ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಬೆಳಗಾವಿ ಸ್ಪರ್ಧೆಗೆ ಒಪ್ಪಿಗೆ: ಜಗದೀಶ್‌ ಶೆಟ್ಟರ್‌

By Govindaraj SFirst Published Mar 16, 2024, 8:45 AM IST
Highlights

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ವರಿಷ್ಠರು ಸೂಚಿಸಿದ್ದಾರೆ. ಅದಕ್ಕೆ ನಾನೂ ಒಪ್ಪಿಗೆ ಸೂಚಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹೇಳಿದರು. ಬೆಂಗಳೂರಿನಿಂದ ನಗರಕ್ಕೆ ಬಂದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಹುಬ್ಬಳ್ಳಿ (ಮಾ.16): ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ವರಿಷ್ಠರು ಸೂಚಿಸಿದ್ದಾರೆ. ಅದಕ್ಕೆ ನಾನೂ ಒಪ್ಪಿಗೆ ಸೂಚಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹೇಳಿದರು. ಬೆಂಗಳೂರಿನಿಂದ ನಗರಕ್ಕೆ ಬಂದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಬೆಳಗಾವಿ ನಾಯಕರ ಜತೆಗೂ ಮಾತುಕತೆ ನಡೆಸಿದ್ದೇನೆ. ಅವರು ಸಹ ಒಪ್ಪಿಗೆ ಸೂಚಿಸಿ ಆತ್ಮೀಯವಾಗಿ ಆಹ್ವಾನ ನೀಡಿದ್ದಾರೆ. ಈಹಿಂದೆ ಬೆಳಗಾವಿ ಉಸ್ತುವಾರಿ ಸಚಿವನಾಗಿ, ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸಿದ್ದೇನೆ. ಬೆಳಗಾವಿ ಜೊತೆಗೆ ಉತ್ತಮ ಒಡನಾಟ ಹೊಂದಿದ್ದೇನೆ. 

ಬೆಳಗಾವಿ ಕ್ಷೇತ್ರದಲ್ಲಿ ಸಾಕಷ್ಟು ಓಡಾಟ ನಡೆಸಿದ್ದೇನೆ ಎಂದ ಅವರು, ತಮ್ಮ ಬೀಗರು ಹಾಗೂ ಬೆಳಗಾವಿ ನಾಯಕರ ಜತೆಗೆ ಚರ್ಚೆ ನಡೆಸಿಯೇ ಬೆಳಗಾವಿ ಕ್ಷೇತ್ರಕ್ಕೆ ಹೋಗಲು ಒಪ್ಪಿಕೊಂಡಿದ್ದೇನೆ ಎಂದರು. ಬೆಳಗಾವಿಯಲ್ಲಿ ಕಳೆದ ಬಾರಿ ಗೆಲುವಿನ ಅಂತರ ಕಡಿಮೆಯಾದ ಪ್ರಶ್ನೆಗೆ, ಉಪಚುನಾವಣೆಯಲ್ಲಿ ಎಂಇಎಸ್‌ ಸ್ಪರ್ಧೆ ಮಾಡಿತ್ತು. ಹೀಗಾಗಿ ಗೆಲುವಿನ ಅಂತರ ಕಡಿಮೆಯಾಗಿತ್ತು. ಆದರೆ ಬೆಳಗಾವಿ ಮರಾಠಾ ಸಮುದಾಯದ ನಾಯಕರು ಮೋದಿ ನಾಯಕತ್ವ, ಹಿಂದುತ್ವದ ಪರವಾಗಿ ನಿಲ್ಲುತ್ತಾರೆ. ಹೀಗಾಗಿ ಈಗ ಆ ಸಮಸ್ಯೆ ಎದುರಾಗುವುದಿಲ್ಲ ಎಂದರು.

ಈಶ್ವರಪ್ಪ ಅತೃಪ್ತಿ ಶಮನವಾಗುತ್ತೆ: ಪುತ್ರನಿಗೆ ಟಿಕೆಟ್‌ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಈಶ್ವರಪ್ಪ ಜತೆಗೆ ವರಿಷ್ಠರು ಮಾತನಾಡುತ್ತಾರೆ. ಪಕ್ಷದಲ್ಲಿ ಅತಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಈ ಕಾರಣಕ್ಕೆ ಟಿಕೆಟ್‌ ಮಿಸ್‌ ಆಗಿದೆ. ಟಿಕೆಟ್‌ ಸಿಗದೇ ಇದ್ದಾಗ ಈ ರೀತಿಯ ಅಸಮಾಧಾನ ಸಹಜ. ಪಕ್ಷದ ವರಿಷ್ಠರು ಈಶ್ವರಪ್ಪ ಅವರ ಅತೃಪ್ತಿ ಶಮನ ಮಾಡುತ್ತಾರೆ. ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಇದು ಅವರ ಭಾವನಾತ್ಮಕ ಹೇಳಿಕೆ ಅಷ್ಟೇ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಸಿದ್ದರಾಮಯ್ಯ ಬಗ್ಗೆ ಅವಹೇಳನ: ಸಂಸದ ಅನಂತ್‌ ಕೇಸಿಗೆ ಹೈಕೋರ್ಟ್‌ ತಡೆ

ಈಶ್ವರಪ್ಪ ಅವರು ಸ್ವತಂತ್ರ ಸ್ಪರ್ಧೆ ಬಗ್ಗೆ ನಾನೇನು ಮಾತನಾಡುವುದಕ್ಕೆ ಆಗಲ್ಲ. ಆದರೆ ಚುನಾವಣೆ ದಿನಾಂಕ ಇನ್ನು ಪ್ರಕಟಗೊಂಡಿಲ್ಲ. ಪಕ್ಷದ ವರಿಷ್ಠರು ಎಲ್ಲವನ್ನು ಗಮನಿಸುತ್ತಾರೆ. ಅವರ ಜತೆಗೆ ಮಾತನಾಡಿ ಅತೃಪ್ತಿ ಶಮನ ಮಾಡುತ್ತಾರೆ. ಕೆಲ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ . ಅಂತೀಮವಾಗಿ ಹೈಕಮಾಂಡ್‌ ಪರಿಹಾರ ಕಂಡುಹಿಡಿಯುತ್ತದೆ ಎಂಬ ವಿಶ್ವಾಸವಿದೆ. ಅದೆಲ್ಲವನ್ನು ವರಿಷ್ಠರು ಬಗೆಹರಿಸುತ್ತಾರೆ ಎಂದರು.

click me!