
ವಿಧಾನ ಪರಿಷತ್ತು (ಆ.22): ರಾಜ್ಯದಲ್ಲಿ ಶೀಘ್ರದಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಜಾಹೀರಾತು ಅನುಷ್ಠಾನ ನಿಯಮಗಳು ಜಾರಿಗೆ ಬಂದು 10 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಜಾಹೀರಾತು ಅನುಷ್ಠಾನ ನಿಯಮಗಳನ್ನು ಪರಿಷ್ಕರಿಸಲು ಉದ್ದೇಶಿಸಲಾಗಿದೆ. ಪರಿಷ್ಕೃತ ಕರಡು ಜಾಹೀರಾತು ಅನುಷ್ಠಾನ ನಿಯಮಗಳನ್ನು ತಯಾರಿಸಲಾಗಿದ್ದು, ಸರ್ಕಾರದಲ್ಲಿ ಪರಿಶೀಲನೆ ಹಂತದಲ್ಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜಾರಿಗೆ ತರುವ ಯೋಜನೆಗಳು ಹಾಗೂ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ. ಆದ್ದರಿಂದ ರಾಜ್ಯ ಪ್ರಾದೇಶಿಕ ಮತ್ತು ಜಿಲ್ಲಾ ಪತ್ರಿಕೆಗಳ ಮೂಲಕ ಜಾಹೀರಾತುಗಳನ್ನು ಮತ್ತು ಶೇ.60:40 ಅನುಪಾತದಲ್ಲಿ ವಿಶೇಷ ಪುರವಣಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಿದರು. ನಾವು ಜಾಹೀರಾತು ನೀಡಿರುವುದು ಜನ ಸಾಮಾನ್ಯರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತಾಗಿ ಎಂದು ಇದೇ ವೇಳೆ ಸಿಎಂ ಹೇಳಿದರು.
ಜಾಹೀರಾತು ನೀಡುವ ಸಂಬಂಧ 2020-21 ಆರ್ಥಿಕ ವರ್ಷದಲ್ಲಿ 111.15 ಕೋಟಿ ರು, 2021-22 ರಲ್ಲಿ 86.08 ಕೋಟಿ ರು. 2022-23 ರಲ್ಲಿ 113.20 ಕೋಟಿ ರು, 2023-24 ರಲ್ಲಿ 101.38 ಕೋಟಿ ರು. ಹಾಗೂ ಅದರಲ್ಲಿ 29.46 ಕೋಟಿ ರು. ಹಿಂದಿನ ವರ್ಷದ ಬಾಕಿ ಪಾವತಿಸಲಾಗಿದೆ, 2024-25 ರಲ್ಲಿ 95.45 ಕೋಟಿ ರು. ವ್ಯಯಿಸಿಲಾಗಿದ್ದು, ಇದರಲ್ಲಿ ಹಿಂದಿನ ಸರ್ಕಾರದ ಬಾಕಿಗಳನ್ನು ಸಹ ಪಾವತಿಸಲಾಗಿದೆ ಎಂದರು. ವಿರೋಧ ಪಕ್ಷಗಳು ಆರೋಪಿಸುವಂತೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿಲ್ಲ ಹಾಗೂ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹಣದ ಕೊರತೆಯಾಗಿಲ್ಲ.
ಸಿದ್ದರಾಮಯ್ಯ ಚಿತ್ರಕ್ಕೆ ಹಾಲಿನ ಅಭಿಷೇಕ: ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾದಿಗ ಸಮುದಾಯ ಮತ್ತು ಚಾಮರಾಜನಗರದಲ್ಲಿ ಬಲಗೈ-ಎಡಗೈ ಸಮುದಾಯದವರು ಸಂಭ್ರಮಿಸಿದರು. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದ ಮಾದಿಗ ಸಮುದಾಯದ ನಿಯೋಗ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು. ಮುಖ್ಯಮಂತ್ರಿ ನಿವಾಸ ಕಾವೇರಿ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾದಿಗ ಸಮುದಾಯದವರು, ಸಿದ್ದರಾಮಯ್ಯ ಅವರ ಬೃಹತ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕದ ಜೊತೆ ಹೂವಿನ ಮಳೆ ಸುರಿಸಿ ಸಂತಸ ವ್ಯಕ್ತಪಡಿಸಿದರು.
ಬಳಿಕ ಸಿಎಂ ನಿವಾಸ ಪ್ರವೇಶಿಸಿದ ಆಂಜನೇಯ ಮತ್ತಿತರರು, ಸಿದ್ದರಾಮಯ್ಯ ಅವರಿಗೆ ಬೃಹತ್ ಹೂವಿನ ಹಾರ ಹಾಕಿ ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು. ವಕೀಲ ರವೀಂದ್ರ, ಕೊಪ್ಪಳದ ಗುಳೇಪ್ಪ, ಕಲಬುರಗಿಯ ಶ್ಯಾಮ್ ನಾಟಿಕೇರ್, ಬೀದರ್ನ ಚಂದ್ರಕಾಂತ್ ಇಪ್ಪಾಳ್ಗ, ಹೊಸಕೋಟೆ ಸುಬ್ಬಣ್ಣ, ಮಹದೇವಪುರದ ಚಿಮ್ಮಿ, ಹಾಸನದ ಶಂಕರ್ರಾಜ್, ಚಿತ್ರದುರ್ಗ ಶರಣಪ್ಪ, ನರಸಿಂಹರಾಜ್, ಮಾಗಡಿ ಮಂಜೇಶ್, ಬೆಂಗಳೂರಿನ ಮುತ್ತುರಾಜ್, ರಾಯಚೂರಿನ ಶರಣು ಹಾಜರಿದ್ದರು. ಇನ್ನು ಚಾಮರಾಜನಗರದಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಹೊಲೆಯ, ಮಾದಿಗ ಜನಾಂಗಗಳಿಗೆ ಶೇ.6ರಷ್ಟು ಹಾಗೂ ಇತರೇ ಸಮುದಾಯಕ್ಕೆ ಶೇ.5 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದೆ ಕೊಟ್ಟಿದೆ ಎಂದು ಬಲಗೈ-ಎಡಗೈ ಎರಡೂ ಸಮುದಾಯಗಳ ಮುಖಂಡರು ಒಟ್ಟಿಗೆ ಸೇರಿ ವಿಜಯೋತ್ಸವ ಆಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.