ಪ್ರಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ ಹಿಂದಿಕ್ಕಿದ ಆಮ್‌ ಆದ್ಮಿ..!

Published : Oct 12, 2022, 11:00 AM IST
ಪ್ರಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ ಹಿಂದಿಕ್ಕಿದ ಆಮ್‌ ಆದ್ಮಿ..!

ಸಾರಾಂಶ

ಕಾಂಗ್ರೆಸ್‌, ಬಿಜೆಪಿಯಲ್ಲಿ ಕಾವೇರದ ಪ್ರಚಾರ, ಪ್ರಚಾರ ಭರಾಟೆಯಲ್ಲಿ ಆಪ್‌, ಚುನಾವಣೆ ಪ್ರಚಾರ ಕಾರ್ಯದಲ್ಲಿ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಆಮ್‌ ಆದ್ಮಿ ಪಕ್ಷ ನಂಬರ್‌ ಒನ್‌

ರುದ್ರಪ್ಪ ಆಸಂಗಿ

ವಿಜಯಪುರ(ಅ.12):  ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಅಭ್ಯರ್ಥಿಗಳನ್ನು ಫೈನಲ್‌ ಮಾಡುವಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಾಗೂ ಇತರ ನಾನಾ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿರುವಾಗಲೇ ಆಮ್‌ ಆದ್ಮಿ ಪಕ್ಷ ಈಗಾಗಲೇ ಬಹಿರಂಗವಾಗಿ ಪ್ರಚಾರಕ್ಕಿಳಿದಿದೆ. ಸಾಮಾಜಿಕ ಜಾಲತಾಣಗಳನ್ನು ಯಥೇಚ್ಚವಾಗಿ ಬಳಸಿಕೊಂಡು ಪ್ರಚಾರದಲ್ಲಿ ಎಲ್ಲ ಪಕ್ಷಗಳಿಂದ ಒಂದು ಹೆಜ್ಜೆ ಮುಂದಿದೆ.

ವಿಜಯಪುರ ಮಹಾನಗರ ಪಾಲಿಕೆಯ ಒಟ್ಟು 35 ವಾರ್ಡ್‌ಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಆಮ್‌ ಆದ್ಮಿ ಪಕ್ಷ, ಎಐಎಂಐಎಂ, ಕೆಆರ್‌ಎಸ್‌ ಮುಂತಾದ ಪಕ್ಷಗಳು ಇನ್ನು ಟಿಕೆಟ್‌ ಫೈನಲ್‌ ಮಾಡಿ ಪಟ್ಟಿ ಬಿಡುಗಡೆ ಮಾಡಿಲ್ಲ. ಆದಾಗ್ಯೂ ಆಯಾ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಟಿಕೆಟ್‌ ಸಿಗುತ್ತದೆ ಎಂಬ ಆಶಾ ಭಾವನೆಯಿಂದ ಈಗಾಗಲೇ ಬಹುತೇಕ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಪ್ರಚಾರಕ್ಕಿಳಿದಿದ್ದಾರೆ. ಮನೆ ಮನೆಗೆ ತೆರಳಿ ಪ್ರಚಾರ ನಡೆಸುವುದು, ಬ್ಯಾನರ್‌, ಪೋಸ್ಟರ್‌ ಹಚ್ಚುವುದು, ಕರಪತ್ರ ಹಂಚುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಸೋಲಿಸುವುದು ಶತಸಿದ್ಧ: ಆಪ್‌ ಮುಖಂಡ ಅರವಿಂದ

ಆಮ್‌ ಆದ್ಮಿ ಪಕ್ಷ ಪಾಲಿಕೆಯ ಎಲ್ಲ 35 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿ ಕಣಕ್ಕಿಳಿಸಲು ಸಮರ್ಥ ಹಾಗೂ ಅರ್ಹ ಅಭ್ಯರ್ಥಿಗಳನ್ನು ಹುಡುಕಲು ಪ್ರತಿ ವಾರ್ಡ್‌ಗೆ ತೆರಳಿ ಸಮೀಕ್ಷೆ ನಡೆಸಿದ್ದಾರೆ. ನಾಳೆ, ನಾಡಿದ್ದು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ತರಾತುರಿಯಲ್ಲಿದೆ. ಇದರ ಜೊತೆ ಜೊತೆಯಲ್ಲಿಯೇ ಆಮ್‌ ಆದ್ಮಿ ಪಕ್ಷ ಬರೀ ಅಭ್ಯರ್ಥಿಗಳ ಅನ್ವೇಷಣೆಗಷ್ಟೇ ತನ್ನ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿಕೊಂಡಿಲ್ಲ. ಅದು ಈಗಾಗಲೇ ಪ್ರಚಾರ ಭರಾಟೆಯಲ್ಲಿದೆ. ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಉಳಿದೆಲ್ಲ ಪಕ್ಷಗಳಿಗಿಂತಲೂ ಪ್ರಚಾರದಲ್ಲಿ ಆಮ್‌ ಆದ್ಮಿ ಪಕ್ಷ ಒಂದು ಹೆಜ್ಜೆ ಮುಂದಿದೆ.

ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪ್ರಥ್ವಿರೆಡ್ಡಿ ಹಾಗೂ ಆಮ್‌ ಆದ್ಮಿ ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ, ಚಿತ್ರನಟ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದಲ್ಲಿ ಒಂದಜು ತಂಡ ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ಮೊದಲ ಹಂತದ ಪ್ರಚಾರ ಕಾರ್ಯ ಮುಗಿಸಿದೆ. ಮುಖ್ಯಮಂತ್ರಿ ಚಂದ್ರ ಅವರ ತಂಡ ಮತ್ತೆ ಎರಡನೆ ಬಾರಿಗೆ ವಿಜಯಪುರ ನಗರಕ್ಕೆ ಆಗಮಿಸಿ ಎಲ್ಲ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳುವ ಕಾರ್ಯಕ್ರಮ ನಿಗದಿಪಡಿಸಿದೆ. ಇದಲ್ಲದೆ ಪಾಲಿಕೆಯ 35 ವಾರ್ಡ್‌ಗಳಲ್ಲಿ ಆಮ್‌ ಆದ್ಮಿ ಪಕ್ಷದ ಸುಮಾರು 8 ಮಂದಿ ಕಾರ್ಯಕರ್ತರ ತಂಡ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಮತದಾರರ ಮನಸ್ಸಿಗೆ ನಾಟುವಂತೆ ತಮ್ಮ ಪಕ್ಷದ ಬಗ್ಗೆ ಮನವರಿಕೆ ಮಾಡುವಲ್ಲಿ ತಲ್ಲೀಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಪ್ರಚಾರ

ಆಮ್‌ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ, ಚಿತ್ರನಟ ಮುಖ್ಯಮಂತ್ರಿ ಚಂದ್ರು ಅವರ ಧ್ವನಿ ಸುರಳಿ ಮನವಿಯನ್ನು ಮೊಬೈಲ್‌ಗಳಲ್ಲಿ ಸಂದೇಶ ಕಳುಹಿಸಲಾಗುತ್ತಿದೆ. ಈಗಾಗಲೇ ಒಂದೂವರೆಯಿಂದ ಎರಡು ಲಕ್ಷಗಳ ವರೆಗೆ ಮೊಬೈಲ್‌ ಸಂದೇಶಗಳನ್ನು ಮತದಾರರಿಗೆ ರವಾನಿಸಲಾಗಿದೆ. ಸೋಸಿಯಲ್‌ ಮಿಡಿಯಾದಲ್ಲಿ ಪ್ರತಿಯೊಂದು ವಾರ್ಡ್‌ಗಳಲ್ಲಿ ಇರುವ ಸಮಸ್ಯೆಗಳ ದೃಶ್ಯಗಳನ್ನು ಚಿತ್ರೀಕರಣ ಮಾಡಿ ಜನತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಸಲುವಾಗಿ ಚಿತ್ರೀಕರಣ ತಂಡ ಈಗಾಗಲೇ ವಿಜಯಪುರ ನಗರಕ್ಕೆ ಕಾಲಿಟ್ಟಿದೆ.

ಆಮ್‌ ಆದ್ಮಿ ಪಕ್ಷದ ಪ್ರಚಾರ ತಂತ್ರ ಇಷ್ಟಕ್ಕೆ ಮುಗಿಯುವುದಿಲ್ಲ. ಅದು ಬರುವ ದಿನಗಳಲ್ಲಿ ಸೋಸಿಯಲ್‌ ಮಿಡಿಯಾ, ಮಿಡಿಯಾ, ಲಾಜಿಸ್ಟಿಕ್‌ ಅಕಮಂಡೇಶನ್‌ ಮಾಡುವ ಮೂಲಕ ಇನ್ನಷ್ಟುಹೆಚ್ಚು ಕ್ರಿಯಾಶೀಲವಾಗಿ ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಳ್ಳಲು ಆಮ್‌ ಆದ್ಮಿ ಪಕ್ಷ ಯೋಜಿಸಿದೆ.

ಬೆಂಗಳೂರು: ಖ್ಯಾತ ಹಾಸ್ಯನಟ ಟೆನ್ನಿಸ್‌ ಕೃಷ್ಣ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆ

ಆಮ್‌ ಆದ್ಮಿ ಪಕ್ಷ ಸಂಜೆ ಹೊತ್ತಿನಲ್ಲಿ ಪಕ್ಷದ ಚಿಹ್ನೆ ಹೊಂದಿದ ಸ್ಟ್ಯಾಂಡಿ ವಾಹನದಲ್ಲಿ ಬರುತ್ತದೆ. ಅದರಲ್ಲಿ ಇಬ್ಬರು ಕಾರ್ಯಕರ್ತರು ಪಕ್ಷದ ಚಿಹ್ನೆ ಹಿಡಿದುಕೊಂಡು ನಿಂತು ಜನರ ಗಮನ ಸೆಳೆಯಲಿದ್ದಾರೆ. ಬಜ್‌ ಕ್ಯಾಂಪಿಯನ್‌ ಪ್ರಯೋಗ ಮಾಡಲು ಆಮ್‌ ಆದ್ಮಿ ಪಕ್ಷ ಸಜ್ಜಾಗಿದೆ. ವಿಜಯಪುರ ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಜನನಿಬಿಡ 15 ಪ್ರದೇಶಗಳನ್ನು ಆಮ್‌ ಆದ್ಮಿ ಪಕ್ಷ ಗುರುತಿಸಿದೆ. ಈ ಸ್ಥಳಗಳಲ್ಲಿ ಸುಮಾರು 10 ಪಕ್ಷದ ಕಾರ್ಯಕರ್ತರು ಪಕ್ಷದ ಬ್ಯಾನರ್‌, ಪೋಸ್ಟರ್‌, ಧ್ವಜ ಹಿಡಿದುಕೊಂಡು ನಿಂತು ಜನರಿಗೆ ಮತ ಚಲಾಯಿಸಲು ಕೋರುವ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.

ವಿವಿಧೆಡೆಯಿಂದ ಪ್ರಚಾರ ತಂಡಗಳ ಆಗಮನ

ಕಲಬುರಗಿ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಧಾರವಾಡ, ಕೊಪ್ಪಳ, ಬೀದರ, ಮುಂತಾದ ಜಿಲ್ಲೆಗಳಿಂದ ಆಮ್‌ ಆದ್ಮಿ ಪಕ್ಷದ ಸಹಸ್ರಾರು ಕಾರ್ಯಕರ್ತರು ವಿಜಯಪುರ ನಗರಕ್ಕೆ ಆಗಮಿಸಿದ್ದಾರೆ. ಈಗಾಗಲೇ ಬೆಂಗಳೂರಿನಂದ ಸುಮಾರು 30 ಜನರನ್ನು ಒಳಗೊಂಡ ತಂಡ ಜಿಲ್ಲೆಗೆ ಆಗಮಿಸಿದೆ. ಈ ತಂಡವು ಸಾಮಾಜಿಕ ಜಾಲತಾಣಗಳನ್ನು ಯಾವ ರೀತಿ ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು ಎಂಬುವುದರ ಬಗ್ಗೆ ಪ್ಲಾನ್‌ಗಳನ್ನು ರೂಪಿಸುವ ಕೆಲಸ ಮಾಡುತ್ತಿದೆ. ಬೇರೆ ಬೇರೆ ಜಿಲ್ಲೆಗಳಿಂದ ಪ್ರಚಾರ ಕಾರ್ಯಕ್ಕಾಗಿ ಆಗಮಿಸಿದ ಜನರಿಗೆ ಊಟ, ವಸತಿ, ವಾಹನ ಹಾಗೂ ಪ್ರಚಾರ ಕುರಿತು ವ್ಯವಸ್ಥೆಯನ್ನು ನೋಡಿಕೊಳ್ಳಲು ಕಾರ್ಯಕರ್ತರ ಹಲವಾರು ತಂಡಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿ ಆರಂಭವಾಗದ ಪ್ರಚಾರ

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳಲ್ಲಿ ಇನ್ನೂ ಅಭ್ಯರ್ಥಿಗಳನ್ನು ಫೈನಲ್‌ ಮಾಡುವಲ್ಲಿಯೇ ಪಕ್ಷದ ನಾಯಕರು ಬಿಜಿಯಾಗಿದ್ದಾರೆ. ಕಾಂಗ್ರೆಸ್‌ ನಾಳೆ ಅಭ್ಯರ್ಥಿಗಳನ್ನು ಫೈನಲ್‌ ಮಾಡಲಿದೆ. ಬಿಜೆಪಿ ಅ. 15 ಇಲ್ಲವೆ 16ರಂದು ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡುವ ಯೋಜನೆಯಲ್ಲಿ ಇದೆ. ಜೆಡಿಎಸ್‌ ಪಕ್ಷ ನಾಳೆ ಅಭ್ಯರ್ಥಿಗಳನ್ನು ಫೈನಲ್‌ ಮಾಡುವ ಸಿದ್ದತೆಯಲ್ಲಿ ಇದೆ. ಹಾಗಾಗಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಲ್ಲಿ ಇನ್ನೂ ಪ್ರಚಾರ ಭರಾಟೆ ಅಷ್ಟೊಂದು ಇಲ್ಲ. ಟಿಕೆಟ್‌ ಸಿಗುತ್ತದೆ ಎಂಬ ಆಶಾಭಾವನೆ ಹೊಂದಿದ ಕೆಲವರು ಈಗಾಗಲೇ ತಮ್ಮ ತಮ್ಮ ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಕರಪತ್ರ ನೀಡಿ ಮತ ಚಲಾಯಿಸಲು ಕೋರುತ್ತಿದ್ದಾರೆ. ಆದರೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಲ್ಲಿ ಇನ್ನೂ ಪ್ರಚಾರದ ಕಾವು ಏರಿಲ್ಲ. ಆದರೆ ಈ ಎಲ್ಲ ಪಕ್ಷಗಳಿಗಿಂತ ಆಮ್‌ ಆದ್ಮಿ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸುವಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ