Karnataka Politics ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ: ಗುಡುಗಿದ ಯತ್ನಾಳ್

By Suvarna NewsFirst Published Jan 10, 2022, 7:13 PM IST
Highlights

ತಮ್ಮ ಬೆನ್ನು ತಾವೇ ತಟ್ಟಿಕೊಂಡ ಯತ್ನಾಳ್
ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ ಎಂದು ಪ್ರಶ್ನೆ
ಸಚಿವರಾಗುವ ಉತ್ಸುಕದಲ್ಲಿ ಯತ್ನಾಳ್

ಧಾರವಾಡ, (ಜ.01): ಸಂಕ್ರಾಂತಿ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ (Karnataka Cabinet ) ಬದಲಾವಣೆಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕೆಲವರನ್ನ ಕೈಬಿಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಲಾಗುತ್ತೆ ಎಂದು ತಿಳಿದುಬಂದಿದೆ.

ಅದರಲ್ಲೂ ಪ್ರಮುಖವಾಗಿ ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangowda Patil Yatnal) ಅವರನ್ನ ಈ ಬಾರಿ ಸಂಪುಟ ಸೇರಿಸಿಕೊಳ್ಳಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಯತ್ನಾಳ್ ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.

BJP Meeting: ಬಿಜೆಪಿ ಕಾರ್ಯಕಾರಣಿ ಸಭೆ ಮಾಹಿತಿ ಬಿಚ್ಚಿಟ್ಟ ಯತ್ನಾಳ್, ಬೊಮ್ಮಾಯಿ ಸೇಫ್...!

ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ (BJP) ಯಾರಿಗಿದೆ..? ವಾಜಪೇಯಿ ಆಡಳಿತದಲ್ಲಿ ಮಂತ್ರಿ ಆಗಿದ್ದೇ ನಾನು, ಸಚಿವ ಸಂಪುಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾಗಿ ವಾಜಪೇಯಿ(Atal Bihari Vajpayee) ಪತ್ರ ಕೊಟ್ಟಿದ್ದರು. ಅಟಲ್‍ಜೀ ಹಸ್ತಾಂಕ್ಷರದಿಂದ ಪತ್ರ ಪಡೆದ ವ್ಯಕ್ತಿ ನಾನು. ಆದರೆ ದುರ್ದೈವ ಅಂದ್ರೆ ರಾಜಕಾರಣದಲ್ಲಿ ನೇರ ಮಾತನಾಡಬಾರದು, ಚಮಚಾಗಿರಿ ಮಾಡಬೇಕು. ಅದನ್ನು ನಾನು ಮಾಡೋದಿಲ್ಲ. ಒಂದು ಕಾಲು ಹಿಡಿಯೋದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಧಾರವಾಡದಲ್ಲಿ(Dharwad) ಇಂದು(ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಅರವಿಂದ್ ಬೆಲ್ಲದ್ ಸಚಿವರಾಗಬೇಕು. ಅವರು ಸಚಿವರಾಗಲು ಅವರದ್ದೇ ಆದ ಅರ್ಹತೆ ಇದೆ. ನಾನು ಕೇಳುತ್ತಿರೋದು ಎಲ್ಲಾ ಸಮುದಾಯಗಳ ನ್ಯಾಯ ಮಾತ್ರ, ಆ ನ್ಯಾಯ ಕೊಟ್ಟರೆ ಮಾತ್ರ ನಾನು ಸಚಿವ ಸಂಪುಟ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಕೊನೆಗೆ ಎರಡೇ ದಿನ ಕೊಟ್ಟರು. ಮುಂದಿನ ಅಧಿವೇಶನದಲ್ಲಿ ಮೊದಲೇ ನಾಲ್ಕು ದಿನ ಕೊಡಬೇಕು. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸದನದ ಸಮಯ ಹಾಳು ಮಾಡಿದೆ. ಸಿದ್ದರಾಮಯ್ಯ ಎಂಟೆಂಟು ತಾಸು ಮಾತನಾಡುತ್ತಾರೆ. ಅವರ ಶಾಸಕರಿಗೂ ಅವಕಾಶ ಕೊಡೊದಿಲ್ಲ, ಇದು ದುರಂತ ಎಂದು ಹೇಳಿದರು.

ಹಾಡಿದ್ದು ಹಾಡೋ ಕಿಸಬಾಯಿದಾಸ ಅಂತಾರಲ್ಲ, ಹಾಗೇ ಸಿದ್ದರಾಮಯ್ಯ ಹೇಳಿದ್ದೇ ಹೇಳುತ್ತಾರೆ. ಅದೇ ಟಿಪ್ಪು ಸುಲ್ತಾನ್ ವರ್ಣನೆ ಮಾಡುತ್ತಾರೆ. ಅದು ಬಿಟ್ಟರೇ ಬೇರೆ ಗೊತ್ತಿಲ್ಲ. ನಾವು ಎಲ್ಲ ಸಮುದಾಯಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ಶಿಗ್ಗಾವಿ ಕ್ಷೇತ್ರದಲ್ಲಿ ನಮ್ಮ ಸಮುದಾಯ 50 ಸಾವಿರ ಇದೆ. ಹಾನಗಲ್, ರಾಣೆಬೆನ್ನೂರನಲ್ಲಿಯೂ 50 ಸಾವಿರ ಇದ್ದಾರೆ. ಉತ್ತರ ಕರ್ನಾಟಕದಲ್ಲಿ ನಾವು ಹೆಚ್ಚಿದ್ದೇವೆ, ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡಿ ಅಂತಾ ಕೇಳಿದ್ದೇವೆ. ಯಾರಿಗೂ ಬೆದರಿಕೆ, ಅಂಜಿಕೆ ಹಾಕಿಲ್ಲ. ಬೊಮ್ಮಾಯಿಯವರು ಮೀಸಲಾತಿ ಕೊಡಬೇಕೆಂಬ ಭಾವನೆ ಅವರ ಮನಸ್ಸಿನಲ್ಲಿದೆ. ಆ ದಿಕ್ಕಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

ಮಂತ್ರಿಯಾಗುವ ಸುಳಿವು ಕೊಟ್ಟಿದ್ದ ಯತ್ನಾಳ್
ಸಂಕ್ರಾಂತಿ ಹಬ್ಬದೊಳಗೆ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆಯಾಗಲಿದೆ. ವಿಜಯಪುರಕ್ಕೂ ಸಚಿವ ಸ್ಥಾನ ದೊರೆಯಲಿದೆ ಎಂದು ಪರೋಕ್ಷವಾಗಿ ತಾವು ಮಂತ್ರಿಯಾಗುತ್ತೇನೆಂದು ಸುಳಿವು ಕೊಟ್ಟಿದ್ದರು.

ಸಚಿವ ಸಂಪುಟ ಬದಲಾವಣೆ ವೇಳೆ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ಸಿಗಲಿದೆ. ಹೆಚ್ಚು ಕ್ರಿಯಾಶೀಲ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು. ಜ.8, 9ರಂದು ಪಕ್ಷದ ಬೈಠಕ್ ನಡೆಯಲಿದೆ. ಅಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದಿದ್ದರು.

ವಿಜಯಪುರ ಜಿಲ್ಲೆಗೆ ಸೂಕ್ತ ಗೌರವಯುತ ಸ್ಥಾನಮಾನ ಸಿಗುತ್ತದೆ ಎಂಬ ವಿಶ್ವಾಸ ಇದೆ. ನಾನು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಭೇಟಿಯಾಗುವುದಿಲ್ಲ. ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬಳಿ ಎಲ್ಲರ ಲೆಕ್ಕಪತ್ರ ಇದೆ. ಲಾಬಿ ಮಾಡುವ ಅಗತ್ಯ ಪಕ್ಷಕ್ಕಿಲ್ಲ. ನಮ್ಮ ಪಕ್ಷದ ಶಾಸಕರ ಅರ್ಹತೆ ಬಗ್ಗೆ ನಾಯಕರಿಗೆ ಗೊತ್ತಿದೆ. ಅದರ ಆಧಾರದ ಮೇಲೆ ಸಚಿವ ಸ್ಥಾನ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

click me!