
ಜೈಪುರ(ಅ.18): ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಬುಡ ಮತ್ತೆ ಅಲುಗಾಡತೊಡಗಿದೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಅಲ್ಲೋಲ ಕಲ್ಲೋಲವಾಗಿದ್ದ ರಾಜಸ್ಥಾನ ಕಾಂಗ್ರೆಸ್ ಬಳಿಕ ಹೇಗೋ ಸುಧಾರಿಸಿಕೊಂಡು ತಣ್ಣಗಾಗಿತ್ತು. ಆದರೆ ಇದೀಗ ಬಿಜೆಪಿ ರಾಜಸ್ಥಾನ ಸ್ಪೀಕರ್ ಭೇಟಿ ಮಾಡಿ ಮಹತ್ವದ ಆಗ್ರಹ ಮಾಡಿದೆ. ಇದರಿಂದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ವಿಶ್ವಾಸ ಮತ ಯಾಚನೆಗೆ ಬೆಜಿಪೆ ಪಟ್ಟು ಹಿಡಿದಿದೆ. ಇಷ್ಟೇ ಅಲ್ಲ ಈ ಹಿಂದೆ ಅಶೋಕ್ ಗೆಹ್ಲೋಟ್ ಆಪ್ತರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಒತ್ತಾಯಿಸಿದೆ. ಇದು ಗೆಹ್ಲೋಟ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವಂತೆ ಸಿಎಂ ಅಶೋಕ್ ಗೆಹ್ಲೋಟ್ಗೆ ಗಾಂಧಿ ಕುಟುಂಬ ಸೂಚಿಸಿತ್ತು. ಒಲ್ಲದ ಮನಸ್ಸಿನಿಂದ ಸ್ಪರ್ಧಿಸಲು ಗೆಹ್ಲೋಟ್ ಮುಂದಾಗಿದ್ದರು. ಇದರ ನಡುವೆ ರಾಜಸ್ಥಾನ ಸಿಎಂ ಸ್ಥಾನ ಕೈತಪ್ಪಲಿದೆ ಅನ್ನೋದು ಖಚಿತವಾಗುತ್ತಿದ್ದಂತೆ ಗೆಹ್ಲೋಟ್ ರಾಜಕೀಯ ತಂತ್ರ ಪ್ರಯೋಗಿಸಿದ್ದರು. ತಮ್ಮ ಆಪ್ತರನ್ನು ರಾಜೀನಾಮೆ ಕೊಡಿಸಿದ್ದರು. ಈ ಮೂಲಕ ಸರ್ಕಾರವನ್ನೇ ಪತನಗೊಳಿಸುವ ಯತ್ನಕ್ಕೆ ಕೈ ಹಾಕಿದ್ದರು. ಈ ಬೆಳವಣಿಗೆಯಿಂದ ಬೆದರಿದ ಕಾಂಗ್ರೆಸ್ ಹೈಕಮಾಂಡ್ ಅಶೋಕ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಹೊರಗಿಟ್ಟಿತ್ತು. ಬಳಿಕ ರಾಜಸ್ಥಾನದಲ್ಲಿ ಪರಿಸ್ಥಿತಿ ಶಾಂತವಾಗಿತ್ತು. ಈ ಪ್ರಕರಣವನ್ನು ರಾಜಸ್ಥಾನ ಕಾಂಗ್ರೆಸ್ ಇಲ್ಲಿಗೆ ಬಿಟ್ಟಿತ್ತು. ಆದರೆ ಬಿಜೆಪಿ ಬಿಡುತ್ತಿಲ್ಲ.
"ಯಾವ ಸಿಎಂ ಕೂಡ ಬೇಡ ಅನ್ನಲಾರ"; ರಾಜಸ್ಥಾನದಲ್ಲಿ ಅದಾನಿ ಹೂಡಿಕೆ ಬಗ್ಗೆ ರಾಹುಲ್ ಪ್ರತಿಕ್ರಿಯೆ
ಗೆಹ್ಲೋಟ್ ಸಿಎಂ ಹುದ್ದೆ ತಪ್ಪದಂತೆ ಕಾಂಗ್ರೆಸ್ ಹೈಕಮಾಂಡ್ಗೆ ಬೆದರಿಕೆ ತಂತ್ರಕ್ಕಾಗಿ ಆಪ್ತರಿಂದ ರಾಜೀನಾಮೆ ನಾಟಕ ಆಡಿಸಿದ್ದರು. ಗೆಹ್ಲೋಟ್ ಆಪ್ತರು ಸ್ವೀಕರ್ಗೆ ರಾಜೀನಾಮೆ ಪತ್ರ ರವಾನಿಸಿದ್ದರು. ಇದೀಗ ಬಿಜೆಪಿ ಈ ರಾಜೀನಾಮೆ ಪತ್ರವನ್ನು ಅಂಗೀಕರಿಸುವಂತೆ ಸ್ವೀಕರ್ ಸಿಪಿ ಜೋಶಿ ಅವರಿಗೆ ಮನವಿ ಮಾಡಿದೆ. ಈ ಸಂಬಂಧ ಇಂದು ಸಿಪಿ ಜೋಶಿ ಅವರನ್ನು ಭೇಟಿ ಮಾಡಿದ ಬಿಜೆಪಿ ನಾಯಕರು ಗೆಹ್ಲೋಟ್ ಆಪ್ತರ ರಾಜೀನಾಮೆ ಪತ್ರವನ್ನು ಅಂಗೀಕರಿಸಲು ಕೋರಿದೆ. ಇಷ್ಟೇ ಅಲ್ಲ ರಾಜೀನಾಮೆ ಅಂಗೀಕರಿಸಿ ವಿಶ್ವಾಸ ಮತ ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದೆ.
Rajasthan Politicsನಲ್ಲಿ ಗೆಹ್ಲೋಟ್ ಶಕ್ತಿ ಎಂಥದ್ದು? ರಬ್ಬರ್ಸ್ಟಾಂಪ್ ಅಂದ್ಕೊಂಡ್ರೆ ರೆಬೆಲ್ಸ್ಟಾರ್ ಆದ್ರಲ್ಲಾ?
ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದ ಗೆಹ್ಲೋಟ್
‘ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿಯ ಹೆಸರು ಕೇಳಿದರೆ ಶಾಸಕರು ತಿರುಗಿ ಬೀಳುತ್ತಾರೆ’ ಎಂದು ತಮ್ಮನ್ನು ಬದಲಾವಣೆ ಮಾಡಿ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡಲು ನಡೆದ ಯತ್ನಗಳ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹರಿಹಾಯ್ದಿದ್ರು.. ಅಲ್ಲದೆ, ‘ಮುಂದಿನ ಬಜೆಟ್ ಬಗ್ಗೆ ನನಗೆ ಸಲಹೆ ಕೊಡಿ’ ಎಂದು ಜನತೆಗೆ ಕೋರುವ ಮೂಲಕ ತಾವು ಮುಖ್ಯಮಂತ್ರಿಯಾಗಿ ಮುಂದುವರಿಯುವ ಸುಳಿವು ನೀಡಿದ್ದರು. ಹೊಸ ಮುಖ್ಯಮಂತ್ರಿ ಆಯ್ಕೆ ಆಗುತ್ತದೆ ಎಂದರೆ 80-90 ಶಾಸಕರು ಸಿಡಿದೇಳುತ್ತಾರೆ. ಪದಚ್ಯುತ ಆಗಲಿರುವ ಮುಖ್ಯಮಂತ್ರಿ ಪರ ನಿಲ್ಲುತ್ತಾರೆ. ಇದನ್ನು ತಪ್ಪು ಎಂದು ಹೇಳಲು ಆಗಲ್ಲ. ಆದರೆ ರಾಜಸ್ಥಾನದಲ್ಲಿ ಹೀಗೆ ಹಿಂದೆಂದೂ ಆಗಿಲ್ಲ’ ಎಂದು ಸಚಿನ್ ಪೈಲಟ್ಗೆ ಪರೋಕ್ಷವಾಗಿ ತಿವಿದಿದ್ದರು. ತಮ್ಮ ವಿರೋಧಿ ಅಜಯ್ ಮಾಕನ್ ವಿರುದ್ಧ ಹರಿಹಾಯ್ದೆ ಗೆಹ್ಲೋಟ್, ‘ವೀಕ್ಷಕರು ಹೈಕಮಾಂಡ್ ಸೂಚನೆಯಂತೆ ಕೆಲಸ ಮಾಡಬೇಕೇ ವಿನಾ, ಬೇರೆ ಕೆಲಸವಲ್ಲ’ ಎಂದು ಕಿಡಿಕಾರಿದರು. ‘ಈ ಹಿಂದೆ ಅಮಿತ್ ಶಾ ಅವರು ಕೆಲವು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಯತ್ನಿಸಿ ಅವರಿಗೆ ಸಿಹಿ ತಿನ್ನಿಸಿದ್ದರು. ಆದರೆ ಆ ಕಷ್ಟಕಾಲದಲ್ಲಿ ನನ್ನ ಜತೆ 102 ಶಾಸಕರು ನಿಂತರು. ಅವರನ್ನು ನಾನು ಕೈಬಿಡಲ್ಲ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.