ಯತ್ನಾಳ್ ಸೇರಿ ಹಲವು ಬಿಜೆಪಿ ಮುಖಂಡರಿಗೆ ಮಹತ್ವದ ಜವಾಬ್ದಾರಿ

By Kannadaprabha NewsFirst Published Oct 4, 2021, 9:20 AM IST
Highlights
  • ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಹಾವೇರಿ ಜಿಲ್ಲೆಯ ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ
  • ಆಡಳಿತಾರೂಢ ಬಿಜೆಪಿ ವತಿಯಿಂದ ಸಚಿವರು, ಶಾಸಕರು ಹಾಗೂ ಮುಖಂಡರನ್ನು ಒಳಗೊಂಡ ಉಸ್ತುವಾರಿ ತಂಡ

 ಬೆಂಗಳೂರು (ಅ.04):  ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ಮತ್ತು ಹಾವೇರಿ (Haveri) ಜಿಲ್ಲೆಯ ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಆಡಳಿತಾರೂಢ ಬಿಜೆಪಿ (BJP) ವತಿಯಿಂದ ಸಚಿವರು, ಶಾಸಕರು ಹಾಗೂ ಮುಖಂಡರನ್ನು ಒಳಗೊಂಡ ಉಸ್ತುವಾರಿ ತಂಡಗಳನ್ನು ರಚಿಸಲಾಗಿದೆ.

ಭಾನುವಾರ ನಡೆದ ಬಿಜೆಪಿ ಕೋರ್‌ ಕಮಿಟಿ (Corecommittee) ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ಬಳಿಕ ಉಸ್ತುವಾರಿ ತಂಡಗಳನ್ನು ರಚಿಸಿ ಜವಾಬ್ದಾರಿ ನೀಡಲಾಗಿದೆ.

ಸಿಂದಗಿ (Sindagi) ವಿಧಾನಸಭಾ ಕ್ಷೇತ್ರ- ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಸಿ.ಸಿ.ಪಾಟೀಲ, ಶಶಿಕಲಾ ಜೊಲ್ಲೆ, ಸಂಸದ ರಮೇಶ್‌ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಲಕ್ಷ್ಮಣ ಸವದಿ, ಸೋಮನಗೌಡ ಪಾಟೀಲ್‌, ಎ.ಎಸ್‌.ಪಾಟೀಲ್‌ ನಡಹಳ್ಳಿ, ಪಿ.ರಾಜೀವ್‌, ಮಾಜಿ ಶಾಸಕರಾದ ಶ್ರೀಕಾಂತ್‌ ಕುಲಕರ್ಣಿ, ಬಾಬುರಾವ್‌ ಚಿಂಚನಸೂರು.

ಹಾನಗಲ್‌ನಲ್ಲಿ ಬಿಜೆಪಿ ಗೆಲುವು ಖಚಿತ : ಭವಿಷ್ಯ

ಹಾನಗಲ್‌ (Hanagal) ವಿಧಾನಸಭಾ ಕ್ಷೇತ್ರ- ಸಚಿವರಾದ ಮುರುಗೇಶ್‌ ನಿರಾಣಿ, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ಪಾಟೀಲ್‌, ಶಿವರಾಂ ಹೆಬ್ಬಾರ್‌, ಸಂಸದ ಶಿವಕುಮಾರ್‌ ಉದಾಸಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್‌.ರವಿಕುಮಾರ್‌, ಮಹೇಶ್‌ ಟೆಂಗಿನಕಾಯಿ, ಶಾಸಕರಾದ ರಾಜುಗೌಡ, ನೆಹರು ಓಲೇಕಾರ್‌, ಎಂ.ಚಂದ್ರಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್‌ಕುಮಾರ್‌ ಗುತ್ತೂರು.

ವಿಜಯೇಂದ್ರಗಿಲ್ಲ ಉಸ್ತುವಾರಿ: ಸಿಂದಗಿ, ಹಾನಗಲ್‌ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದ ಚುನಾವಣೆ ಉಸ್ತುವಾರಿಯನ್ನು ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ (vijayendra) ಅವರಿಗೆ ನೀಡುತ್ತಾರೆಂದು ಬೆಂಬಲಿಗರು ನಿರೀಕ್ಷೆಯಲ್ಲಿ ಇದ್ದರು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ವಿಜಯೇಂದ್ರ ಅವರಿಗೆ ಈ ಬಾರಿ ಯಾವುದೇ ಉಸ್ತುವಾರಿ ನೀಡಿಲ್ಲ.

ಉಪ ಚುನಾವಣೆಗಳಲ್ಲಿ ನಾವೇ ಗೆಲ್ಲೋದು

  ಬಳ್ಳಾರಿ:   ಹಾನಗಲ್‌ (Hanagal)) ಮತ್ತು ಸಿಂದಗಿ ವಿಧಾನಸಭಾ ಉಪ ಚುನಾವಣೆಗಳಲ್ಲಿ ನಾವೇ ಗೆಲ್ಲೋದು, ಬರೆದಿಟ್ಟುಕೊಳ್ಳಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಚುನಾವಣೆ ಮುಂಬರುವ ವಿಧಾನಸಭಾ ಚುನಾವಣೆಯ (Assembly Election) ಸೆಮಿಫೈನಲ್‌ ಅಲ್ಲ. ಯಾಕೆಂದರೆ ಈ ಹಿಂದೆ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪಚುನಾವಣೆಗಳಲ್ಲಿ ಅಂದು ಆಡಳಿತಾರೂಢ ಪಕ್ಷವಾಗಿದ್ದ ಕಾಂಗ್ರೆಸ್‌ ಗೆದ್ದಿತ್ತಾದರೂ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿತ್ತು ಎಂದರು. ಈ ಮೂಲಕ ಈ ಉಪ ಚುನಾವಣೆಗೂ ಮುಂಬರುವ ವಿಧಾನಸಭಾ ಚುನಾವಣೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಾನಗಲ್‌ ಬಿಜೆಪಿ ಕ್ಷೇತ್ರ, ಸಿಂದಗಿ ಜೆಡಿಎಸ್‌  (JDS) ಗೆದ್ದಿರುವ ಕ್ಷೇತ್ರ. ಈ ಎರಡೂ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೋ ಆ ಪಕ್ಷದಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿಗೆ ಇರುತ್ತದೆ. ಅಭ್ಯರ್ಥಿಗಳ ವಿಚಾರದಲ್ಲಿ ನಾವು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದರು.

 

click me!