
ವಿಧಾನ ಪರಿಷತ್ (ಮಾ.18): ಪಾನ್ ಅಥವಾ ಪಾನ್ ಮಸಾಲದಂತಹ ಪದಾರ್ಥಗಳಲ್ಲಿ ಅಡಕೆಯನ್ನು ಒಂದು ಅಂಶವಾಗಿ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ಹಾಗೂ ತಂಬಾಕು ಸೇರಿಸದೇ ಇದ್ದರೆ ಹಾನಿಕಾರಕವಲ್ಲ ಎಂದು ಎಂ.ಎಸ್.ರಾಮಯ್ಯ ವಿವಿ ಸಂಶೋಧನಾ ವರದಿ ಹೇಳಿದೆ. ಅದೇ ರೀತಿ ಅಡಕೆ ತಟ್ಟೆಗಳನ್ನು ಬಳಸಿದಲ್ಲಿ ಆರೋಗ್ಯಕ್ಕೆ ಅತ್ಯಂತ ಕಡಿಮೆ ಅಪಾಯವಿದೆ ಎಂದು ಕೇರಳದ ಸಂಸ್ಥೆಯಿಂದ ಮಧ್ಯಂತರ ವರದಿ ಸಲ್ಲಿಕೆಯಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪರ ಉತ್ತರಿಸಿದ ಅವರು, ಅಡಕೆ ಕುರಿತ ಸಂಶೋಧನೆ ನಡೆಯುತ್ತಿದ್ದು ಅಂತಿಮ ವರದಿ ಬಂದ ನಂತರ ಅಡಕೆ ಕ್ಯಾನ್ಸರ್ ಕಾರಕವಲ್ಲವೆಂದು ಸರ್ಕಾರದಿಂದಲೇ ಅಗತ್ಯ ಪ್ರಚಾರ ಮಾಡಲಾಗುವುದು ಎಂದು ಭರವಸೆ ನೀಡಿದರು. ಅಡಕೆಗೆ ಅಂಟಿದ ಕಳಂಕ ತೊಡೆದು ಹಾಕಲು ‘ಅಡಕೆ ಬಳಕೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು’ ಕುರಿತು ಸಂಶೋಧನೆ ಜವಾಬ್ದಾರಿ ಬೆಂಗಳೂರಿನ ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯಕ್ಕೆ ವಹಿಸಲಾಗಿತ್ತು.
31 ಲಕ್ಷ ರು. ವೆಚ್ಚದಲ್ಲಿ ಸಂಶೋಧನೆ ಕೈಗೊಳ್ಳಲಾಗಿದೆ. ಸಂಸ್ಥೆಯು ಪಾನ್ ಅಥವಾ ಪಾನ್ ಮಸಾಲದಂಥ ಪದಾರ್ಥಗಳಲ್ಲಿ ಅಡಕೆಯನ್ನು ಒಂದು ಅಂಶವಾಗಿ ಬಳಸಿದರೂ ಅಲ್ಪಪ್ರಮಾಣದಲ್ಲಿ ಸೇವಿಸಿದರೆ ಹಾಗೂ ತಂಬಾಕು ಸೇರಿಸದಿದ್ದರೆ ಹಾನಿಕಾರಕವಲ್ಲ ಎಂದು ವರದಿ ಮಾಡಿದೆ. ಒಟ್ಟಾರೆ ಈ ಕುರಿತು ಸಂಶೋಧನೆಯ ಅಂತಿಮ ವರದಿ ಬಂದ ನಂತರ ಅಡಕೆ ಕ್ಯಾನ್ಸರ್ಕಾರಕವಲ್ಲ ಎಂಬ ಬಗ್ಗೆ ಸರ್ಕಾರದಿಂದ ಅಗತ್ಯವಿರುವ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕಳೆದ 2006ರಿಂದ 2010 ಅವಧಿಯಲ್ಲಿ 2.98 ಕೋಟಿ ಟನ್ ಕಬ್ಬಿಣದ ಅದಿರು ಅಕ್ರಮ ಸಾಗಾಟದಿಂದ 12,228 ಕೋಟಿ ರು. ನಷ್ಟದ ಸಂಬಂಧ ಸಿಬಿಐ ಹಾಗೂ ಎಸ್ಐಟಿಯಿಂದ ತನಿಖೆ ನಡೆಯುತ್ತಿದ್ದು, ನಷ್ಟ ವಸೂಲಿಗೆ ನಿವೃತ್ತ ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ, ತನಿಖಾ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಉಂಟಾದ ನಷ್ಟ ವಸೂಲಾತಿಗೆ ರಾಜ್ಯ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ. ಕೃಷ್ಣರಾವ್ ಅವರನ್ನು ವಸೂಲಾತಿ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಎರಡು ಪ್ರಕರಣಗಲ್ಲಿ ನಷ್ಟ ವಸೂಲಾತಿಗೆ ಕ್ರಮ ಜರುಗಿಸಿದ್ದು, ಈ ಪ್ರಕರಣಗಳಲ್ಲಿ ಗುತ್ತಿಗೆದಾರರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅದೇ ರೀತಿ ಜೆಎಸ್ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಇನ್ವಾಯ್ಸ್ ಇಲ್ಲದೇ 611 ಮತ್ತು 889 ಟನ್ ಪಡೆದಿರುವುದು ದೃಢಪಟ್ಟಿದ್ದು, ಈ ಸಂಬಂಧ 34,55,672 ರು.ಗಳನ್ನು ವಸೂಲು ಮಾಡಲಾಗಿದೆ. ಉಳಿದ ಕಂಪನಿಗಳಿಂದ ಬಾಕಿ ನಷ್ಟ ವಸೂಲಾತಿಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.