
ಚನ್ನರಾಯಪಟ್ಟಣ(ಡಿ.03): ಈ ಜಿಲ್ಲೆಯಲ್ಲಿ ನನಗಿಂತ ತಮಟೆ ಹೊಡೆಯುವ ಶಾಸಕ ಇದ್ದರೆ ಅವರ ಪರ ಹೇಳಿ. ಇಲ್ಲವೇ ನನ್ನನ್ನೇ ಮಂತ್ರಿ ಮಾಡುವಂತೆ ವರಿಷ್ಠರ ಬಳಿ ನನ್ನ ಪರ ಮಾತನಾಡಿ, ನಾನು ಗೂಟದ ಕಾರಿನಲ್ಲಿ ಬಂದರೆ ಹೇಗಿರುತ್ತೆ ಅಂತ ನೋಡಿ ಎಂದು ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಹೇಳಿಕೊಂಡಿದ್ದಾರೆ.
ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಸ್ವಾಭಿಮಾನಿ ಸಮಾವೇಶದ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನನಗೆ ಅಧಿಕಾರ (ಸಚಿವ ಸ್ಥಾನದ) ಕೊಟ್ರೆ ಯಾಕೆ ಪಕ್ಷ ಸಂಘಟನೆ ಆಗಲ್ಲ. ನೀವೆಲ್ಲ ಈ ಬಗ್ಗೆ ಮಾತನಾಡಿ ಎಂದು ಮಾಜಿ ಶಾಸಕರಾದ ಎಂ. ಎ.ಗೋಪಾಲಸ್ವಾಮಿ ಮತ್ತು ಸಿ.ಎಸ್.ಪುಟ್ಟೇಗೌಡರನ್ನು ಆಗ್ರಹಿಸಿದರು.
ಸಿದ್ದರಾಮಯ್ಯ ಕೂಡ ಕಾಂಗ್ರೆಸ್ಗೆ ಹೊಸಬರಾಗಿದ್ದರು, ಅವರೇ ಸಿಎಂ ಆಗಿಲ್ಲವೇ: ಶಾಸಕ ಬಾಲಕೃಷ್ಣ
ನನ್ನನ್ನು ಸೋಲಿಸುವುದಕ್ಕೆ ದೇವೇಗೌಡರು ವೀಲ್ ಚೇರ್ನಲ್ಲಿ ಹಳ್ಳಿ ಹಳ್ಳಿಗೆ ಹೋದರು. ಅವನನ್ನು ಸೋಲಿಸಿ ಎಂದ ಹೇಳಿದರು. ಆದರೆ ಜನರು ಸೋಲಿಸಿದ್ರಾ? ಎಂದು ದೇವೇಗೌಡರ ಭಾಷಣದ ಶೈಲಿಯನ್ನು ಅಣುಕಿಸಿದರು. ಕೈ ಮಸಿಕೆಯನ ವ್ಯವಹಾರವೆಲ್ಲ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡ ಬೇಕು. ನಾನು ಗೂಟದ ಕಾರಲ್ಲಿ ಬಂದರೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಹೇಗಿರುತ್ತದೆ ಅಂತ ನೋಡಿ. ಜಿಲ್ಲೆ ಯಲ್ಲಿ ಪಕ್ಷದಿಂದ ನಾನೊಬ್ಬನೇ ಗೆದ್ದಿರುವುದು ಎಂದರು.
ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ ಮಾತನಾಡಿ, ಡಿ.5 ರಂದು ಹಾಸನದಲ್ಲಿ ನಡೆಯುವ ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶಕ್ಕೆ ತಾಲೂಕಿನಿಂದ 250 ಬಸ್ಗಳನ್ನು ಪಂಚಾಯಿತಿ ಬಿಡಲಾಗುತ್ತಿದೆ. ಇದಕ್ಕೆ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದ್ದು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸಮಾವೇಶವನ್ನು ಮಾಡುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಅಪಪ್ರಚಾರವನ್ನು ಜನರಿಗೆ ತಿಳಿಸಿ ನಮ್ಮ ಸರ್ಕಾರದ ಸಾಧನೆಯನ್ನು ಜನರಿಗೆ ಹೇಳು ತೇವೆ.ಹೆಚ್ಚಿನಸಂಖ್ಯೆಯಲ್ಲಿ ಜನರನ್ನು ಕಾರ್ಯಕ್ರಮಕ್ಕೆ ಕರೆತರಲು ಮುಂದಾಗಬೇಕು ಎಂದು ತಿಳಿಸಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಮುಂಬರುವ ಜಿಪಂ, ತಾಪಂ ಚುನಾವಣೆಗೆ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಚುನಾವಣೆಯಲ್ಲಿ ಹೆಚ್ಚು ಜನ ಗೆದ್ದರೆ ವಿಧಾನಸಭೆ ಗೆಲ್ಲುವುದು ಖಚಿತ. ನಾನೂ ಕೂಡ ಜಿಪಂ ಸದಸ್ಯನಾಗಿ ಸಂಸದನಾಗಿರುವುದು. ಆದ್ದರಿಂದ ಪಕ್ಷದ ಮುಖಂಡರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ತಿಳಿಸಿ ಮುಂಬರುವ ಚುನಾವಣೆಗೆ ಸಿದ್ಧರಾಗಬೇಕು ಎಂದರು.
ಸಚಿವ ಸಂಪುಟ ಪುನಾರಚನೆ: ಮಂತ್ರಿಗಿರಿಗಾಗಿ ಬಹಿರಂಗವಾಗಿಯೇ ಕಾಂಗ್ರೆಸ್ ಶಾಸಕರ ಪೈಪೋಟಿ
ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್ ಗೌಡ ಮಾತನಾಡಿ, 82 ಸಾವಿರ ಜನ ತಾಲೂಕಿನಲ್ಲಿ ಮಹಿಳಾ ಫಲಾನುಭವಿಗಳಿದ್ದು ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಿವೆ ಎಂಬುದಕ್ಕೆ ಕ್ಷೇತ್ರದ ಉಪಚುನಾವಣೆಯ ಫಲಿತಾಂಶಗಳೇ ಕಾರಣ. ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಕರೆತರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಎ.ಮಂಜಣ್ಣ, ವೀರಶೈವ ಲಿಂಗಾಯಿತ ಸಮಾಜದ ತಾಲೂಕು ಅಧ್ಯಕ್ಷ ಸಂತೇಶಿವರ ರಾಜಣ್ಣ, ಬಿಎಂಆರ್ ಮಂಜಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್. ಡಿ. ಕಿಶೋರ್, ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುರೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್. ಮೂರ್ತಿ, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಯುವರಾಜ್ ಮತ್ತಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.