Khelo India University Games: ಇಂದಿನ ಸಮಾರೋಪ ಸಮಾರಂಭಕ್ಕೆ ಅಮಿತ್‌ ಶಾ ಮುಖ್ಯ ಅತಿಥಿ

By Naveen KodaseFirst Published May 3, 2022, 8:52 AM IST
Highlights

* ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗೆ ಇಂದು ತೆರೆ

* ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿಂದು ಅದ್ಧೂರಿ ಕಾರ್ಯಕ್ರಮ

* ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ

ಬೆಂಗಳೂರು(ಮೇ.03) 2ನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ (Khelo India University Games) ಮುಕ್ತಾಯದ ಹಂತ ತಲುಪಿದ್ದು, ಮಂಗಳವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ (Bengaluru Kanteerava Stadium) ಅದ್ಧೂರಿ ಕಾರ್ಯಕ್ರಮ ಸಂಜೆ 5.30ಕ್ಕೆ ಆರಂಭಗೊಳ್ಳಲಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ‍್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ನಟ ಸುದೀಪ್‌ (Actor Sudeepa) ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

‘ಸಮಾರೋಪ ಕಾರ‍್ಯಕ್ರಮ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿತ್ತು. ಸುಮಾರು 25,000 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿತ್ತು. ಆದರೆ ನಗರದಲ್ಲಿ ಮಳೆ ಮುನ್ಸೂಚನೆ ಇರುವ ಕಾರಣ ಸಮಾರಂಭವನ್ನು ಒಳಾಂಗಣ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದ್ದೇವೆ’ ಎಂದು ರಾಜ್ಯ ಕ್ರೀಡಾ ಇಲಾಖೆ ಸಚಿವ ಡಾ.ಕೆ.ಸಿ.ನಾರಾಯಣಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, 500 ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಲಿದೆ. 500 ಸ್ಪರ್ಧಾಳುಗಳಿಂದ ‘ಆಜಾದಿಯ ಅಮೃತ ಮಹೋತ್ಸವ’ದ ನೃತ್ಯ ರೂಪಕ ಮತ್ತು ಸಂಗೀತದ ಜೊತೆ ಬಹುವರ್ಣಗಳ ಲೇಸರ್‌ ಬೆಳಕಿನ ಪ್ರದರ್ಶನ ಇರಲಿದೆ. ಬಳಿಕ ವಿವಿ ಗೇಮ್ಸ್‌ ವಿಕಸನದ ‘ವಿಡಿಯೋ ಮಾಂಟೇಜ್‌’, ಪೋಸ್ಟಲ್‌ ಕವರ್‌ ಹಾಗೂ ಕಾಫಿ ಟೇಬಲ್‌ ಪುಸ್ತಕ ಬಿಡಗಡೆ ಮಾಡಲಾಗುತ್ತದೆ. ಕ್ರೀಡಾಕೂಟದಲ್ಲಿ ಅಗ್ರ 3 ಸ್ಥಾನ ಪಡೆದ ವಿವಿಗಳಿಗೆ ಟ್ರೋಫಿ ವಿತರಣೆ ಹಾಗೂ ಅತ್ಯುತ್ತಮ ಕ್ರೀಡಾಪಟುಗಳ ಘೋಷಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

“It’s not the end, it’s the beginning of Khelo Culture in India.” 🇮🇳

11 Days Sporting extravaganza will come to an end with a life changing closing ceremony. 🍀⚡️ pic.twitter.com/H1lUoZTh1y

— Doordarshan Sports (@ddsportschannel)

ಇಂದು ಕಂಠೀರವ ಕ್ರೀಡಾಂಗಣ ಸುತ್ತ ಸಂಚಾರ ಬದಲಾವಣೆ

ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮೇ 3ರಂದು ಖೇಲೋ ಇಂಡಿಯಾ-2021ರ ಸಮಾರೋಪ ಸಮಾರಂಭದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಗರ ಸಂಚಾರ ಪೊಲೀಸರು ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಅತಿಗಣ್ಯರು, ಗಣ್ಯರು, ಆಹ್ವಾನಿತರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚವಾಗುವ ಸಾಧ್ಯತೆಯಿದೆ. ಹೀಗಾಗಿ ರಾಜರಾಮ್‌ ಮೋಹನ್‌ರಾಯ್‌ ರಸ್ತೆ, ಕಸ್ತೂರ ಬಾ ರಸ್ತೆ ಹಾಗೂ ಮಲ್ಯ ರಸ್ತೆಗಳನ್ನು ಬಳಸುವ ವಾಹನ ಸವಾರರಿಗೆ ಪಯಾರ್ಯ ಮಾರ್ಗಗಳನ್ನು ಸೂಚಿಸಿದ್ದಾರೆ.

Khelo India University Games: ಜೈನ್ ಯೂನಿವರ್ಸಿಟಿ ಸಮಗ್ರ ಚಾಂಪಿಯನ್

ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ:

ಬೆಳಗ್ಗೆ 6ರಿಂದ ಕಾರ್ಯಕ್ರಮ ಮುಗಿಯುವರೆಗೆ ಕಸ್ತೂರ ಬಾ ರಸ್ತೆ, ಹಡ್ಸನ್‌ ವೃತ್ತದಿಂದ ಕ್ವೀನ್ಸ್‌ ವೃತ್ತದವರೆಗೆ, ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ರಾಜಾರಾಮ್‌ ಮೋಹನ್‌ ರಾಯ್‌ ಜಂಕ್ಷನ್‌ವರೆಗೆ, ಎನ್‌.ಆರ್‌.ರಸ್ತೆ, ಕೆ.ಜಿ.ರಸ್ತೆ, ನೃಪತುಂಗ ರಸ್ತೆ, ಹಳೇ ಅಂಚೆ ಕಚೇರಿ ರಸ್ತೆ, ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆ, ರಾಜಭವನ ರಸ್ತೆ, ದೇವರಾಜ ಅರಸ್‌ ರಸ್ತೆ, ಪ್ಯಾಲೇಸ್‌ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಟಿ.ಚೌಡಯ್ಯ ರಸ್ತೆ ಹಾಗೂ ಟೆಂಪಲ್‌ ಸ್ಟ್ರೀಟ್‌ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
 

click me!