ಜಿಎಸ್‌ ಪಾಟೀಲ ಶಾಸಕರಾಗಬೇಕು, ಸಿದ್ರಾಮಯ್ಯ ಸಿಎಂ ಆಗಬೇಕು: ಅಂಬೇಗಾಲಲ್ಲಿ ಕಾಲಕಾಲೇಶ್ವರ ಬೆಟ್ಟವೇರಿದ ಯುವಕ!

By Kannadaprabha NewsFirst Published Mar 24, 2023, 1:57 PM IST
Highlights

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಎಸ್‌. ಪಾಟೀಲ ಅವರು ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಲಿ ಹಾಗೂ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಇಲ್ಲಿನ ಕಾಲಕಾಲೇಶ್ವರ ಬೆಟ್ಟವನ್ನು ಅಂಬೆಗಾಲಿನಲ್ಲಿ ಏರುವ ಮೂಲಕ ಯುವಕನೊಬ್ಬ ಜನತೆ ಹುಬ್ಬೇರುವಂತೆ ಮಾಡಿದ್ದಾನೆ.

ಗಜೇಂದ್ರಗಡ (ಮಾ.24) : ಕಾಂಗ್ರೆಸ್‌ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಎಸ್‌. ಪಾಟೀಲ ಅವರು ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಲಿ ಹಾಗೂ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಇಲ್ಲಿನ ಕಾಲಕಾಲೇಶ್ವರ ಬೆಟ್ಟವನ್ನು ಅಂಬೆಗಾಲಿನಲ್ಲಿ ಏರುವ ಮೂಲಕ ಯುವಕನೊಬ್ಬ ಜನತೆ ಹುಬ್ಬೇರುವಂತೆ ಮಾಡಿದ್ದಾನೆ.

ಕಾಲಕಾಲೇಶ್ವರ(Kalakaleshwar)ನಲ್ಲಿ ಸಂಕಲ್ಪ ಮಾಡಿದರೆ ಪಾರ್ಥನೆ ಈಡೇರುತ್ತದೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿ ದಟ್ಟವಾಗಿದೆ. ಹಾಗಾಗಿ ತಾಲೂಕಿನ ಮಾರನಬಸರಿ ಗ್ರಾಮ(Maranabasari village)ದ ಯುವಕ ವೀರೇಶ ಸಾಕಾ ಅವರು ಯುಗಾದಿ ಹಬ್ಬ(Ugadi festival)ದಂದು, ಮುಂಬರುವ ವಿಧಾನಸಭಾ ಚುನಾವಣೆ(Assembly election)ಯಲ್ಲಿ ಮಾಜಿ ಶಾಸಕ ಜಿ.ಎಸ್‌.ಪಾಟೀಲ(MLA GS Patil) ಅವರು ರೋಣ ಮತಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು ಎಂದು 120ಕ್ಕೂ ಅಧಿಕ ಮೆಟ್ಟಿಲುಗಳನ್ನು ಅಂಬೆಗಾಲಿನಲ್ಲಿ ಏರುವ ಮೂಲಕ ರಾಜಕೀಯ ನಾಯಕನ ಮೇಲಿನ ತನ್ನ ಅಭಿಮಾನವನ್ನು ಪ್ರದರ್ಶಿಸಿದ್ದಾನೆ.

ಶಿಗ್ಗಾಂವಿ: ಕೈಗೆ ಖಾದ್ರಿ ಕಗ್ಗಂಟು : ಸಿಎಂ ಬೊಮ್ಮಾಯಿ ಕಟ್ಟಿಹಾಕಲು ಕಾಂಗ್ರೆಸ್‌ ನಡೆಸುತ್ತಿರುವ ತಂತ್ರಕ್ಕೆ ಬಗ್ಗದ ಅಜ್ಜಂಪೀರ

ಉರಿಬಿಸಿಲ ನಡುವೆ:

ತಾಲೂಕಿನಲ್ಲಿ ಬೇಸಿಗೆ ಕಾಲ ಆರಂಭವಾಗಿದ್ದು ಬಿಸಿಲಿನಲ್ಲಿ ನಡೆದು ಹೋಗಲು ಜನತೆ ಕಷ್ಟಎನ್ನುತ್ತಾರೆ. ಆದರೆ ಬಿಸಿಲಿನಿಂದ ಬೆಟ್ಟದ ಕಲ್ಲುಗಳು ಸುಡುವ ಉಂಡೆಗಳಂತಾಗಿರುತ್ತವೆ. ಭಕ್ತರಿಗೆ ನೆರಳಾಗಲೆಂದು ದೇವಸ್ಥಾನದಿಂದ ನೆರಳಿನ ವ್ಯವಸ್ಥೆ ಮಾಡಿದ್ದರೂ ಸಹ ಬೆಟ್ಟವನ್ನು ಹತ್ತುವ ಭಕ್ತರು ಸುಸ್ತಾಗಿ ಅಲ್ಲಲ್ಲಿ ಕುಳಿತುಕೊಳ್ಳುವ ದೃಶ್ಯ ಸಾಮಾನ್ಯ. ಆದರೆ ವೀರೇಶ ಸಾಕಾ ಅವರು ಅಂಬೆಗಾಲಿನಲ್ಲಿ ಕಾದಿದ್ದ ಬೆಟ್ಟದ ಮೆಟ್ಟಿಲುಗಳನ್ನು ಏರುವ ಉತ್ಸಾಹ ಕಂಡು ಕೆಲವರು ಹೌಹಾರಿದರು.

ಈ ವೇಳೆ ವೀರೇಶ ಸಾಕಾ ಮಾತನಾಡಿ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಕಾಯಕ ಬಂಧು ಮೂಲಕ ಸಾವಿರಾರು ಯುವಕರಿಗೆ ಕೆಲಸ ನೀಡಿದ್ದು, ಅವರು ನೆಮ್ಮದಿಯ ಬದುಕಿಗೆ ಆಸರೆಯಾಗಿತ್ತು. ಆದರೆ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಬದಲು ಉದ್ಯೋಗ ಕಿತ್ತುಕೊಂಡ ಪರಿಣಾಮ ಕಾಯಕ ಬಂಧು ಮಾಯವಾಗಿ ಸಾವಿರಾರು ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ದೂರಿದ ಅವರು, ಈ ಹಿಂದಿನ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆಗಳನ್ನು ಬಹುತೇಕ ಈಡೇರಿಸುವ ಮೂಲಕ ಜನತೆಗೆ ಕೊಟ್ಟಮಾತಿನಂತೆ ನಡೆದುಕೊಂಡಿದ್ದರು. ಹೀಗಾಗಿ ಮತಕ್ಷೇತ್ರದ ಅಭಿವೃದ್ಧಿಗೆ ಮಾಜಿ ಶಾಸಕ ಜಿ.ಎಸ್‌. ಪಾಟೀಲ್‌ ಅವರು ಶಾಸಕರಾಗುವುದರ ಜತೆಗೆ ರಾಜ್ಯದಲ್ಲಿ ಸರ್ವ ಸಮುದಾಯಗಳ ಏಳ್ಗೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಸಂಕಲ್ಪ ಮಾಡಿ ಅಂಬೆಗಾಲಿನಿಂದ ಕಾಲಕಾಲೇಶ್ವರ ಬೆಟ್ಟಹತ್ತಿದ್ದು ಕಾಲಭೈರವನು ನನ್ನ ಸಂಕಲ್ಪ ಈಡೇರಿಸುವ ವಿಶ್ವಾಸವಿದೆ ಎಂದರು.

ಶಶಿಧರ ಹೂಗಾರ, ಎಚ್‌.ಎಸ್‌. ಸೋಂಪುರ, ವೀರಣ್ಣ ಶೆಟ್ಟರ, ಶ್ರೀಕಾಂತ್‌ ಅವಧೂತ, ಶರಣಪ್ಪ ಚಳಗೇರಿ, ಅರ್ಜುನ ರಾಠೋಡ, ವಿ.ಬಿ. ಹಪ್ಪಳದ, ವಿ.ಬಿ. ಸೋಮನಕಟ್ಟಿಮಠ, ಚನ್ನಬಸಪ್ಪ ಹಡಪದ, ಮುತ್ತಣ್ಣ ಕೊಪ್ಪಳ, ಸುರೇಶ ಚವಡಿ, ಬಸವರಾಜ ಹೂಗಾರ, ಬಸವರಾಜ ನವಲಗುಂದ ಸೇರಿ ಇತರರು ಇದ್ದರು.

ಕಾಂಗ್ರೆಸ್‌, ಬಿಜೆಪಿಯವ್ರು ಎಷ್ಟೇ ಆಮಿಷ ಒಡ್ಡಿದರೂ, ಎಚ್‌ಡಿ ಕುಮಾರಸ್ವಾಮಿಯವ್ರೇ ಮುಂದಿನ ಮುಖ್ಯಮಂತ್ರಿ : ಸಿಎಂ ಇಬ್ರಾಹಿಂ

ಕಾಲಕಾಲೇಶ್ವರ ದೇವರಲ್ಲಿ ಬೇಡಿದ ವರಗಳು ಈಡೇರುವ ಐತಿಹ್ಯವಿದೆ. ಹೀಗಾಗಿ ಯುಗಾದಿ ಹಬ್ಬದಂದು ಮಾರನಬಸರಿ ಗ್ರಾಮದ ಯುವಕ ವೀರೇಶ ಸಾಕಾ ಅವರು ಮಂಡಿಗಾಲಿನಿಂದ ಕಾಲಕಾಲೇಶ್ವರ ಬೆಟ್ಟವನ್ನು ಏರಿ ಜಿ.ಎಸ್‌. ಪಾಟೀಲ ಅವರ ಗೆಲುವಿಗಾಗಿ ಪ್ರಾರ್ಥಿಸಿದ್ದು ಮಾಜಿ ಶಾಸಕರ ಜನಪರ ಕಾಳಜಿ, ಅಭಿವೃದ್ಧಿ ಕಾರ್ಯಕ್ಕೆ ಸಾಕ್ಷಿ.

ರಫೀಕ್‌ ತೋರಗಲ್‌, ಕಾಂಗ್ರೆಸ್‌ ಯುವ ಮುಖಂಡ

ರಾಜ್ಯದ ಹಾಗೂ ಮತಕ್ಷೇತ್ರದ ಅಭಿವೃದ್ಧಿ ಜತೆಗೆ ಸರ್ವ ಸಮುದಾಯಗಳ ಆರ್ಥಿಕ ಭದ್ರತೆಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ 2023ರ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂಬ ಸಂಕಲ್ಪದಿಂದ ಕಾಲಕಾಲೇಶ್ವರನಲ್ಲಿ ಪ್ರಾರ್ಥಿಸಿದ್ದು, ದೇವನು ಈಡೇರಿಸಲಿದ್ದಾನೆ.

-ವೀರೇಶ ಸಾಕಾ, ಅಂಬೆಗಾಲಿನಿಂದ ಕಾಲಕಾಲೇಶ್ವರ ಬೆಟ್ಟಏರಿದ ಮಾರನಬಸರಿ ಯುವಕ

click me!