
ಪ್ಯಾರಿಸ್: 14 ಬಾರಿ ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಂ ರನ್ನು ಭಾನುವಾರ ಫ್ರೆಂಚ್ ಓಪನ್ ಟೂರ್ನಿ ವೇಳೆ ಚಾಂಪಿಯನ್ ಆಗುವ ಮೂಲಕ ಕಿಂಗ್ ಆಫ್ ಕ್ಲೇ(ಆವೆ ಅಂಕಣದ ರಾಜ) ಎಂದೇ ಖ್ಯಾತಿ ಪಡೆದಿರುವ ದಿಗ್ಗಜ ಟೆನಿಸಿಗ ರಾಫೆಲ್ ನಡಾಲ್ ಗೆ ಪ್ಯಾರಿಸ್ ನಲ್ಲಿ ವಿಶೇಷ ಗೌರವ ಸಲ್ಲಿಸಲಾಗಿದೆ. ಫ್ರೆಂಚ್ ಓಪನ್ ಪಂದ್ಯಗಳು ನಡೆಯುವ ಫಿಲಿಪ್ ಚಾಟ್ರಿಯ ಕೋರ್ಟ್ನಲ್ಲಿ ನಡಾಲ್ ಶಾಶ್ವತ ಹೆಜ್ಜೆ ಗುರುತನ್ನು ಸ್ಥಾಪಿಸಲಾಗಿದೆ.
ಕಳೆದ ವರ್ಷ ಟೆನಿಸ್ಗೆ ನಿವೃತ್ತಿ ಘೋಷಿಸಿರುವ 22 ಗ್ಯಾನ್ಸ್ಟಾಂಗಳ ಒಡೆಯ, ಸ್ಪೇನ್ನ ನಡಾಲ್ ಅವರನ್ನು ಆಯೋಜಕರು ಸನ್ಮಾನಿಸಿದರು. ಅಂಕಣಕ್ಕೆ ಆಗಮಿಸಿದ ನಡಾಲ್ರನ್ನು ಪ್ರೇಕ್ಷಕರು ಚಪ್ಪಾಳೆ ಮೂಲಕ ಸ್ವಾಗತಿಸಿದರು. ಕ್ರೀಡಾಂಗಣದ ಸ್ಟ್ಯಾಂಡ್ನಲ್ಲಿ ನಡಾಲ್ ಹೆಸರು ರಾರಾಜಿಸಿತು. ಬಳಿಕ ಆಯೋಜಕರು ನಡಾಲ್ ಹೆಸರು, ಹೆಜ್ಜೆ ಗುರುತು ಹಾಗೂ 14 ಬಾರಿ ಚಾಂಪಿಯನ್ ಎಂದು ಬರೆದಿರುವ ಶಾಶ್ವತ ಫಲಕವನ್ನು ಅಂಕಣದಲ್ಲಿ ಅನಾವರಣಗೊಳಿಸಿದರು. ಈ ವೇಳೆ ನಡಾಲ್ ಭಾವುಕರಾಗಿಯೇ ಮಾತನಾಡಿದರು.
ದಿಗ್ಗಜ ಟೆನಿಸಿಗರ ಸಮಾಗಮ
ನಡಾಲ್ಗೆ ಸನ್ಮಾನ ಕಾರ್ಯಕ್ರಮ ದಿಗ್ಗಜ ಟೆನಿಸಿಗರ ಸಮಾಗಮಕ್ಕೆ ಸಾಕ್ಷಿಯಾಯಿತು. 24 ಗ್ರ್ಯಾನ್ಸ್ಲಾಂ ವಿಜೇತ ಜೋಕೋವಿಚ್, 20 ಗ್ರ್ಯಾನ್ ಸ್ಲಾಂಗಳ ಒಡೆಯ ರೋಜರ್ ಫೆಡರರ್, 3 ಬಾರಿ ಪ್ರಶಸ್ತಿ ವಿಜೇತ ಆ್ಯಂಡಿ ಮರ್ರೆ ಉಪಸ್ಥಿತರಿದ್ದರು.
ಫ್ರೆಂಚ್ ಓಪನ್ ಟೆನಿಸ್: ವಿಶ್ವ ನಂ.1 ಸಬಲೆಂಕಾ ಶುಭಾರಂಭ
ಪ್ಯಾರಿಸ್: ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಶುಭಾರಂಭ ಮಾಡಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯನ್ ಹಾಗೂ ಯುಎಸ್ ಓಪನ್ ಗೆದ್ದಿದ್ದ ಬೆಲಾರಸ್ನ ಸಬಲೆಂಕಾ, ಭಾನುವಾರ ಮಹಿಳಾ ಸಿಂಗಲ್ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಕಮಿಲಾ ರಖಿಮೋವಾ ವಿರುದ್ದ 6-1, 6-0 ಸೆಟ್ಗಳಲ್ಲಿ ಸುಲಭ ಗೆಲುವು ಸಾಧಿಸಿದರು. 13ನೇ ಶ್ರೇಯಾಂಕಿತ ಸ್ವಿಟೋಲಿನಾ ಕೂಡಾ 2ನೇ ಸುತ್ತಿಗೇರಿದರು.
ಪುರುಷರ ಸಿಂಗಲ್ಸ್ನಲ್ಲಿ 8ನೇ ಶ್ರೇಯಾಂಕಿತ, ಇಟಲಿಯ ಮುಸೆಟ್ಟಿ ಶುಭಾರಂಭ ಮಾಡಿದರು. ಟೂರ್ನಿಯ ಪ್ರಮುಖ ಆಕರ್ಷಣೆ ಎನಿಸಿಕೊಂಡಿರುವ ಜೋಕೋವಿಚ್, ಯಾನಿಕ್ ಸಿನ್ನರ್, ಆಲ್ಕರಜ್, ಮೆಡೈಡೆವ್, ಇಗಾ ಸ್ವಿಯಾಟೆಕ್ ಸೇರಿ ಪ್ರಮುಖರು ಸೋಮವಾರ ಅಭಿಯಾನ ಆರಂಭಿಸಲಿದ್ದಾರೆ.
ಇಂದಿನಿಂದ ನಾರ್ವೆ ಚೆಸ್: ಭಾರತದ ನಾಲ್ವರು ಕಣಕ್ಕೆ
ಸ್ಟ್ರಾವೆಂಜರ್ (ನಾರ್ವೆ): ಅತ್ಯಂತ ಪ್ರತಿಷ್ಠಿತ ಚೆಸ್ ಟೂರ್ನಿಗಳಲ್ಲಿ ಒಂದಾಗಿರುವ ನಾರ್ವೆ ಚೆಸ್ ಸೋಮವಾರ ಆರಂಭಗೊಳ್ಳಲಿದ್ದು, ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಸೇರಿದಂತೆ ಭಾರತದ ನಾಲ್ವರು ಸ್ಪರ್ಧಿಸಲಿದ್ದಾರೆ. ಪುರುಷ, ಮಹಿಳಾ ವಿಭಾಗಗಳಲ್ಲಿ ವಿಶ್ವದ ಅಗ್ರಗಣ್ಯ 6 ಚೆಸ್ ಪಟುಗಳ ನಡುವೆ ಈ ಟೂರ್ನಿ ನಡೆಯಲಿದೆ.
ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಪ್ರತಿ ಆಟಗಾರರು ತಲಾ 2 ಬಾರಿ ಪರಸ್ಪರ ಸೆಣಸಾಡಲಿದ್ದಾರೆ. ಪುರುಷರ ವಿಭಾಗದಲ್ಲಿ ಇದೇ ಮೊದಲ ಬಾರಿ ಭಾರತ ಇಬ್ಬರು ಸ್ಪರ್ಧಿಗಳಿದ್ದಾರೆ. ಗುಕೇಶ್ ಜೊತೆ ವಿಶ್ವನಂ.4 ಅರ್ಜುನ್ ಎರಿಗೈಸಿ ಕಣಕ್ಕಿಳಿಯಲಿದ್ದಾರೆ. ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ ಹಾಗೂ ಆರ್.ವೈಶಾಲಿ ಭಾರತದವನ್ನು ಪ್ರತಿನಿಧಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.