್‌.ಟಿ ಸೋಮಶೇಖರ್ ಅವರ ಮಾತು. 

ಹೌದು.. ಇಂದು ಮೈಸೂರಿನ ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಶವಂತಪುರದ ಬಿಜೆಪಿ ಶಾಸಕ ಸೋಮಶೇಖರ್, ಇಂತಹವರಿಗೆ ಸಚಿವ ಸ್ಥಾನ ನೀಡಿ ಅಂತ ಹೇಳುವುದಕ್ಕೆ ಆಗುವುದಿಲ್ಲ. ಸೋತವರಿಗೆ ಸಚಿವ ಸ್ಥಾನ ನೀಡುವುದು ಸಿಎಂ ಪರಮಾಧಿಕಾರ ಎಂದು ಹೇಳುವ ಮೂಲಕ ಸೋತವರ ಕಥೆ ನಮಗ್ಯಾಕೆ ಎನ್ನುವ ಅರ್ಥದಲ್ಲಿ ಹೇಳಿದರು.

17 ಜನರಿಗೂ ಮಂತ್ರಿಸ್ಥಾನ ಕೊಡಲೇಬೇಕು: ಬಿಜೆಪಿಗೆ ಹಳ್ಳಿಹಕ್ಕಿ ವಾರ್ನಿಂಗ್

ಇದೇ ಸೋಮಶೇಖರ್ ಅವರು ಈ ಹಿಂದೆ ಗೆದ್ದವರಿಗೆ ಮಾತ್ರವಲ್ಲದೇ ಸೋತವರಿಗೂ ಸಹ ಸ್ಥಾನಮಾನ ನೀಡಬೇಕೆಂದು ಹೇಳಿದ್ದರು. ಆದ್ರೆ, ಇದೀಗ ಈ ರೀತಿ ಮಾತನಾಡುವ ಮೂಲಕ ಸೋತವರಿಗೆ ಆಮೇಲೆ ಮೊದಲು ನಮಗೆ ಸಚಿವ ಸ್ಥಾನ ಕೊಡಿ ಎನ್ನುವಂತಿದೆ.

ಇನ್ನಷ್ಟು ಮಾತನಾಡಿರುವ ಸೋಮಶೇಖರ್, ಚುನಾವಣೆ ಸಂದರ್ಭದಲ್ಲಿ ಗೆದ್ದ ತಕ್ಷಣವೇ ಸಚಿವರು ಆಗ್ತಾರೆ ಅಂತ ಹೇಳಿದ್ರು. ಅಂದ್ರೆ ಹೇಳಿದ ತಕ್ಷಣ ಮಾಡಲೇ ಬೇಕೆಂಬುದು ಏನೂ ಇಲ್ಲ. ಸೋತವರಿಗೆ ಈ ಹಿಂದೆಯೇ ಚುನಾವಣೆಗೆ ನಿಲ್ಲುವುದು ಬೇಡ ಎಂದಿದ್ರು. ಆದರೂ ಕೆಲವರು ಮುಖ್ಯಮಂತ್ರಿಗಳ ಮಾತು ಕೇಳದೇ ಚುನಾವಣೆಗೆ ಸ್ಪರ್ಧೆ ಮಾಡಿದ್ರು ಎಂದರು.

ಶಂಕರ್ ಮಾತ್ರ ಚುನಾವಣೆ ‌ನಿಲ್ಲದೇ ತಟಸ್ಥ ನಿಲುವು ಅನುಸರಿಸಿದ್ದರು. ಅವರನ್ನು ಮೇ ತಿಂಗಳಲ್ಲಿ  ಎಂಎಲ್‌ಸಿ ಮಾಡಿ ಸಚಿವರನ್ನಾಗಿ ಮಾಡುತ್ತಾರೆ. ಅದಕ್ಕೆ ಅವರು ಚುನಾವಣೆಗೆ ನಿಲ್ಲದೆ ತಟಸ್ಥ ನಿಲುವು ಅನುಸರಿಸಿದ್ದರು. ಆದರೆ ಕೆಲವರು ಸೋಲುವ ಮುನ್ಸೂಚನೆ ಇದ್ರೂ ಚುನಾವಣೆಗೆ ನಿಂತರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಎಂಟಿಬಿ ಹಾಗೂ ವಿಶ್ವನಾಥ್‌ಗೆ ಚಾಟಿ ಬೀಸಿದರು.

click me!