Pro Kabaddi League : ಮುಂಬಾಗೆ ಮತ್ತೆ ಶರಣಾದ ಬೆಂಗಳೂರು ಬುಲ್ಸ್‌

By Kannadaprabha NewsFirst Published Jan 27, 2022, 3:15 AM IST
Highlights

 ಪ್ರೊ ಕಬಡ್ಡಿ: 34-45ರಲ್ಲಿ ಸೋಲು
ಈ ಆವೃತ್ತಿಯಲ್ಲಿ 2ನೇ ಬಾರಿ ಪರಾಭವ
ಪವನ್ ಶೇರಾವತ್ ಏಕಾಂಗಿ ಹೋರಾಟ

ಬೆಂಗಳೂರು (ಜ. 27): ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ (Pro Kabaddi League) ಬೆಂಗಳೂರು ಬುಲ್ಸ್‌  (Bengaluru Bulls) 2ನೇ ಬಾರಿಗೆ ಯು ಮುಂಬಾ (U Mumba)ವಿರುದ್ಧ ಸೋಲುಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ 34-45 ಅಂಕಗಳ ಹೀನಾಯ ಸೋಲಿಗೆ ಬುಲ್ಸ್‌ ಶರಣಾಯಿತು. ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬುಲ್ಸ್‌ 16 ಅಂಕಗಳಿಂದ ಸೋಲುಂಡಿತ್ತು.

ಪವನ್‌ ಶೆರಾವತ್‌ (pavan sehrawat)ಏಕಾಂಗಿ ಹೋರಾಟ(14 ರೈಡ್‌ ಅಂಕ) ಬುಲ್ಸ್‌ಗೆ ಗೆಲುವು ತಂದುಕೊಡಲಿಲ್ಲ. ಜೊತೆಗೆ ಡಿಫೆಂಡರ್‌ಗಳ ದಯನೀಯ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು. ಪಂದ್ಯದಲ್ಲಿ ಬುಲ್ಸ್‌ ಡಿಫೆಂಡರ್‌ಗಳು ಒಟ್ಟು 18 ವಿಫಲ ಯತ್ನಗಳನ್ನು ಮಾಡಿದರು. ತಂಡ ಒಟ್ಟು ಗಳಿಸಿದ್ದು 7 ಟ್ಯಾಕಲ್‌ ಅಂಕಗಳನ್ನು ಮಾತ್ರ. ಪ್ರತಿ ಬಾರಿ ಪವನ್‌ ಔಟಾಗಿ ಹೊರಹೋದಾಗಲೂ ಬುಲ್ಸ್‌ ಹೆಚ್ಚೆಚ್ಚು ಅಂಕಗಳನ್ನು ಕಳೆದುಕೊಂಡಿದ್ದು, ತಂಡ ಅವರ ಮೇಲೆ ಎಷ್ಟುಅವಲಂಬಿತಗೊಂಡಿದೆ ಎನ್ನುವುದನ್ನು ಮತ್ತೊಮ್ಮೆ ತೋರಿಸಿತು.

ಪಂದ್ಯದ 4ನೇ ನಿಮಿಷದಲ್ಲೇ ಆಲೌಟ್‌ ಆದ ಬುಲ್ಸ್‌ 17ನೇ ನಿಮಿಷದಲ್ಲಿ ಮುಂಬಾವನ್ನು ಆಲೌಟ್‌ ಮಾಡಿ 18-18ರಲ್ಲಿ ಸಮಬಲ ಸಾಧಿಸಿತು. ಮೊದಲಾರ್ಧದ ಮುಕ್ತಾಯಕ್ಕೆ 20-22ರ ಹಿನ್ನಡೆ ಅನುಭವಿಸಿದ ಬುಲ್ಸ್‌, ದ್ವಿತೀಯಾರ್ಧ ಆರಂಭಗೊಂಡ ಒಂದೂವರೆ ನಿಮಿಷದಲ್ಲಿ ಮತ್ತೆ ಆಲೌಟ್‌ ಆಗಿ 7 ಅಂಕಗಳ ಹಿನ್ನಡೆ ಅನುಭವಿಸಿತು. ಅಲ್ಲಿಂದ ಮುಂದಕ್ಕೆ ತಂಡ ಚೇತರಿಕೆ ಕಾಣಲಿಲ್ಲ. ಮುಂಬಾ ಪರ ಅಭಿಷೇಕ್‌ ಸಿಂಗ್‌ 11 ರೈಡ್‌ ಅಂಕ ಗಳಿಸಿದರೆ, ರಾಹುಲ್‌ ಸೇಥ್‌ಪಾಲ್‌ 7 ಟ್ಯಾಕಲ್‌ ಅಂಕಗಳನ್ನು ಕಲೆಹಾಕಿದರು. ಮುಂಬಾ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರೆ, ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಸೋತರೂ ಬುಲ್ಸ್‌ ಅಗ್ರಸ್ಥಾನದಲ್ಲೇ ಉಳಿದಿದೆ.
 

. after tonight's victory: Itni jaldi kya hai, abhi to humne comeback kiya hai! 😉🕺

Here's the updated points table after ! 📊 Make a bold prediction on who is going to be on 🔝 next! pic.twitter.com/AVW4NxYgI0

— ProKabaddi (@ProKabaddi)


ಏಷ್ಯಾ ಕಪ್‌ ಮಹಿಳಾ ಹಾಕಿ ಪಂದ್ಯಾವಳಿ, ಭಾರತದ ಪ್ರಶಸ್ತಿ ಕನಸು ಭಗ್ನ
ಮಸ್ಕಟ್‌: ಏಷ್ಯಾ ಕಪ್‌ (Asia Cup) ಉಳಿಸಿಕೊಳ್ಳುವ ಭಾರತ ಮಹಿಳಾ ತಂಡದ ಕನಸು ಭಗ್ನಗೊಂಡಿದೆ. ಬುಧವಾರ ನಡೆದ ಸೆಮಿಫೈನಲ್‌ನಲ್ಲಿ (Semi Final) ಹಾಲಿ ಚಾಂಪಿಯನ್‌ ಭಾರತ (India), ದಕ್ಷಿಣ ಕೊರಿಯಾ (South Korea) ವಿರುದ್ಧ 2-3 ಗೋಲುಗಳ ಅಂತರದಲ್ಲಿ ಸೋಲುಂಡಿತು. ಪಂದ್ಯದ 28 ನಿಮಿಷದಲ್ಲಿ ವಂದನಾ ಕಟಾರಿಯಾ (Vandana Kataria) ಬಾರಿಸಿದ ಗೋಲಿನ ನೆರವಿನಿಂದ ಭಾರತ ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದಲ್ಲಿ ಕೊರಿಯಾ 3 ಗೋಲು ಗಳಿಸಿತು. 31ನೇ ನಿಮಿಷದಲ್ಲಿ ಎನುಬಿ ಚಿಯೊನ್‌, 45ನೇ ನಿಮಿಷದಲ್ಲಿ ಸೆಯುಂಗ್‌ ಜು ಲೀ ಹಾಗೂ 47ನೇ ನಿಮಿಷದಲ್ಲಿ ಹೆಜಿನ್‌ ಚೊ ಗೋಲು ಗಳಿಸಿದರು. ಪಂದ್ಯ ಮುಕ್ತಾಯಗೊಳ್ಳಲು 6 ನಿಮಿಷ ಬಾಕಿ ಇದ್ದಾಗ ಲಾಲ್ರೆಮ್ಸಯಾಮಿ ಗೋಲು ಬಾರಿಸಿ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಆದರೆ ಮತ್ತೊಂದು ಗೋಲು ಗಳಿಸಿ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ಯಲು ಭಾರತಕ್ಕೆ ಸಾಧ್ಯವಾಗಲಿಲ್ಲ.

ಕೋವಿಡ್‌: ಸಂತೋಷ್‌ ಟ್ರೋಫಿ ಮುಂದೂಡಿಕೆ
ನವದೆಹಲಿ: ದೇಶದಲ್ಲಿ ಕೋವಿಡ್‌ ಪ್ರಕರಣಗಳು ನಿಯಂತ್ರಣಕ್ಕೆ ಬರದ ಕಾರಣ ಫೆ.20ರಿಂದ ಮಾ.6ರ ವರೆಗೂ ಕೇರಳದ ಮಲ್ಲಪುರಂನಲ್ಲಿ ನಡೆಯಬೇಕಿದ್ದ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯನ್ನು (Santosh Trophy Football) ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ಅನಿರ್ದಿಷ್ಟಅವಧಿಗೆ ಮುಂದೂಡಿದೆ. ಮುಂದಿನ ತಿಂಗಳ ಅಂತ್ಯದಲ್ಲಿ ಪರಿಸ್ಥಿತಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಎಐಎಫ್‌ಎಫ್‌ ತಿಳಿಸಿದೆ.

click me!