
ಬಳ್ಳಾರಿ (ಜ.2): ಬಳ್ಳಾರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ತಮ್ಮ ಮೇಲೆ ನಡೆದ ಹಲ್ಲೆ ಹಾಗೂ ಕೊಲೆ ಯತ್ನದ ಕುರಿತು ಮಾಜಿ ಸಚಿವ, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಳ್ಳಾರಿಯ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆಯ ಸಂಪೂರ್ಣ ವಿವರ ಹಂಚಿಕೊಂಡಿದ್ದಾರೆ.
ಘಟನೆಯ ಗಾಂಭೀರ್ಯ ಅರಿತ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಜನಾರ್ದನ ರೆಡ್ಡಿ ಅವರ ನಿವಾಸಕ್ಕೆ ಖುದ್ದಾಗಿ ಭೇಟಿ ನೀಡಿದ್ದಾರೆ. ಎಎಸ್ಪಿ, ಡಿವೈಎಸ್ಪಿ (DySP) ಹಾಗೂ ಸಿಪಿಐ (CPI) ಅವರು ವೈಯಕ್ತಿಕವಾಗಿ ಆಗಮಿಸಿ ಶಾಸಕ ಜನಾರ್ದನ ರೆಡ್ಡಿ ಅವರಿಂದ ಮಾಹಿತಿ ಪಡೆದಿದ್ದಾರೆ. ಪೊಲೀಸರು ಮನೆಗೆ ಬಂದು ದೂರು ಸ್ವೀಕರಿಸಿರುವುದು ಪ್ರಕರಣದ ತೀವ್ರತೆ ಎಂತಹದ್ದು ಎಂಬುದನ್ನು ತಿಳಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಲಾಗಿದೆ. 'ನನ್ನ ಮೇಲೆ ನಡೆದ ದಾಳಿ ಮತ್ತು ನನ್ನನ್ನು ಕೊಲೆ ಮಾಡಲು ನಡೆಸಿದ ಪ್ರಯತ್ನದ ಕುರಿತು ನಾನು ವೈಯಕ್ತಿಕವಾಗಿ ದೂರು ನೀಡಿದ್ದೇನೆ. ಹಾಗೆಯೇ, ನಮ್ಮ ಕಚೇರಿಯ ಮ್ಯಾನೇಜರ್ ನಾಗರಾಜ್ ಅವರು ಮತ್ತೊಂದು ಪ್ರತ್ಯೇಕ ದೂರನ್ನು ಸಲ್ಲಿಸಿದ್ದಾರೆ ಎಂದು ಶಾಸಕ ಜನಾರ್ದನರೆಡ್ಡಿ ಸ್ಪಷ್ಟಪಡಿಸಿದರು.
ರಾಜಕೀಯ ವೈಷಮ್ಯದಿಂದ ದಾಳಿ
ಇದೇ ವೇಳೆ ರಾಜಕೀಯ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಜನಾರ್ದನ ರೆಡ್ಡಿ ಅವರು, 'ಸಿದ್ದರಾಮಯ್ಯನವರು ನನ್ನ ವಿರುದ್ಧ ರಾಜಕೀಯ ಹೋರಾಟ ಮಾಡಿರಬಹುದು, ನಾನು ಅವರ ವಿರುದ್ಧ ಮಾಡಿರಬಹುದು. ಆದರೆ, ಇಲ್ಲಿ ಭರತ್ ರೆಡ್ಡಿ ಅವರ ತಂದೆಯ ಕ್ರಿಮಿನಲ್ ಹಿನ್ನೆಲೆ ಎದ್ದುಕಾಣುತ್ತಿದೆ ಎಂದು ನೇರವಾಗಿ ಆರೋಪಿಸಿದರು. ರಾಜಕೀಯ ಹೋರಾಟವು ವೈಯಕ್ತಿಕ ದ್ವೇಷ ಮತ್ತು ಕೊಲೆ ಯತ್ನದ ಹಂತಕ್ಕೆ ತಲುಪಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ತನಿಖೆಯ ನಿರೀಕ್ಷೆಯಲ್ಲಿ ರೆಡ್ಡಿ
ಘಟನೆಯಲ್ಲಿ ಬಳಕೆಯಾದ ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡಿದ ಅವರು, ಯಾವ ಬುಲೆಟ್ನಿಂದ ಸಾವು ಸಂಭವಿಸಿದೆ ಎಂಬುದು ಇನ್ನೆರಡು ಮೂರು ದಿನಗಳಲ್ಲಿ ತನಿಖೆಯಿಂದ ತಿಳಿಯಲಿದೆ. ಪಕ್ಷದ ತೀರ್ಮಾನದಂತೆ ನಾವು ಮುಂದಿನ ಕಾನೂನು ಹೋರಾಟವನ್ನು ರೂಪಿಸುತ್ತೇವೆ, ಎಂದರು. ಅಲ್ಲದೆ, ಘಟನೆಯಲ್ಲಿ ನೊಂದ ಕುಟುಂಬದ ಜೊತೆಗೆ ಬಿಜೆಪಿ ಮತ್ತು ನಾನು ಸದಾ ಇರುತ್ತೇವೆ ಎಂದು ಭರವಸೆ ನೀಡಿದರು.
ಘಟನೆಯ ಹಿನ್ನೆಲೆ
ಬಳ್ಳಾರಿಯಲ್ಲಿ ಕಳೆದ ಕೆಲವು ದಿನಗಳಿಂದ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಈ ನಡುವೆ ನಿನ್ನೆ ಹೊಸವರ್ಷದಂದು ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಜನಾರ್ದನ ರೆಡ್ಡಿ ಅವರ ಮೇಲೆ ದಾಳಿ ಯತ್ನ ನಡೆದಿದೆ. ಈ ವೇಳೆ ಗುಂಡಿನ ಸದ್ದು ಕೇಳಿಬಂದಿದೆ ಈ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಘಟನೆಯು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.