BJP Politics: ಪ್ರವಾಹ ಕಮ್ಮಿ ಆದ ಬಳಿಕ 2 ಬಿಜೆಪಿ ಟೀಂ ರಾಜ್ಯ ಪ್ರವಾಸ

By Kannadaprabha NewsFirst Published Sep 7, 2022, 3:00 AM IST
Highlights

104 ಕ್ಷೇತ್ರಗಳಲ್ಲಿ ಯಾತ್ರೆ, 1 ತಂಡಕ್ಕೆ ಕಟೀಲ್‌ ನೇತೃತ್ವ, ಇನ್ನೊಂದು ತಂಡಕ್ಕೆ ಸಿಎಂ, ಬಿಎಸ್‌ವೈ ನೇತೃತ್ವ

ಬೆಂಗಳೂರು(ಸೆ.07):  ಮಳೆ ತೀವ್ರತೆ ಕಡಿಮೆ ಆದ ಬಳಿಕ ರಾಜ್ಯದ 104 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಬಿಜೆಪಿಯ ಹಿರಿಯ ನಾಯಕರ ಎರಡು ತಂಡಗಳು ಪ್ರವಾಸ ಆರಂಭಿಸಲಿವೆ. ಒಂದು ತಂಡಕ್ಕೆ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನೇತೃತ್ವ ವಹಿಸಲಿದ್ದಾರೆ. ಮತ್ತೊಂದು ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಂದಾಳತ್ವ ವಹಿಸಲಿದ್ದಾರೆ.

ಈ ತಂಡಗಳ ಪ್ರವಾಸ ಬುಧವಾರದಿಂದ ಆರಂಭಗೊಳ್ಳಬೇಕಾಗಿತ್ತು. ಆದರೆ, ರಾಜ್ಯಾದ್ಯಂತ ತೀವ್ರ ಮಳೆ ಪರಿಸ್ಥಿತಿ ಇರುವ ಕಾರಣ ಮುಂದೂಡಲಾಗಿದೆ. ಮಳೆ ತೀವ್ರತೆ ಕಡಮೆಯಾದ ಬಳಿಕ ಪ್ರವಾಸ ಆರಂಭವಾಗಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ತಿಳಿಸಿದ್ದಾರೆ.

PSI SCAM ಮತ್ತೊಬ್ಬ ಬಿಜೆಪಿ ನಾಯಕನ ಹೆಸರು, ಆಡಿಯೋ ಲೀಕ್‌ನಿಂದ ರಹಸ್ಯ ಬಯಲು!

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಂಡಗಳ ಪ್ರವಾಸದ ವೇಳೆ ಫಲಾನುಭವಿಗಳ ಸಮಾವೇಶ, ಎಸ್‌ಸಿ-ಎಸ್‌ಟಿ, ಒಬಿಸಿ ಕಾರ್ಯಕರ್ತರ ಮನೆಯಲ್ಲಿ ಉಪಹಾರ ಮತ್ತು ಅದೇ ಪರಿಸರದಲ್ಲಿ ಸಭೆ ನಡೆಸಲಾಗುತ್ತದೆ. ಮಠ, ಮಂದಿರಗಳಿಗೆ ಭೇಟಿ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೂ ಸಮಾವೇಶ ಮತ್ತು ಕ್ಷೇತ್ರ ಪ್ರವಾಸದಲ್ಲಿ ಭಾಗವಹಿಸುವರು. ಪಕ್ಷದ ಎಲ್ಲ ಜನಪ್ರತಿನಿಧಿಗಳು ಸಮಾವೇಶ ಹಾಗೂ ಕ್ಷೇತ್ರ ಪ್ರವಾಸದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಕಟೀಲ್‌ ಅವರ ತಂಡದ ಪ್ರವಾಸ ಸಂಚಾಲಕರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್‌ ಟೆಂಗಿನಕಾಯಿ ಮತ್ತು ಸಿದ್ದರಾಜು ಅವರು ಇರುತ್ತಾರೆ. ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತಂಡದ ಪ್ರವಾಸ ಸಂಚಾಲಕರಾಗಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್‌.ರವಿಕುಮಾರ್‌ ಹಾಗೂ ಅಶ್ವತ್ಥನಾರಾಯಣ ಅವರು ಇರಲಿದ್ದಾರೆ.
 

click me!