
ಕೊಲ್ಲೂರು(ಏ.14): ಪಕ್ಷದ ಸರ್ವೆ ಪ್ರಕಾರ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತು ಇತರ ಕೆಲ ಶಾಸಕರಿಗೆ ಟಿಕೆಟ್ ತಪ್ಪಿದೆ. ಈ ಬಗ್ಗೆ ಅವರಲ್ಲಿ ಮಾತನಾಡಿ, ಮನವರಿಕೆ ಮಾಡಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಅವರು ಪಕ್ಷಕ್ಕೆ ರಾಜೀನಾಮೆ ನೀಡದೆ ಸಂಯಮದಿಂದ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಲ್ಲಿನ ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಡುಪಿ ಜಿಲ್ಲೆಯಲ್ಲೂ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದೇನು ಪ್ರಯೋಗ ಅಥವಾ ರಿಸ್ಕ್ ಅಲ್ಲ, ಸಂಘಟನೆಯಲ್ಲಿ ಗಟ್ಟಿ ಇರುವವರನ್ನು ಆಯ್ಕೆ ಮಾಡಿದ್ದೇವೆ ಎಂದರು.
2ನೇ ಪಟ್ಟಿ ವಿರುದ್ಧವೂ ಅಸಮಾಧಾನ: ನಿಲ್ಲದ ಬಿಜೆಪಿ ಬಂಡಾಯ..!
ರಿಷಭ್ ಶೆಟ್ಟಿ ಭೇಟಿ ಕೋ-ಇನ್ಸಿಡೆಂಟ್:
ಮುಖ್ಯಮಂತ್ರಿ ಕೊಲ್ಲೂರಿಗೆ ಬಂದಾಗ ಕನ್ನಡದ ಸ್ಟಾರ್ ನಟ ರಿಷಭ್ ಶೆಟ್ಟಿಅಲ್ಲಿದ್ದರು. ನಂತರ ಅವರೂ ಸಿಎಂ ಜೊತೆ ಪೂಜೆಗೆ ಸೇರಿಕೊಂಡರು. ಈ ಕುರಿತು ಮಾತನಾಡಿದ ಸಿಎಂ, ರಿಷಭ್ ಅವರನ್ನು ಇಲ್ಲಿ ಭೇಟಿಯಾದದ್ದು ಕಾಕತಾಳೀಯ. ಇದರಲ್ಲಿ ಯಾವುದೇ ರಾಜಕೀಯ ಕಾರಣಗಳಿಲ್ಲ, ರಿಷಭ್ ಇಲ್ಲಿಗೆ ಬರುವುದು ತಮಗೆ ಗೊತ್ತಿರಲಿಲ್ಲ, ತಾನು ದೇವಾಲಯಕ್ಕೆ ಬಂದಾಗ ರಿಷಭ್ ಅದಾಗಲೇ ಬಂದಿದ್ದರು. ಅವರನ್ನು ಇಲ್ಲಿ ಕಂಡು ನನಗೆ ಅಚ್ಚರಿಯಾಯಿತು ಎಂದು ಮುಖ್ಯಮಂತ್ರಿ ಹೇಳಿದರು.
ರಿಷಬ್ ನನಗೆ ಮೊದಲಿಂದಲೂ ಸ್ನೇಹಿತರು, ನಮ್ಮ ಸಿದ್ಧಾಂತಕ್ಕೆ ಹತ್ತಿರವಿರುವವರು. ನಮ್ಮ ಸಿದ್ಧಾಂತದ ಪ್ರತಿಪಾದನೆ ಮಾಡುವವರು. ಹಾಗಂತ ಅವರನ್ನು ನಮ್ಮ ಪಕ್ಷದ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ಬಗ್ಗೆ ಈವರೆಗೆ ಯಾವುದೇ ಮಾತುಕತೆಗಳು ನಡೆದಿಲ್ಲ. ಮುಂದೆ ಮೂಕಾಂಬಿಕೆ ಏನು ಎಂಬ ಆಶೀರ್ವಾದ ಕೊಡುತ್ತಾಳೆ ನೋಡೋಣ ಎಂದು ಹೇಳಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.