
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಏ.28): ಭಾಷೆ ವಿಚಾರವಾಗಿ ಕಿಚ್ಚ ಸುದೀಪ್ ಹಾಗೂ ನಟ ಅಜಯ್ ದೇವಗನ್ ನಡೆದ ಟ್ವೀಟ್ ವಾರ್ ಇದೀಗ ರಾಜಕೀಯ ಮುಖಂಡರಿಂದ ನಾನಾ ಹೇಳಿಕೆಗಳು ಹೊರಬರುತ್ತಿವೆ. ಇನ್ನು ಈ ನಟರ ನಡುವೆ ನಡೆದ ಟ್ವೀಟ್ , ಭಾಷೆ ವಿಚಾರವಾಗಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂಪರ್ಕ ಭಾಷೆಯಾಗಿ ಹಿಂದಿ ಬಳಸುವುದರಲ್ಲಿ ತಪ್ಪೇನಿಲ್ಲ : ಸಿ.ಟಿ ರವಿ, ಮೊದಲ ಆದ್ಯತೆ ಮಾತೃಭಾಷೆಗೆ ಆದರೂ ಸಂಪರ್ಕ ಭಾಷೆಯಾಗಿ ಹಿಂದಿ ಬಳಸುವುದರಲ್ಲಿ ತಪ್ಪೇನಿಲ್ಲ. ಇಂಗ್ಗೀಷ್ ಭಾಷೆ ಬದಲಾಗಿ ಹಿಂದಿ ಭಾಷೆಯನ್ನು ಬಳಸಿ ಅಂತಾ ಕೇಂದ್ರದ ಗೃಹ ಸಚಿವರು ಈ ಹಿಂದೆ ಹೇಳಿದ್ದರು. ಇದರಲ್ಲಿ ಯಾವುದೇ ತಪ್ಪೇನಿಲ್ಲ, ಸಂಪರ್ಕ ಭಾಷೆಯಾಗಿ ಇಂಗ್ಗಿಷ್ ಬದಲಾಗಿ ಹಿಂದಿ ಬಳಸುವುದರಲ್ಲಿ ತಪ್ಪೇನಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದಿ ಯಾವತ್ತೂ ರಾಷ್ಟ್ರ ಭಾಷೆ ಆಗಿಲ್ಲ: ದೇವಗನ್ ಹಿಂದಿ ಏಟಿಗೆ ಸಿದ್ದರಾಮಯ್ಯ ತಿರುಗೇಟು
ಇಂಗ್ಗೀಷ್ ಭಾಷೆ ಆಂಗ್ಲರು ಹೇರಿದ ಭಾಷೆ. ಕರ್ನಾಟಕದಲ್ಲಿ ಅಭಿಮಾನದ ಭಾಷೆ, ಮಾತೃಭಾಷೆ ಕನ್ನಡವೇ ಆಗಿದ್ದು, ದುಃಖ ಪಡಬೇಕಾಗಿಲ್ಲ. ಸಂಕೋಚವಿಲ್ಲದೆ ಮಾತೃಭಾಷೆಯನ್ನು ವಿಶ್ವಾಸದಿಂದ ಮಾತನಾಡಿ ಎಂದು ಪ್ರಧಾನಿಯವರೇ ಹೇಳಿದ್ದಾರೆ. ಆಯಾ ರಾಜ್ಯದ ಪ್ರಾದೇಶಿಕ -ಮಾತೃಭಾಷೆಗೆ ಶಿಕ್ಷಣ ನೀತಿಯಲ್ಲಿಯೂ ಒತ್ತು ನೀಡಲಾಗಿದೆ ಎಂದು ಹೇಳಿದರು.
ಅಲ್ಲದೆ ನಮಗೆ ನಮ್ಮ ಮಾತೃಭಾಷೆಯೇ ಶ್ರೇಷ್ಠವಾಗಿದ್ದು ಇನ್ನೊಂದು ಭಾಷೆಯನ್ನು ನಾವು ಅತಿಕ್ರಮಿಸುವರಲ್ಲ, ಅವರನ್ನ ಗೌರವಿಸುತ್ತೇವೆ ಜೊತೆಗೆ ನಮ್ಮ ದೇಶದಲ್ಲಿ ಒಂದು ಭಾಷೆ ಇನ್ನೊಂದು ಭಾಷೆಯನ್ನ ಕೊಂದಿಲ್ಲ, ಕೊಲ್ಲುವುದಿಲ್ಲ. ನಾಶಮಾಡಿ ಬೆಳೆಯುವುದು ಪರಕೀಯರಿಂದ ಬಂದಿರುವ ಮನೋಭಾವನೆ ಎಂದು ಭಾಷೆ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಟರ ನಡುವಿನ ಟ್ವೀಟ್ ವಾರ್ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ
ಹಿಂದಿ ಭಾಷೆ ಬಳಕೆಗೆ ಸಂಬಂಧಿಸಿದಂತೆ ಚಿತ್ರ ನಟರ ಮಧ್ಯೆ ಉಂಟಾಗಿರುವ ವಾಕ್ಸಮರದ ಬಗ್ಗೆ ಪ್ರಶ್ನಿಸಿದಾಗ ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ .ಅತಿರೇಕಕ್ಕೂ ಕೊಂಡೊಯ್ಯಬೇಕಾಗಿಲ್ಲ. ಆಂಗ್ಲಭಾಷೆಯನ್ನು ಇಂಗ್ಲಿಷರು ಹೇರಿದ್ದು ಹಿಂದಿ ನಮ್ಮದೇ ದೇಶ ಭಾಷೆ .ಶೇಕಡಾ 48 ರಷ್ಟು ಜನ ಹಿಂದಿಯನ್ನು ಮಾತೃಭಾಷೆಯಾಗಿ ಬಳಸುತ್ತಾರೆ ಎನ್ನುವುದನ್ನೂ ಮರೆಯಬಾರದು ಎಂದರು.
ಹೀಗಾಗಿ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬಳಸಿಕೊಳ್ಳಬಹುದುಆದರೆ ನಮ್ಮ ಮಾತೃಭಾಷೆಯೇ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು. 8 ಭಾಷೆಗಳಿಗೆ ರಾಷ್ಟ್ರೀಯ ಸ್ಥಾನಮಾನವನ್ನು ಕೊಟ್ಟಿದೆ. ನಮ್ಮ ಸರ್ಕಾರದ ನಿಲುವು ಸ್ಪಷ್ಟವಾಗಿದೆ, ಮಾತೃಭಾಷೆಯಲ್ಲಿ ವಿಶ್ವಾಸದಿಂದ ಮಾತಾಡಿ ಅಂತಾ ಪ್ರಧಾನಿಗಳೆ ಹೇಳಿದ್ದಾರೆ. ನಮ್ಮ ನೂತನ ಶಿಕ್ಷಣ ನೀತಿ ಕೂಡ ಆಯಾ ರಾಜ್ಯದ ಮಾತೃ ಭಾಷೆ, ಪ್ರಾದೇಶಿಕ ಭಾಷೆಗೆ ಒತ್ತು ಕೊಡುವು ಅಂಶವನ್ನು ಹೊಂದಿದೆ. ಇನ್ನು ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದ ಸೇರಿದಂತೆ ಉನ್ನತ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಬೇಕೆಂಬ ಚಿಂತನೆಯೂ ನಡೆದಿದೆ ಎಂದು ತಿಳಿಸಿದರು.ಸ್ವಾತಂತ್ರ್ಯ ಬಂದ ಆರಂಭದಲ್ಲೇ ಇದಕ್ಕೆ ಒತ್ತು ಕೊಡುವ ಕೆಲಸಯಾಗಬೇಕಾಗಿತ್ತು. ಈ ಹಿನ್ನಲೆಯಲ್ಲಿ ಎನ್ ಇ ಪಿ ವೈದ್ಯಕೀಯ, ಉನ್ನತ ಶಿಕ್ಷಣದಲ್ಲಿ ಮಾತೃಭಾಷೆಗೆ ಆದ್ಯತೆ ನೀಡುವ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.
ಸಿಎಂ ಭೇಟಿ ವಿಚಾರ , ಹೆಚ್ಚಿನ ಮಾಹಿತಿ ಇಲ್ಲ
ಇನ್ನು ಇದೇವೇಳೆ ನಾಳೆ (ಶುಕ್ರವಾರ) ಸಿಎಂ ದೆಹಲಿಗೆ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಯಾವ ಹಿನ್ನೆಲೆಯಲ್ಲಿ ಭೇಟಿ ಕೊಡುತ್ತಿದ್ದಾರೆ ಗೊತ್ತಿಲ್ಲ, ಅದು ನನ್ನ ಕೆಲಸ ಕೂಡ ಅಲ್ಲವೆಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.