
ಕಡೂರು (ಜು.17): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಸಮಾಜಕ್ಕೆ ಹಾಗೂ ಕುರುಬ ಸಮಾಜಕ್ಕೆ ಮಾರಕವಾದ ಕೊಡಲಿಯ ಕಾವು ಆಗಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ತಾಲೂಕಿನ ಸಖರಾಯಪಟ್ಟದ ಅಯ್ಯನಕೆರೆಗೆ ಶನಿವಾರ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರುವುದುದು ಖಚಿತ. ಸುಳ್ಳುಗಳನ್ನು ಸೃಷ್ಟಿ ಮಾಡಿ, ಆ ಮೂಲಕ ಅಧಿಕಾರಕ್ಕೆ ಬರುವ ಷಡ್ಯಂತ್ರವನ್ನು ಕಾಂಗ್ರೆಸ್ಸಿಗರು ಮಾಡುತಿದ್ದಾರೆ.
ಸ್ವಾತಂತ್ರ್ಯ ಬಂದು ನೂರು ವರ್ಷ ತುಂಬುವುದರ ಒಳಗೆ ಭಾರತವನ್ನು ಇಸ್ಲಾಂ ದೇಶ ಮಾಡಲು ಹೊರಟಿರುವ ಮತಾಂಧರಿಗೆ ಸಿದ್ದರಾಮಯ್ಯ ಅವರು ಬೆಂಬಲಿಸುವ ಮಾತುಗಳನ್ನಾಡುವ ಮೂಲಕ ಹಿಂದೂ ಸಮಾಜಕ್ಕೆ ಕೊಡಲಿಯ ಕಾವಿನಂತೆ ಆಗಿರುವುದು ನಮ್ಮಗಳ ದುರ್ದೈವ ಎಂದರು. ಕುಲಕ್ಕೆ ಕೊಡಲಿ ಪೆಟ್ಟು ನೀಡುವುದು ಅದರ ಕಾವು. ಅದರಲ್ಲೂ ಸಿದ್ದರಾಮಯ್ಯನವರು ಹಿಂದೂ ಕುಲದಲ್ಲಿ ಹುಟ್ಟಿದ್ದು, ಹಿಂದೂ ಧರ್ಮದ ಉಳಿವಿಗೆ ಇರುವ ಕುರುಬ ಸಮಾಜದಲ್ಲಿ ಹುಟ್ಟಿರುವ ಸಿದ್ದರಾಮಯ್ಯವರು ಕೊಡಲಿಯ ಕಾವು ಆಗಬಾರದು.
ದಕ್ಷಿಣ ಭಾರತದಲ್ಲಿ ಬಿಜೆಪಿ ಗೆಲ್ಲಿಸಲು ‘ಮಿಷನ್ ದಕ್ಷಿಣ್’: ಸಿ.ಟಿ.ರವಿ
ಆ ಮೂಲಕ ಮತಾಂಧರಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡಬಾರದು ಎಂದು ಆಗ್ರಹಿಸುತ್ತೇನೆ ಎಂದ ಸಿ.ಟಿ.ರವಿ ಅವರು, ಆದರೂ ಮತಾಂಧರಿಗೆ ಕುಮ್ಮಕ್ಕು ನೀಡಲು ಮುಂದಾದಲ್ಲಿ ಕುರುಬ ಸಮಾಜವು ಹಿಂದೂ ಸಮಾಜದ ರಾಷ್ಟ್ರದ ಹಿತದ ಜೊತೆ ನಿಲ್ಲುತ್ತದೆ ಎಂದರು. ಸಿದ್ದರಾಮೋತ್ಸವದ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮೋತ್ಸವ ಮಾಡಿಕೊಂಡು ಸಿದ್ದರಾಮಯ್ಯನವರು ನೂರು ವರ್ಷ ಆರೋಗ್ಯವಾಗಿರಲಿ. ನಿಮ್ಮ ವೃದ್ಧಾಪ್ಯ ಜೀವನವು ಸಂತೋಷವಾಗಿರಲಿ ಎಂದರು.
ಸಿದ್ದು ಟೀಂನ ಅರ್ಧದಷ್ಟು ಜನರು ಜೈಲಿಗೆ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಲೋಕಾಯುಕ್ತವನ್ನು ದುರ್ಬಲಗೊಳಿಸುವ ಮೂಲಕ ಹಲ್ಲುಕಿತ್ತ ಹಾವಿನಂತೆ ಮಾಡಿ ಎಸಿಬಿ ರಚನೆ ಮಾಡಿದ್ದರು. ಅವರ ಕಾಲಾವಧಿಯ ಫೈಲ್ಗಳನ್ನು ರೀ ಓಪನ್ ಮಾಡಿದರೆ ಸರ್ಕಾರದಲ್ಲಿದ್ದ ಅರ್ಧದಷ್ಟು ಜನ ಜೈಲಿಗೆ ಹೋಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಸರ್ಕಾರಾವಧಿಯ ಹಗರಣಗಳನ್ನು ಮುಚ್ಚಿ ಹಾಕಲು ಸಿದ್ದರಾಮಯ್ಯ ಅವರು ಎಸಿಬಿ ರಚಿಸಿದ್ದರು.
ಅವರು ಸಿಎಂ ಆಗಿದ್ದಾಗ ಸಾಕಷ್ಟು ಹಗರಣಗಳನ್ನು ಮುಚ್ಚಿಹಾಕಿದ್ದರು ಎಂದರು. ಇದೇ ವೇಳೆ ಜಮೀರ್ ಮನೆ ಮೇಲಿನ ಇ.ಡಿ.ದಾಳಿ ವಿಚಾರ ಪರೋಕ್ಷವಾಗಿ ಪ್ರಸ್ತಾಪಿಸಿದ ಸಿ.ಟಿ.ರವಿ, ಬೇರೆಯವರ ಮೇಲೆ ಇ.ಡಿ.ದಾಳಿ ನಡೆದರೆ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ, ಪ್ರಾಮಾಣಿಕರಿದ್ದರೆ ಏಕೆ ಭಯಪಡಬೇಕು ಎಂದು ಅವರೇ ಹೇಳುತ್ತಿದ್ದರು. ಆದರೆ, ಅವರ ಆಪ್ತರ ಮೇಲೆ ದಾಳಿ ನಡೆದರೆ ಮಾತ್ರ ಏಕೆ ಸಂಕಟಪಡುತ್ತಾರೆ? ತಪ್ಪು ಮಾಡದಿದ್ದರೆ ಹೆದರುವುದೇಕೆ? ಎಂದು ಪ್ರಶ್ನಿಸಿದರು.
ದತ್ತಪೀಠದ ವಿವಾದ: ಸುದೀರ್ಘ ಹೋರಾಟಕ್ಕೆ ಸಿಕ್ಕ ಗೆಲುವು, ಸಿ.ಟಿ.ರವಿ
ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ. ಮುಂದಿನ ಮುಖ್ಯಮಂತ್ರಿ ಪದವಿಯ ರೇಸ್ನಲ್ಲಿ ನಾನಿಲ್ಲ. ಈ ಬಗ್ಗೆ ಪಕ್ಷವೇ ತೀರ್ಮಾನಿಸಲಿದೆ. ಆದರೆ ನಾನು ಸಿಎಂ ಗಾದಿಯ ರೇಸಲ್ಲೂ ಇರುವುದಿಲ್ಲ. ಪಕ್ಷದ ಕಾರ್ಯಕರ್ತನಾಗಿರುತ್ತೇನೆ. ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಹೊರತು, ಮುಖ್ಯಮಂತ್ರಿ ಗಾದಿಯ ರೇಸ್ನಲ್ಲಿ ನಾನಿಲ್ಲ
- ಸಿ.ಟಿ.ರವಿ, ಶಾಸಕ, ಚಿಕ್ಕಮಗಳೂರು ಕ್ಷೇತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.