
ಬೆಂಗಳೂರು (ಮೇ.24): ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ(ಪಿಸಿಐ) ಆಯೋಜಿಸುವ 8ನೇ ಆವೃತ್ತಿಯ ಭಾರತೀಯ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಅಂತಾರಾಷ್ಟ್ರೀಯ್ ಚಾಂಪಿಯನ್ಶಿಪ್ ಮೇ 26ರಿಂದ 28ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ನಡೆಯಲಿರುವ ಚಾಂಪಿಯನ್ಶಿಪ್ನಲ್ಲಿ ಭಾರತ ಸೇರಿ ಒಟ್ಟು 5 ರಾಷ್ಟ್ರಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.
ಭಾನುವಾರ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ ಅಧ್ಯಕ್ಷ ದೇವೆಂದ್ರ ಝಝಾರಿಯಾ ಅವರು ಚಾಂಪಿಯನ್ಶಿಪ್ ಬಗ್ಗೆ ಮಾಹಿತಿ ನೀಡಿದರು. ಈ ಚಾಂಪಿಯನ್ಶಿಪ್, ಅಕ್ಟೋಬರ್ 18ರಿಂದ 24ರ ವರೆಗೆ ಜಪಾನ್ನಲ್ಲಿ ನಡೆಯಲಿರುವ 5ನೇ ಆವೃತ್ತಿಯ ಏಷ್ಯನ್ ಪ್ಯಾರಾ ಗೇಮ್ಸ್ಗೆ ಆಯ್ಕೆ ಟ್ರಯಲ್ಸ್ ಆಗಿರಲಿದೆ ಎಂದು ಅವರು ತಿಳಿಸಿದರು.
ಚಾಂಪಿಯನ್ಶಿಪ್ನಲ್ಲಿ ಭಾರತದ 341 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಪ್ಯಾರಾಲಿಂಪಿಕ್ಸ್, ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್, ಏಷ್ಯನ್ ಪ್ಯಾರಾ ಗೇಮ್ಸ್ ಪದಕ ವಿಜೇತರು ಕೂಟದಲ್ಲಿ ಭಾಗವಹಿಸಲಿದ್ದಾರೆ. ಎರಡು ಬಾರಿ ಪ್ಯಾರಾಲಿಂಪಿಕ್ಸ್ ಹಾಗೂ ಮೂರು ಬಾರಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಚಿನ್ನ ವಿಜೇತ ಜಾವೆಲಿನ್ ಪಟು ಸುಮಿತ್ ಅಂಟಿಲ್ ಚಾಂಪಿಯನ್ಶಿಪ್ನ ಪ್ರಮುಖ ಆಕರ್ಷಣೆ ಎನಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಕಿರ್ಗಿಸ್ತಾನ, ಫಿಲಿಪ್ಪೀನ್ಸ್, ಶ್ರೀಲಂಕಾ, ಥಾಯ್ಲೆಂಡ್ನ ಸ್ಪರ್ಧಿಗಳೂ ಭಾಗವಹಿಸಲಿದ್ದಾರೆ. ಅಫ್ಘಾನಿಸ್ತಾನದ ಕೆಲ ಸ್ಪರ್ಧಿಗಳೂ ಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಚಾಂಪಿಯನ್ಶಿಪ್ನಲ್ಲಿ 100 ಮೀಟರ್, 200 ಮೀಟರ್, 400 ಮೀಟರ್, 800 ಮೀಟರ್, 1500 ಮೀಟರ್, ಹೈಜಂಪ್, ಲಾಂಗ್ ಜಂಪ್, ಡಿಸ್ಕಸ್ ಎಸೆತ, ಶಾಟ್ಪುಟ್, ಜಾವೆಲಿನ್ ಥ್ರೋ, ಕ್ಲಬ್ ಥ್ರೋ ಸೇರಿದಂತೆ ಪುರುಷ ಹಾಗೂ ಮಹಿಳೆಯರ ಒಟ್ಟು 155 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಸುಮಿತ್ ಅಂಟಿಲ್ ಅವರು ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಹಿಂದೆಂದಿಗಿಂತ ಈ ವರ್ಷ ಹೆಚ್ಚಿನ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತ 108 ಪದಕಗಳನ್ನು ಗೆದ್ದಿತ್ತು. ಈ ಬಾರಿ ಭಾರತೀಯ ಕ್ರೀಡಾಪಟುಗಳು ಮತ್ತಷ್ಟು ಪದಕ ಸಾಧನೆ ಮಾಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹೈಯರ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಎನ್.ಎಸ್.ಸತೀಶ್, ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ಮುಖ್ಯಸ್ಥ ಡಾ.ಸತ್ಯನಾರಾಯಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ 15 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಮಂಜುಳಾ, ಭಾರತಿ ಭಾರತೇಶ್, ಗಂಗವ್ವ ನೀಲಪ್ಪ, ಹರ್ಷಿತಾ, ಶೈಲಾ ಶಿಲ್ಪಾ, ಮೇಧಾ ಜಯಂತ್, ರಾಧಾ ವೆಂಕಟೇಶ್, ರಕ್ಷಿತಾ ರಾಜು, ಸೌಮ್ಯ, ಬಸವರಾಜ ಕುರುಬ, ಸಚ್ಚಿದಾನಂದ ದೇವಾಡಿಗ, ಗುರುರಾಜು, ಶಂಕರಪ್ಪ ಶರತ್, ರಕ್ಷಿತ್ ಹೊಸನಗರ ಸೋಮಶೇಖರ, ಸಿದ್ದಾರ್ಥ್ ಮಂಜುನಾಥ್ ಸ್ಪರ್ಧಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.