Assembly election: ಕಾಣಿಕೆ ರಾಜಕೀಯ ಜೋರು: ಯಾರತ್ತ ಮತದಾರರು?

Published : Jan 19, 2023, 02:22 PM ISTUpdated : Jan 19, 2023, 02:25 PM IST
Assembly election: ಕಾಣಿಕೆ ರಾಜಕೀಯ ಜೋರು: ಯಾರತ್ತ ಮತದಾರರು?

ಸಾರಾಂಶ

ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ, ಆಗಲೇ ಎಲ್ಲ ರಾಜಕೀಯ ಪಕ್ಷಗಳ ಆಕಾಂಕ್ಷಿ ಅಭ್ಯರ್ಥಿಗಳು ಮಾತ್ರ ಚುನಾವಣೆಗೆ ಎಲ್ಲ ಸಿದ್ಧತೆ ನಡೆಸಿದ್ದಾರೆ. ಈಗಿನಿಂದಲೇ ಮತದಾರರನ್ನು ಸೆಳೆಯಲು ನಾನಾ ತಂತ್ರ, ಪ್ರತಿತಂತ್ರಗಳನ್ನು ರೂಪಿಸುತ್ತಿದ್ದಾರೆ. ಮತದಾರ ಯಾರ ಕೈಹಿಡಿಯುವನೋ ಎಂಬ ಕುತೂಹಲ ಉಂಟಾಗಿದೆ.

ವಿಶೇಷ ವರದಿ

ಬೆಳಗಾವಿ (ಜ.19) : ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ, ಆಗಲೇ ಎಲ್ಲ ರಾಜಕೀಯ ಪಕ್ಷಗಳ ಆಕಾಂಕ್ಷಿ ಅಭ್ಯರ್ಥಿಗಳು ಮಾತ್ರ ಚುನಾವಣೆಗೆ ಎಲ್ಲ ಸಿದ್ಧತೆ ನಡೆಸಿದ್ದಾರೆ. ಈಗಿನಿಂದಲೇ ಮತದಾರರನ್ನು ಸೆಳೆಯಲು ನಾನಾ ತಂತ್ರ, ಪ್ರತಿತಂತ್ರಗಳನ್ನು ರೂಪಿಸುತ್ತಿದ್ದಾರೆ. ಅದರಲ್ಲಿಯೂ ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಗಿಫ್‌್ಟರಾಜಕೀಯ ಸದ್ದು ತುಸು ಜೋರಾಗಿಯೆ ನಡೆದಿದೆ.

ಹಳದಿ, ಕುಂಕುಮ ಕಾರ್ಯಕ್ರಮಗಳ ಮೂಲಕ ಮಹಿಳಾ ಮತದಾರರನ್ನೇ ಗುರಿಯಾಗಿಸಿಕೊಂಡಿರುವ ರಾಜಕಾರಣಿಗಳು ನಾನಾ ಕಾಣಿಕೆ ಕೊಡುವ ಮೂಲಕ ಮತ ಸೆಳೆಯಲು ಯತ್ನಿಸುತ್ತಿದ್ದಾರೆ. ಹಳದಿ, ಕುಂಕುಮ ಕಾರ್ಯಕ್ರಮ ಇದ್ದಲ್ಲಿ ಜನಜಾತ್ರೆಯೇ ಸೇರುತ್ತಿದ್ದಾರೆ. ಹಾಲಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಅವರು ಕ್ಷೇತ್ರದಲ್ಲಿ ಮೊದಲಿನಿಂದಲೂ ನಿರಂತರವಾಗಿ ಹಳದಿ, ಕುಂಕುಮ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೆ ಕ್ಷೇತ್ರದಲ್ಲಿ ಹೆಬ್ಬಾಳಕರ ಅವರು ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದು, ವಿವಿಧ ಕಾರ್ಯಕ್ರಮಗಳ ಮೂಲಕ ಮತದಾರರಿಗೆ ಕಾಣಿಕೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಚುನಾವಣೆ ವೇಳೆ ನೀವು ಕಾಂಗ್ರೆಸ್‌ಗೆ ಮತ ನೀಡುವಂತೆ ತೆಂಗಿನಕಾಯಿ ಮೇಲೆ ಕೈ ಇಟ್ಟು ಮತದಾರರಿಂದ ಆಣೆ ಪ್ರಮಾಣ ಮಾಡಿಸಲಾಗುತ್ತಿದೆ. ಈ ತೆಂಗಿನಕಾಯಿ ಪ್ರಮಾಣ ಕ್ಷೇತ್ರದಲ್ಲಿ ಹೊಸ ಮಿಂಚಿನ ಸಂಚಾರವನ್ನೇ ಮೂಡಿಸಿದ್ದು, ರಾಜ್ಯದ ಗಮನವನ್ನೂ ಸೆಳೆದಿದೆ.

ಮಂತ್ರಿಗಿರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ನಾನು ಬಿಜೆಪಿ ಬಿಡಲ್ಲ: ರಮೇಶ್‌ ಜಾರಕಿಹೊಳಿ

ಕ್ಷೇತ್ರದ ಶಾಸಕರ ಬೆಂಬಲಿಗರು, ಕ್ಷೇತ್ರದಲ್ಲಿ ಸಂಚರಿಸಿ, ತೆಂಗಿನಕಾಯಿ ಮೇಲೆ ಕೈಇಟ್ಟು ಮತದಾರರಿಂದ ಆಣೆ ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ನಾಯಕರು ನೇರವಾಗಿಯೇ ಆರೋಪಿಸುತ್ತ ಬಂದಿದ್ದರು. ಹೊನ್ನಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಅವರ ಸಮ್ಮುಖದಲ್ಲೇ ಬಿಜೆಪಿ ನಾಯಕ ಧನಂಜಯ ಜಾಧವ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತೆಂಗಿನಕಾಯಿ ಒಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತೆಂಗಿನಕಾಯಿ ಮೇಲೆ ಕೈಇಟ್ಟು ಆಣೆ ಪ್ರಮಾಣ ಮಾಡಿಸುವವರ ತಲೆ ಮೇಲೆ ತೆಂಗಿನಕಾಯಿ ಒಡೆಯುವಂತೆಯೂ ಘೋಷಣೆ ಕೂಗಿದ್ದರು. ಈ ನಡುವೆ ಮಾಜಿ ಶಾಸಕ, ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ವೇಳೆಯೂ ಮತದಾರರಿಗೆ ಗಿಫ್‌್ಟಹಂಚಲಾಗಿತ್ತು. ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕಾರಣಿಗಳ ಕಾಣಿಕೆ ಹಂಚಿಕೆ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆಗಿ ವೈರಲ್‌ ಆಗಿದ್ದವು.

ರಮೇಶ ಆಪ್ತನಿಂದಲೂ ಕಾಣಿಕೆ ಆರಂಭ:

ತೆಂಗಿನಕಾಯಿ ಸದ್ದಿನೊಳಗೆ ಇದೀಗ ಕ್ಷೇತ್ರದಲ್ಲಿ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ನಾಗೇಶ ಮನ್ನೋಳಕರ ಅವರು ಹಿಂಡಲಗಾ ಗ್ರಾಮದಲ್ಲಿ ಹಳದಿ, ಕುಂಕುಮ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಮಹಿಳಾಮಣಿಗಳಿಗೆ ಸೀರೆ ಜೊತೆಗೆ ಒಂದು ಹಾಟ್‌ಬಾಕ್ಸ್‌ ಕಾಣಿಕೆ ಹಂಚಿಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಣಿಕೆ ರಾಜಕೀಯ ಮುಂದುವರೆದಿದೆ. ಹೀಗೆ ಮತದಾರರನ್ನು ಸೆಳೆಯಲು ರಾಜಕಾರಣಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಸಿದ್ದು, ಎಂಬಿಪಾ ಸುಳ್ಳು ಹೇಳೋದು ಬಿಡಲಿ: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಕ್ಷೇತ್ರದಲ್ಲಿ ತಾವೇ ಅಧಿಪತ್ಯ ಸಾಧಿಸಬೇಕು ಎಂಬ ಹಿನ್ನೆಲೆಯಲ್ಲಿ ಮತದಾರರನ್ನು ಈಗಿನಿಂದಲೇ ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ಆರಂಭಿಸಿದ್ದಾರೆ. ಆದರೆ, ಅದರಲ್ಲಿ ಯಾರಿಗೆ ಮತದಾರ ಗೆಲುವಿನ ಕಾಣಿಕೆ ಕೊಡುತ್ತಾನೆ ಎಂಬುವುದು ಬಹಳ ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ