
ಬೆಂಗಳೂರು, (ಜ.31): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar (ನಿವಾಸಕ್ಕೆ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಆನಂದ್ ಸಿಂಗ್ (Anand Singh) ಅವರು, ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಬಾರದಾ ಎಂದು ಪ್ರಶ್ನಿಸಿದ್ದಾರೆ.
ಯಾಕೆ ಹೋಗಿದ್ದೆ ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಅದೇ ವಿಚಾರದ ಬಗ್ಗೆ ಮತ್ತೆ ನಾನು ಸಹ ಹೇಳಬೇಕಾ? ನಾನು ಎಲ್ಲಿಯೂ ಅಸಮಾಧಾನ ಇದೆ ಎಂದು ಹೇಳಿಕೊಂಡಿಲ್ಲ. ತುಂಗಾ ಆರತಿ ಮಾದರಿಯಲ್ಲಿ ಅವರ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದ್ದು, ಇದರ ಬಗ್ಗೆ ಚರ್ಚೆ ಮಾಡಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
Anand Singh-DKS Meeting ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಆನಂದ್ ಸಿಂಗ್
ಮುನಿರೆಡ್ಡಿ ಪಾಳ್ಯದಲ್ಲಿ ನಮ್ಮ ಅಳಿಯನ ಮನೆಗೆ ತಿಂಡಿಗೆ ಹೋಗಿದ್ದೆ, ಖಾಸಗಿ ಕಾರಿನಲ್ಲಿ ಹೋಗಿದ್ದೆ, ಈ ವೇಳೆ ಡಿಕೆ ಶಿವಕುಮಾರ್ ಅವರು ಫೋನ್ ಮಾಡಿದ್ರು, ಕಾವೇರಿ ಆರತಿ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ರು, ಮನೆಗೆ ಬನ್ನಿ ಮಾತಾಡೋಣ ಅಂದ್ರು. ಹೀಗಾಗಿ ಖಾಸಗಿ ಕಾರಿನಲ್ಲೆ ಹೋಗಿದ್ದೆ. ಅದನ್ನೆ ಮಾಧ್ಯಮಗಳಲ್ಲಿ ದೊಡ್ಡ ವಿಚಾರ ಮಾಡಲಾಗಿದೆ ಎಂದು ಹೇಳಿದರು.
ಆ ರೀತಿ ಏನು ಇಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ವಿಚಾರವಾಗಿ ನನಗೆ ಯಾವುದೇ ಅಸಮಾಧಾನ ಇಲ್ಲ, ಅಸಮಧಾನ ಇದೆ ಎಂದು ನಾನು ಹೇಳಿದ್ದೇನಾ? ನಿವೇ ಏನೇನೊ ಮಾಡಿದ್ರೆ, ಕೊಪ್ಪಳಕ್ಕೆ ಸಂತೋಷದಿಂದ ಹೋಗಿದ್ದೇನೆ ಎಂದು ಮಾಧ್ಯಮದವರನ್ನ ಪ್ರಶ್ನಿಸಿದರು.
ಮಾಧ್ಯಮಗಳು ಈ ವಿಚಾರವನ್ನ ಈ ರೀತಿ ಬಿಂಬಿಸ್ತೀರಾ ಎಂದು ಗೊತ್ತಿದ್ರೆ, ನಾನು ಹೋಗುತ್ತಿರಲಿಲ್ಲ.ಸಂಗಮದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಮಾಡುವ ವಿಚಾರ ಬಿಟ್ರೆ, ರಾಜಕೀಯವಾಗಿ ಏನು ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.
ಡಿಕೆಶಿ ಹೇಳಿದ್ದೇನು?
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಯೋಜನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.
'ತುಂಗಾ ಆರತಿ ಕಾರ್ಯಕ್ರಮವನ್ನು ನೋಡಿದ್ದೇನೆ. ತಮ್ಮ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಉದ್ದೇಶದಿಂದ ಮೇಕೆದಾಟು ಬಳಿಯ ಸಂಗಮದಲ್ಲಿ ಅದೇ ರೀತಿಯ ಕಾರ್ಯಕ್ರಮ ಮಾಡಲು ಸಚಿವರನ್ನು ಮನವಿ ಮಾಡಿದ್ದೇನೆ. ತಂಡವೊಂದನ್ನು ಕಳುಹಿಸುವುದಾಗಿ ಸಚಿವರು ತಿಳಿಸಿರುವುದಾಗಿ ಡಿಕೆ ಶಿವಕುಮಾರ್ ಹೇಳಿದರು.
ಆನಂದ್ ಸಿಂಗ್ ಜೊತೆಗಿನ ಸಭೆ ಕುರಿತಂತೆ ಎದ್ದಿರುವ ಎಲ್ಲಾ ರಾಜಕೀಯ ಊಹಾಪೋಹಗಳನ್ನು ತಳ್ಳಿ ಹಾಕಿದ ಶಿವಕುಮಾರ್ , ಆನಂದ್ ಸಿಂಗ್ ಸಚಿವರು, ಅವರು ನಮ್ಮ ಮನೆಗೆ ಮುಕ್ತವಾಗಿ ಬಂದರೆ, ರಾಜಕೀಯ ನಡೆಯೊಂದಿಗೆ ಹೇಗೆ ಬರಲು ಸಾಧ್ಯ? ಯಾರೂ ಕೂಡಾ ಹೀಗೆ ಮಾಡುವುದಿಲ್ಲ, ಹೋಟೆಲ್, ಅಥವಾ ಅತಿಥಿ ಗೃಹಗಳಲ್ಲಿ ರಾಜಕಾರಣ ನಡೆಯುತ್ತದೆ. ಮನೆಯಲ್ಲಿ ನಡೆಯಲ್ಲ ಎಂದರು. ನಾವೆಲ್ಲರೂ ಹೆಚ್ಚಿನ ಕಾಮನ್ ಸೆನ್ಸ್ ಹೊಂದಿರಬೇಕು, ಪ್ರಸ್ತಾವಿತ ಕಾರ್ಯಕ್ರಮದ ಬಗ್ಗೆ ವಿವರಣೆ ಪಡೆಯಲು ವೈಯಕ್ತಿಕವಾಗಿ ಅವರು ಬಂದಿದ್ದಾರೆ. ಅದನ್ನು ಹೊರತುಪಡಿಸಿದರೆ ಬೇರೆ ಏನೂ ಇಲ್ಲ ಎಂದು ಅವರು ಹೇಳಿದರು.
ಡಿಕೆಶಿ-ಆನಂದ್ ಸಿಂಗ್ ಭೇಟಿಗೆ ಶ್ರೀರಾಮುಲು ಪ್ರತಿಕ್ರಿಯೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಚಿವ ಆನಂದ್ ಸಿಂಗ್ ಭೇಟಿ ವಿಚಾರದಲ್ಲಿ ಯಾವುದೇ ತಪ್ಪು ಹುಡುಕುವ ಅಗತ್ಯವಿಲ್ಲ ಎಂದು ಕರ್ನಾಟಕ ಸಾರಿಗೆ ಇಲಾಖೆ ಮತ್ತು ಬುಡಕಟ್ಟು ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ಡಿಕೆ ಶಿವಕುಮಾರ್ ಸಚಿವ ಆನಂದ್ ಸಿಂಗ್ ಭೇಟಿ ವಿಚಾರದಲ್ಲಿ ಯಾವುದೇ ತಪ್ಪು ಹುಡುಕುವ ಅಗತ್ಯವಿಲ್ಲ. ಇದೊಂದು ಸೌಹಾರ್ದಯುತ ಭೇಟಿಯಾಗಿದೆ ಅಂತ ನನ್ನ ಭಾವನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಆನಂದ್ ಸಿಂಗ್ ಪ್ರಮುಖರಾಗಿದ್ದು, ಅವರಿಂದಲೇ ನಾವೆಲ್ಲ ಮಂತ್ರಿಯಾಗಿರುವುದು ಎಂದರು.
ಬಿಜೆಪಿಯ ಕೆಲ ಮುಖಂಡರು ತಮ್ಮ ಸಂಪರ್ಕದಲ್ಲಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿರುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇತ್ತೀಚಿಗೆ ಹೇಳಿಕೆ ನೀಡಿದ್ದರು. ಈ ಮಧ್ಯೆಯೇ ಆನಂದ್ ಸಿಂಗ್, ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಭೇಟಿಯಾಗಿರುವುದಾಗಿ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.