- ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಅ. 31) : ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಮುಕ್ತಾಯವಾಗಿದೆ. ಯಾವ ಪಕ್ಷಕ್ಕೂ ಪೂರ್ಣ ಪ್ರಮಾಣದ ಸೀಟುಗಳು ಬರದೆ ಹೋದ್ರೂ, ನಿರೀಕ್ಷೆಯನ್ನ ಮೀರಿ ಬಿಜೆಪಿ ಮುನ್ನಡೆ ಪಡೆದಿದೆ. ಪಾಲಿಕೆ ಅಧಿಕಾರ ಹಿಡಿಯಲು ಬೇಕಾದ 18 ಸೀಟುಗಳ ಪೈಕಿ 17 ವಾರ್ಡಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಒಂದು ಸದಸ್ಯ ಸೀಟ್ ಮಾತ್ರ ಬೇಕಿದೆ.
Karnataka Politics ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ: ಗುಡುಗಿದ ಯತ್ನಾಳ್
ಅಚ್ಚರಿಯ ಫಲಿತಾಂಶ ಪಡೆದ ಬಿಜೆಪಿ!
ಪಾಲಿಕೆ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ(BJP) ಅಚ್ಚರಿಯ ಫಲಿತಾಂಶ ಪಡೆದಿದೆ. ಆರಂಭದಲ್ಲಿ ಬಂಡಾಯದ ಬಿಸಿ ಅನುಭವಿಸಿದ್ದರು ರಿಜಲ್ಟ್ ಮಾತ್ರ ಬಂಡಾಯ ಎದ್ದವರಿಗೆ ಶಾಕ್ ಕೊಟ್ಟಿದೆ.
ಒಟ್ಟು 35 ವಾರ್ಡ್ ಗಳಲ್ಲಿ ಬಿಜೆಪಿ 33 ಕಡೆಗಳಲ್ಲಿ ಸ್ಪರ್ಧೆ ಮಾಡಿ 17 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ ವಿರುದ್ಧ ಬಹುತೇಕ ವಾರ್ಡಗಳಲ್ಲಿ ಬಂಡೆದ್ದು, ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಿಜೆಪಿ ಟಿಕೆಟ್ ವಂಚಿತರು ಕೇವಲ 5 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಇನ್ನು ಪಾಲಿಕೆಯಲ್ಲಿ ಅಧಿಕಾರ ಸ್ಥಾಪಿಸುವ ಹುಮ್ಮಸ್ಸಿನಿಂದ ಪೀಲ್ಡಿಗಿಳಿದ್ದ ಕಾಂಗ್ರೆಸ್ ಕೇವಲ 10 ಸ್ಥಾನಗಳಲ್ಲಿ ಗೆದ್ದು ತೃಪ್ತಿ ಪಟ್ಟುಕೊಂಡಿದೆ. ಅಚ್ಚರಿಯ ವಿಚಾರ ಅಂದ್ರೆ ಇದೇ ಮೊದಲ ಬಾರಿ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಸ್ಪರ್ಧೆಗಿಳಿದ ಎಐಎಂಐಎಂ ಪಕ್ಷ 2 ಸ್ಥಾನಗಳಲ್ಲಿ ಖಾತೆ ಓಪನ್ ಮಾಡಿದೆ. ಇತ್ತ ಜೆಡಿಎಸ್ ಒಂದೇ ಒಂದು ಸ್ಥಾನದಲ್ಲಿ ಗೆದ್ದು ನಿರಾಸೆ ಅನುಭವಿಸಿದೆ.
ಬಿಜೆಪಿ ಬಂಡಾಯಗಾರರಿಗೆ ಶಾಕ್, ಯತ್ನಾಳ್ ರಾಕ್!
ಚುನಾವಣೆ ಆರಂಭದಲ್ಲಿ ಟಿಕೆಟ್ ಗಾಗಿ ಉಂಟಾದ ತಿಕ್ಕಾಟದಲ್ಲಿ ಬಿಜೆಪಿ ಟಿಕೆಟ್ ವಂಚಿತರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಬಿಜೆಪಿ ವಿರುದ್ಧ ಬಂಡೆದ್ದು ಕಮಲ ಪಾಳಯದಲ್ಲಿ ತಲ್ಲಣ ಸೃಷ್ಟಿ ಮಾಡಿದ್ದರು. ಪಕ್ಷೇತರರಿಂದ ಬಿಜೆಪಿಗೆ ಸೋಲಾಗುತ್ತೆ, ಬಹಳಷ್ಟು ವಾರ್ಡಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನುವ ವಿಶ್ಲೇಷಣೆಗಳು ಕೇಳಿ ಬಂದಿದ್ದವು. ಆದರೆ ರಿಸಲ್ಟ್ ಸ್ವತಃ ಬಿಜೆಪಿ ಪಾಳಯದಲ್ಲಿ ಅಚ್ಚರಿಯನ್ನ ಮೂಡಿಸಿದೆ. ನಿರೀಕ್ಷೆ 20 ಸೀಟ್ ಗಳ ಮೇಲಿದ್ದರು, ಗುಪ್ತಚರ ಮಾಹಿತಿ, ಸಾರ್ವಜನಿಕರಲ್ಲಿದ್ದ ಲೆಕ್ಕಾಚಾರದ ಪ್ರಕಾರ ಬಂಡಾಯದ ಬಿಸಿಗೆ ಬಿಜೆಪಿ 10 ರಿಂದ 12 ಸ್ಥಾನಗಳಲ್ಲಿ ಗೆಲ್ಲಬಹುದು ಎನ್ನಲಾಗ್ತಿತ್ತು. ಆದ್ರೆ 17 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಕಂಡಿದ್ದು ಶಾಸಕ ಬಸನಗೌಡ ಯತ್ನಾಳರ ಮನಪುಳಕಿತಗೊಳ್ಳುವಂತೆ ಮಾಡಿದೆ. ಈ ಬೆಳವಣಿಗೆ ಬಂಡಾಯವೆದ್ದವರಿಗೆ ಭಾರೀ ಹಿನ್ನಡೆ ಹಾಗೂ ಶಾಕ್ ಕೊಟ್ಟಿದೆ.
ಹೊಸ ಖಾತೆ ತೆರೆದ ಓವೈಸಿಯ AIMIM!
ಇಡೀ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಚ್ಚರಿಯ ವಿಚಾರ ಅಂದ್ರೆ ಎಐಎಂಐಎಂ ಪಕ್ಷ ಮೊದಲ ಬಾರಿಗೆ 2 ಖಾತೆಗಳಲ್ಲಿ ಗೆಲವು ಸಾಧಿಸಿ, ಖಾತೆ ಆರಂಭಿಸಿದೆ. ಅದ್ರಲ್ಲೂ ಸ್ಪರ್ಧಿಸಿದ್ದ 4 ವಾರ್ಡಗಳ ಪೈಕಿ 2 ವಾರ್ಡಗಳಲ್ಲಿ ಅನಾಯಾಸವಾಗಿ ಗೆಲುವು ಕಂಡಿದ್ದು, ಕಾಂಗ್ರೆಸ್ ಗೆ ಭಯ ಹುಟ್ಟಿಸಿದೆ. ಎಐಎಂಐಎಂ ನಿಂದ ವಾರ್ಡ್ ನಂಬರ್ 25ರಲ್ಲಿ ಸುಪೀಯಾ ವಾಟಿ, ವಾರ್ಡ್ ನಂಬರ್ 28 ರಲ್ಲಿ ರಿಜ್ವಾನ್ ಬಾನು ಇನಾಮದಾರ್ ಗೆಲ್ಲುವ ಮೂಲಕ ಎಐಎಂಐಎಂ ವಿಜಯಪುರದಲ್ಲಿ ಚಿಗುರೊಡೆಯಲು ಕಾರಣರಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಭಯ ಹುಟ್ಟಿಸಿತಾ ಎಐಎಂಐಎಂ..?!
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಅಚ್ಚರಿಯ ರಿಜಲ್ಟ್ ಪಡೆದುಕೊಂಡಿದ್ದು, ಇತ್ತ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಕೊಟ್ಟಿದೆ. ಸ್ಪರ್ಧಿಸಿದ್ದೆ ಕೇವಲ 4 ವಾರ್ಡಗಳಲ್ಲಿ, ಅಷ್ಟರಲ್ಲಿ 2 ವಾರ್ಡಗಳಲ್ಲಿ ಗೆಲುವು ಕಂಡಿರೋದು ಕಾಂಗ್ರೆಸ್ ಪಕ್ಷದಲ್ಲಿ ಭಯ ಹುಟ್ಟಿಸಿದೆ. ಅಕಸ್ಮಾತ್ 20ಕ್ಕು ಅಧಿಕ ವಾರ್ಡ್ಗಳಲ್ಲಿ ಎಐಎಂಐಎಂ ಪಕ್ಷ ಸ್ಪರ್ಧೆಗೆ ಇಳಿದಿದ್ದರೆ ಕಾಂಗ್ರೆಸ್ 10 ಸೀಟ್ ಗಳಲ್ಲಿ ಗೆಲುವು ಸಾಧಿಸುತ್ತಿತ್ತಾ? ಅಂತೆಲ್ಲ ಮಹಾನಗರ ಜನರು ಮಾತನಾಡಿಕೊಳ್ತಿದ್ದಾರೆ. ಈ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಭಯ ಹುಟ್ಟಿಸಿರೋದು ಸುಳ್ಳಲ್ಲ..
ವಿಜಯಪುರ ಪಾಲಿಕೆ ಚುನಾವಣೆ, ಬಿಜೆಪಿ ಅಭ್ಯರ್ಥಿಗಳಿಗೆ ಬಂಡಾಯದ ಬಿಸಿ
ಮಹಾನಗರ ಪಾಲಿಕೆ ಚುನಾವಣೆ ಈ ವರೆಗೆ ಗೆದ್ದವರ ರಿಟೇಲ್ ಹೀಗಿದೆ: