ಬಹುಮಹಡಿ ಕಟ್ಟಡಗಳಿಗೆ ಶೇ.1 ಬೆಂಕಿ ತೆರಿಗೆ: ಗೃಹ ಸಚಿವ ಪರಮೇಶ್ವರ್

Published : Aug 22, 2025, 07:42 AM IST
Dr G Parameshwar

ಸಾರಾಂಶ

ಬೆಂಕಿ ಉಪಕರವು ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಥವಾ ಇವುಗಳ ಒಡೆತನದಲ್ಲಿರುವ ಯಾವುದೇ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣ ಇಲ್ಲವೇ ಸ್ವಾಧೀನದಲ್ಲಿರುವ ಯಾವುದೇ ಕಟ್ಟಡದ ಮೇಲೆ ಉಪಕರ ವಿಧಿಸುವುದಿಲ್ಲ.

ವಿಧಾನ ಪರಿಷತ್‌ (ಆ.22): ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ಕಾರ್ಯಕ್ಷಮತೆಯನ್ನು ಒಟ್ಟಾರೆ ಹೆಚ್ಚಿಸುವ ಉದ್ದೇಶದಿಂದ ಹೊಸದಾಗಿ ನಿರ್ಮಾಣಗೊಂಡಿರುವ ಬಹುಮಹಡಿ ಕಟ್ಟಡಗಳ ಸ್ವತ್ತು ತೆರಿಗೆ ಮೇಲೆ ಶೇಕಡ 1ರಷ್ಟು ಬೆಂಕಿ ಉಪಕರ ವಿಧಿಸಲು ಅವಕಾಶ ಕಲ್ಪಿಸುವ 2025ನೇ ಸಾಲಿನ ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ)ವಿಧೇಯಕಕ್ಕೆ ಮೇಲ್ಮನೆ ಅಂಗೀಕಾರ ನೀಡಿತು. ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ವಿಧೇಯಕ ಮಂಡಿಸಿದ ಗೃಹ ಸಚಿವ ಡಾ। ಜಿ.ಪರಮೇಶ್ವರ್, ಬೆಂಕಿ ಉಪಕರ ಜಾರಿಗೆ ತರುವಂತೆ ಕೇಂದ್ರದ ಇಂಡಿಯನ್‌ ಆಡಿಟ್‌ ಅಕೌಂಟ್ಸ್ ಇಲಾಖೆ ನಾಲ್ಕು ವರ್ಷಗಳಿಂದ ಆರು ಪತ್ರಗಳನ್ನು ಬರೆದ ಹಿನ್ನೆಲೆಯಲ್ಲಿ ಈ ವಿಧೇಯಕ ಜಾರಿಗೆ ತರಲಾಗಿದೆ.

ಬೆಂಕಿ ಉಪಕರವು ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಥವಾ ಇವುಗಳ ಒಡೆತನದಲ್ಲಿರುವ ಯಾವುದೇ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣ ಇಲ್ಲವೇ ಸ್ವಾಧೀನದಲ್ಲಿರುವ ಯಾವುದೇ ಕಟ್ಟಡದ ಮೇಲೆ ಉಪಕರ ವಿಧಿಸುವುದಿಲ್ಲ. 21 ಮೀಟರ್‌ಗಿಂತ ಹೆಚ್ಚಿರುವ ಕಟ್ಟಡಗಳಿಗೆ ಮಾತ್ರ ಈ ಉಪಕರ ಅನ್ವಯವಾಗುತ್ತದೆ. ಆದರೆ, ಶಾಲೆ, ಕಾಲೇಜುಗಳಿಗೆ ಬೇರೆಯದೇ ನಿಯಮವಿರುತ್ತದೆ. ನಿಗದಿಪಡಿಸಿದ ಎತ್ತರಕ್ಕಿಂತ ಹೆಚ್ಚಿರುವ ವಸತಿ ಕಟ್ಟಡಗಳಿಗೂ ಉಪಕರ ವಿಧಿಸಲಾಗುವುದು ಎಂದರು.

ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸಲಾಗುತ್ತದೆ ಎಂಬ ಸದಸ್ಯರ ಮಾತನ್ನು ಅಲ್ಲಗಳೆದ ಡಾ। ಪರಮೇಶ್ವರ್‌, ಬೇರೆ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಜಾರಿಯಲ್ಲಿದೆ. ಶೇ.18, 28, 42ರವರೆಗೆ ಜಿಎಸ್‌ಟಿ ಇದೆ. ಈಗ ಮೂರು ಹಂತದ ಜಿಎಸ್‌ಟಿ ಜಾರಿಗೆ ತರಲು ಕೇಂದ್ರ ಸರ್ಕಾರ ಹೊರಟಿದೆ ಎಂದು ತಿರುಗೇಟು ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ಸಿನ ಐವಾನ್‌ ಡಿಸೋಜಾ, ಜೆಡಿಎಸ್‌ನ ಟಿ.ಎ.ಶರವಣ, ಗೋವಿಂದರಾಜು, ಬಿಜೆಪಿ ಡಿ.ಎಸ್‌.ಅರುಣ, ಎನ್‌.ರವಿಕುಮಾರ್‌ ಅವರು ಉಪಕರ ಹೊರೆ ಅತಿ ಎತ್ತರದ ಕಟ್ಟಡ ಇರುವ ಬೆಂಗಳೂರಿನ ಜನರ ಮೇಲೆ ಬೀಳಲಿದೆ. ಈಗಾಗಲೇ ಬೆಲೆ ಏರಿಕೆ, ನಾನಾ ರೀತಿಯ ತೆರಿಗೆಯಿಂದ ಜನರಿಗೆ ಹೊರೆಯಾಗಿದೆ. ಒಂದು ರೀತಿಯ ತೆರಿಗೆ ದಾಳಿ ನಡೆಯುತ್ತಿದೆ, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯನ್ನು ಆಧುನೀಕರಣಗೊಳಿಸಬೇಕು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ