'ಗೋಲಿಬಾರ್‌ ಘಟನೆ ಬಳಿಕ ಸಿಎಂಗೆ ಜೀವ ಬೆದರಿಕೆ ಇತ್ತು'

By Kannadaprabha NewsFirst Published Feb 20, 2020, 7:25 AM IST
Highlights

ಗೋಲಿಬಾರ್‌ ಘಟನೆ ಬಳಿಕ ಸಿಎಂಗೆ ಜೀವ ಬೆದರಿಕೆ ಇತ್ತು| ನನಗೂ ಕರೆ ಬಂದಿತ್ತು, ಯಾರಿಗೂ ಹೇಳಿರಲಿಲ್ಲ| ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು[ಫೆ.20]: ಮಂಗಳೂರು ಗೋಲಿಬಾರ್‌ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮೇಲೆ ಜೀವ ಬೆದರಿಕೆ ಬಂದಿತ್ತು. ಆದರೆ, ಈ ವಿಚಾರವನ್ನು ಯಾರಿಗೂ ಬಹಿರಂಗಪಡಿಸಿರಲಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬುಧವಾರ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ತೆರೆ ಮರೆಯಲ್ಲಿ ಶರತ್‌ ಮಡಿವಾಳ, ಮಕ್ಕಳ್‌ ರವಿ ಸೇರಿ ಹಲವರ ಹತ್ಯೆ ಮಾಡಿದ ಸಂಘಟನೆಗಳು ಸಿಎಎ ಹೋರಾಟದ ನೆಪ ಇಟ್ಟುಕೊಂಡು ಸಮಾಜದಲ್ಲಿ ಹಿಂಸಾಚಾರ ನಡೆಸುತ್ತಿವೆ.

ಮಂಗಳೂರು ಗಲಭೆ ಬಳಿಕ ನನಗೆ ಸೌದಿ ಅರೇಬಿಯಾ, ದುಬೈ ಸೇರಿ ನಾನಾ ಕಡೆಯಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ನನಗೆ ಮಾತ್ರವಲ್ಲದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೂ ಜೀವ ಬೆದರಿಕೆ ಬಂದಿದೆ ಎಂದು ಗಂಭೀರ ವಿಚಾರ ಬಿಚ್ಚಿಟ್ಟರು.

ಯು.ಟಿ.ಖಾದರ್‌ ಎಚ್ಚರವಾಗಿರಲಿ:

ಕೇವಲ ನಾನು ಹಾಗೂ ಯಡಿಯೂರಪ್ಪ ಮಾತ್ರವಲ್ಲ ಯು.ಟಿ. ಖಾದರ್‌ ಬಗ್ಗೆಯೂ ಹಲವು ವಿಚಾರಗಳು ನನ್ನ ಗಮನಕ್ಕೆ ಬಂದಿವೆ. ಹೀಗಾಗಿ ಅವರಿಗೆ ಎಚ್ಚರವಾಗಿರಲು ಸೂಚನೆ ನೀಡಿದ್ದೇನೆ. ಅಲ್ಲದೆ ಅವರ ಸಹೋದರನನ್ನು ಕರೆದು ಚರ್ಚೆ ಮಾಡಿದ್ದೇನೆ ಎಂದೂ ಸಹ ಹೇಳಿದರು.

ಮಾಜಿ ಸಚಿವ ತನ್ವೀರ್‌ ಸೇಠ್‌ ಅವರು ಪಿಎಫ್‌ಐ ಹಾಗೂ ಎಸ್‌ಡಿಪಿಐ ಮೇಲಿನ ಪ್ರಕರಣ ಹಿಂಪಡೆಯುವಂತೆ ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಅದೇ ಪಿಎಫ್‌ಐ ಸದಸ್ಯರೊಬ್ಬರು ತನ್ವೀರ್‌ ಸೇಠ್‌ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈವರೆಗೂ ಪರದೆ ಮರೆಯಲ್ಲಿ ಕೆಲಸ ಮಾಡುತ್ತಿದ್ದ ಸಂಘಟನೆಗಳು ಇದೀಗ ಸಿಎಎ ನೆಪ ಇಟ್ಟುಕೊಂಡು ಉದ್ದೇಶಪೂರ್ವಕವಾಗಿ ಹಿಂಸಾಚಾರ ನಡೆಸುತ್ತಿವೆ. ಇವುಗಳನ್ನು ಸರ್ಕಾರ ಹತ್ತಿಕ್ಕಲಿದೆ ಎಂದು ಎಚ್ಚರಿಸಿದರು.

click me!