
ಹುಬ್ಬಳ್ಳಿ (ಏ.06): ರಾಜ್ಯದ ಮಹಾ ನಾಯಕರು ಕೇರಳಕ್ಕೆ ಹೋಗಿ ಶತ್ರು ಸಂಹಾರ ಪೂಜೆಯನ್ನು ಮಾಡಿಸಿದ ಕೆಲವೇ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಕಾಲು ನೋವು ಸಮಸ್ಯೆ ಕಾಣಿಸಿಕೊಂಡಿದೆ. ಅಂದರೆ, ಕೇರಳದಲ್ಲಿ ನಡೆದ ಶತ್ರು ಸಂಹಾರ ಯಾಗಕ್ಕೂ ಸಿದ್ದರಾಮಯ್ಯನವರ ಕಾಲು ಸಮಸ್ಯೆಗೂ ಲಿಂಕ್ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಶತ್ರು ಸಂಹಾರ ಯಾಗ ಮಾಡಿಸಿದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯನವರ ಕಾಲು ನೋವು ಸಮಸ್ಯೆ ಕಾಣಿಸಿಕೊಂಡಿದೆ. (ಡಿ.ಕೆ. ಶಿವಕುಮಾರ್ ಕೇರಳಕ್ಕೆ ಹೋಗಿ ಶತ್ರು ಸಂಹಾರ ಪೂಜೆ ಮಾಡಿಸಿ ಬಂದಿದ್ದರು) ಅದೇ ರೀತಿ ನನ್ನ ಮೇಲೆಯೂ ಕೂಡ ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಯತ್ನಾಳ ಸಂಹಾರ ಪೂಜೆ ನಡೆದಿದೆ. ಆದರೆ ಅದರಿಂದ ನನಗೆ ಏನೂ ಆಗಲ್ಲ. ಏಕೆಂದರೆ ಮಾಟ, ಮಂತ್ರ ಪ್ರಭಾವ ಬೀರಲ್ಲ ಅಂತ ನನ್ನ ಜಾತಕದಲ್ಲಿದೆ. ಈ ಹಿಂದೆ ಕೇವಲ ಕೇರಳದಲ್ಲಿ ಅಷ್ಟೇ ಅಲ್ಲ, ಹುಬ್ಬಳ್ಳಿಯಲ್ಲಿಯೂ ಕೂಡ ನನ್ನ ಸಂಹಾರ ಪೂಜೆ ಆಗಿದೆ. ಪೂಜೆ ಮಾಡಿಸಿದ್ದು ಯಾರೆಂಬುದು ನನಗೆ ಗೊತ್ತಿದೆ. ನನಗೆ ಯಾವ ಪ್ರಭಾವವೂ ಬೀರದ ಕಾರಣ ನಾನು ಹುಬ್ಬಳ್ಳಿಗೆ ಬಂದು ಮಾತನಾಡುತ್ತಿದ್ದೇನೆ ಎಂದರು.
ಇದನ್ನೂ ಓದಿ: Interview | ಯತ್ನಾಳ್ರ ವಜಾದಿಂದ ನಮ್ಮ ಹೋರಾಟ ನಿಲ್ಲಲ್ಲ, ವಿಜಯೇಂದ್ರ ಬಗ್ಗೆ ಕುಮಾರ ಬಂಗಾರಪ್ಪ ಹೇಳಿದ್ದೇನು?
ಇನ್ನು ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಯುವಾಗ ಲಿಂಗಾಯತರನ್ನು ಇತರೆ ಹಿಂದುಳಿದ ವರ್ಗ (OBC) ಪಟ್ಟಿಗೆ ಸೇರಿಸಲು ಮುಂದಾಗಿದ್ದರು. ರಾತ್ರೋರಾತ್ರಿ ಅದನ್ನು ಸಂಪುಟ ಸಭೆಯಲ್ಲಿಟ್ಟು ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದ್ದರು. ಈ ನಾಡಿನ ಮಠಾದೀಶರನ್ನು ಕರೆ ಮಾಡಿ ವಿಷಯ ತಿಳಿಸಿ ತಮ್ಮ ಬೆಂಬಲಕ್ಕೆ ಬರುವಂತೆ ಕೋರಿಕೊಂಡಿದ್ದರು. ಅಂದು ರಾತ್ರಿ ಅಮಿತ್ ಶಾ ಕರೆ ಮಾಡಿ ಮಾತನಾಡಿದ ಮೇಲೆ ಟುಸ್ ಪಟಾಕಿ ಆಯ್ತು. OBC ಪಟ್ಟಿಗೆ ಲಿಂಗಾಯತರನ್ನು ಸೇರಿಸುವ ನಿರ್ಧಾರ ಕೈಬಿಡದಿದ್ದರೆ, ಯಡಿಯೂರಪ್ಪ ಎಲ್ಲ ಹಗರಣ ಹೊರಹಾಕುವುದಾಗಿ ಹೇಳಿದರು. ಅಮಿತ್ ಶಾ ಹೇಳಿದ ನಂತರ ಯಡಿಯೂರಪ್ಪ ಅದನ್ನ ಕೈ ಬಿಟ್ಟರು. ಅಷ್ಟೊಂದು ದೈರ್ಯ ಇದ್ದರೆ ಯಡಿಯೂರಪ್ಪ ಮಾಡಬೇಕಿತ್ತು ಎಂದು ಹೇಳಿದರು.
ನಾನು ವಿಜಯ ದಶಮಿ ವರಿಗೆ ಕಾದುನೋಡುವೆ. ನಾನು ತಪ್ಪಾಗಿದೆ ಅಂತ ಕೈಕಾಲು ಬಿದ್ದು ಘರ್ ವಾಪಸಾತಿ ಆಗೋದಿಲ್ಲ. ಗೌರವಯುತವಾಗಿ ರಾಜಕೀಯ ನಡೆಸುತ್ತೇನೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಕೆಲವರು ಬೆಂಬಲ ನೀಡುತ್ತಿದ್ದಾರೆ. ಕೆಲವರು ಹಣದ ಸಹಾಯ ಮಾಡುವೆ ಅಂತ ಹೇಳಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇದನ್ನೂ ಓದಿ: ಕೂಡಲಶ್ರೀ ವಿರುದ್ಧವೇ ತಿರುಗಿಬಿದ್ದ ಪಂಚಮಸಾಲಿ ಮುಖಂಡರು! ಯತ್ನಾಳ್ ಪರ ಬ್ಯಾಟಿಂಗ್ಗೆ ವಿರೋಧ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.