
ಕರ್ನಾಟಕ ಕ್ರೀಡಾ ಇಲಾಖೆಯ ವಿರುದ್ಧ ಕ್ರೀಡಾಪಟುಗಳ ಅಸಮಾಧಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮಿಷನ್ ಒಲಿಂಪಿಕ್ಸ್ ಯೋಜನೆಯಡಿ ಅರ್ಹ ಕ್ರೀಡಾಪಟುಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಮತ್ತು ರಾಜಕೀಯ ಪ್ರಭಾವವಿದೆ ಎಂಬ ಗಂಭೀರ ಆರೋಪಗಳು ಹೊರಹೊಮ್ಮಿವೆ.
ರಾಜ್ಯವನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಪದಕಗಳನ್ನು ಜಯಿಸಿದ ಕ್ರೀಡಾಪಟುಗಳೇ ಈ ಯೋಜನೆಯಿಂದ ಹೊರಗುಳಿದಿದ್ದಾರೆ ಎನ್ನುವುದು ಪ್ರಮುಖ ಆಕ್ಷೇಪವಾಗಿದೆ. ಒಲಿಂಪಿಕ್ಸ್ಗೆ ತಯಾರಿ ನಡೆಸುವ ಸಾಮರ್ಥ್ಯ ಹೊಂದಿರುವ ಕ್ರೀಡಾಪಟುಗಳಿಗೆ ಸರ್ಕಾರ ವರ್ಷಕ್ಕೆ ₹10 ಲಕ್ಷ ಆರ್ಥಿಕ ನೆರವು ನೀಡುವ ಮಿಷನ್ ಒಲಿಂಪಿಕ್ಸ್ ಯೋಜನೆ ಜಾರಿಯಲ್ಲಿದ್ದು, ನಾಲ್ಕು ವರ್ಷಗಳ ಕಾಲ ಈ ನೆರವು ನೀಡಲಾಗುತ್ತದೆ. ಆದರೆ ಈ ಸೌಲಭ್ಯ ಅರ್ಹರಿಗೆ ಸಿಗುತ್ತಿಲ್ಲ ಎಂಬುದು ಕ್ರೀಡಾಪಟುಗಳ ಆರೋಪ.
ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಮಾತನಾಡಿದ ಕ್ರೀಡಾಪಟು ಸ್ನೇಹಾ, “ನಾವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹಾಗೂ ಭಾರತವನ್ನು ಪ್ರತಿನಿಧಿಸಿ ಪದಕಗಳನ್ನು ಜಯಿಸಿದ್ದೇವೆ. ಆದರೂ ನಮ್ಮನ್ನು ಮಿಷನ್ ಒಲಿಂಪಿಕ್ಸ್ ಯೋಜನೆಯಲ್ಲಿ ಪರಿಗಣಿಸಲಾಗಿಲ್ಲ. ಯಾವುದೇ ಗಮನಾರ್ಹ ಸಾಧನೆ ಮಾಡದ ಕೆಲ ಕ್ರೀಡಾಪಟುಗಳನ್ನು ರಾಜಕೀಯ ಪ್ರಭಾವದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಾರ್ಗೆಟ್ ಒಲಿಂಪಿಕ್ ಸ್ಕೀಮ್ ಹಂಚಿಕೆ ಕುರಿತು ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ ತಯಾರಿಗೆ ವರ್ಷಕ್ಕೆ ₹10 ಲಕ್ಷ ನೀಡಲಾಗುತ್ತಿದೆ. ನಾವು ಕೂಡ ಅರ್ಜಿ ಸಲ್ಲಿಸಿದ್ದೇವೆ. ಆದರೆ ಕೇವಲ ಕೆಲವರಿಗೆ ಮಾತ್ರ ಹಣ ಜಮೆಯಾಗಿದೆ. ವಯಸ್ಸಿನ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 2024ರಲ್ಲಿಯೂ ಈ ಯೋಜನೆಯಡಿ ನನಗೆ ಯಾವುದೇ ನೆರವು ಸಿಗಲಿಲ್ಲ. ಆದರೆ ಹಣ ಪಡೆದ ಕೆಲವರು ಒಲಿಂಪಿಕ್ಸ್ಗೆ ಆಯ್ಕೆಯಾಗಲಿಲ್ಲ. ಈ ಬಾರಿಯೂ ಹಲವಾರು ಅರ್ಹ ಕ್ರೀಡಾಪಟುಗಳು ಹೊರಗುಳಿದಿದ್ದಾರೆ,” ಎಂದು ಆರೋಪಿಸಿದ್ದಾರೆ.
ಪೂವಮ್ಮ ಅವರು ಕೇಂದ್ರ ಸರ್ಕಾರದ ಟಾಪ್ (TOPS) ಯೋಜನೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿ, “ಅಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರ್ಯಾಂಕಿಂಗ್ ಹಾಗೂ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇದೇ ಮಾದರಿಯನ್ನು ಇಲ್ಲಿ ಕೂಡ ಅನುಸರಿಸಬೇಕು. ವಯಸ್ಸು ಮುಖ್ಯವಲ್ಲ, ಪ್ರದರ್ಶನವೇ ಮುಖ್ಯ ಮಾನದಂಡವಾಗಬೇಕು,” ಎಂದು ಹೇಳಿದ್ದಾರೆ.
ಕ್ರೀಡಾಪಟುಗಳು ಮುಖ್ಯಮಂತ್ರಿಗಳಿಗೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. 2024ರ ಒಲಿಂಪಿಕ್ಸ್ ತಯಾರಿ ಸಹಾಯಧನ ವಿತರಣೆ ಕುರಿತು ಸ್ಪಷ್ಟತೆ ಇಲ್ಲದಿರುವುದು ಹಾಗೂ ಹಣ ಪಡೆದವರ ಪಟ್ಟಿಯನ್ನು ಬಹಿರಂಗಪಡಿಸದಿರುವುದೂ ಅನುಮಾನಗಳಿಗೆ ಕಾರಣವಾಗಿದೆ.
ಇದಲ್ಲದೆ, 2028ರ ಒಲಿಂಪಿಕ್ಸ್ ತಯಾರಿ ಸಹಾಯಧನ ಸೇರಿದಂತೆ ಹಳೆಯ ಅನುದಾನಗಳ ವಿತರಣೆಯಲ್ಲೂ ರಾಜಕೀಯ ಹಸ್ತಕ್ಷೇಪವಿದೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರಭಾವ ಬಳಸಿ ಅನೇಕ ಕ್ರೀಡಾಪಟುಗಳ ಹೆಸರನ್ನು ಸೇರಿಸಲಾಗಿದೆ ಎಂಬುದು ಕ್ರೀಡಾಪಟುಗಳ ಮತ್ತೊಂದು ಗಂಭೀರ ಆರೋಪವಾಗಿದೆ.
ಒಟ್ಟಾರೆ, ಮಿಷನ್ ಒಲಿಂಪಿಕ್ಸ್ ಯೋಜನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ, ರಾಜಕೀಯ ಪ್ರಭಾವ ಮತ್ತು ಅರ್ಹ ಕ್ರೀಡಾಪಟುಗಳ ಕಡೆಗಣನೆ ಎಂಬ ಆರೋಪಗಳು ಕರ್ನಾಟಕ ಕ್ರೀಡಾ ಇಲಾಖೆಗೆ ಸವಾಲಾಗಿ ಪರಿಣಮಿಸಿವೆ. ತಕ್ಷಣವೇ ನ್ಯಾಯಸಮ್ಮತ ಹಾಗೂ ಪಾರದರ್ಶಕ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ತರುವಂತೆ ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.