Badminton World Championships: ಎರಡನೇ ಸುತ್ತಿಗೆ ಲಗ್ಗೆಯಿಟ್ಟ ಕಿದಂಬಿ ಶ್ರೀಕಾಂತ್

By Suvarna NewsFirst Published Dec 13, 2021, 8:03 AM IST
Highlights

* ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡಿದ ಕಿದಂಬಿ ಶ್ರೀಕಾಂತ್

* ಸ್ಪೇನ್‌ನ ಪಾಬ್ಲೊ ಏಬಿಯನ್ ವಿರುದ್ದ ಶ್ರೀಕಾಂತ್‌ಗೆ ಸುಲಭ ಜಯ

* ಪಿ.ವಿ. ಸಿಂಧು ತಮ್ಮ ಅಭಿಯಾನವನ್ನು ಮಂಗಳವಾರ ಆರಂಭಿಸಲಿದ್ದಾರೆ

ಸ್ಪೆನ್‌(ಡಿ.13): ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್‌ಶಿಪ್‌ನ (Badminton World Championships) ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1, ಭಾರತದ ಕಿದಂಬಿ ಶ್ರೀಕಾಂತ್ (Kidambi Srikanth) ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಭಾನುವಾರದಿಂದ ಆರಂಭಗೊಂಡ ಟೂರ್ನಿಯ ಮೊದಲ ಸುತ್ತಿನಲ್ಲಿ ಶ್ರೀಕಾಂತ್‌, ಸ್ಪೇನ್‌ನ ಪಾಬ್ಲೊ ಏಬಿಯನ್ ವಿರುದ್ದ 21-12, 21-16 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. 

ಇದೇ ವೇಳೆ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಬೈ ಪಡೆದಿರುವ ಹಾಲಿ ಚಾಂಪಿಯನ್‌, ಭಾರತದ ಪಿ.ವಿ. ಸಿಂಧು (PV Sindhu) ತಮ್ಮ ಅಭಿಯಾನವನ್ನು ಮಂಗಳವಾರ ಆರಂಭಿಸಲಿದ್ದಾರೆ. ಸಿಂಧುಗೆ ಎರಡನೇ ಸುತ್ತಿನಲ್ಲಿ ಸ್ಲೋವಾಕಿಯಾದ ಮಾರ್ಟಿನಾ ರೆಪಿಸ್ಕಾ ಎದುರಾಗಲಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 49ನೇ ಸ್ಥಾನದಲ್ಲಿರುವ ರೆಪಿಸ್ಕಾ ವಿರುದ್ದ ಸಿಂಧು ಸುಲಭ ಗೆಲುವು ಸಾಧಿಸುವ ನಿರೀಕ್ಷೆಯಿದೆ. 

ಇನ್ನುಳಿದಂತೆ ಮೂರನೇ ಸುತ್ತಿನಲ್ಲಿ 6ನೇ ಶ್ರೇಯಾಂಕಿತೆ ಥಾಯ್ಲೆಂಡ್‌ನ ಪೋರ್ನ್‌ಪಾವಿ ಚೊಚುವಾಂಗ್ ಎದುರಾಗುವ ಸಾಧ್ಯತೆಯಿದ್ದು, ಹಾಲಿ ಚಾಂಪಿಯನ್‌ ಸಿಂಧುವಿಗೆ ಕಠಿಣ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. 

ಬ್ಯಾಡ್ಮಿಂಟನ್‌: ಹಂಡೊಯೊ, ತಾನ್‌ ಕಿಮ್‌ ಮತ್ತೆ ಕೋಚ್‌?

ನವದೆಹಲಿ: ಇಂಡೋನೇಷ್ಯಾದ ಮುಲ್ಯೊ ಹಂಡೊಯೊ ಮತ್ತು ಮಲೇಷ್ಯಾದ ತಾನ್‌ ಕಿಮ್‌ಹೆರ್‌ ಭಾರತದ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗದ ಬ್ಯಾಡ್ಮಿಂಟನ್‌ ಕೋಚ್‌ಗಳಾಗಿ ಮತ್ತೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ರಾಷ್ಟ್ರೀಯ ಫೆಡರೇಷನ್‌ ಈ ತಿಂಗಳ ಅಂತ್ಯಕ್ಕೆ ಇವರಿಬ್ಬರ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ.

ಅಥೆನ್ಸ್‌ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ತೌಫಿಕ್‌ ಹಿದಾಯತ್‌ಗೆ ತರಬೇತಿ ನೀಡಿದ್ದ ಹಂಡೊಯೊ, ಅಲ್ಪ ಕಾಲ ಭಾರತದಲ್ಲಿ ಕೋಚ್‌ ಆಗಿ ಸೇವೆ ಸಲ್ಲಿಸಿದ್ದರು. 2017ರಲ್ಲಿ ಸಿಂಗಲ್ಸ್‌ ಆಟಗಾರರಾದ ಕಿದಂಬಿ ಶ್ರೀಕಾಂತ್‌, ಬಿ. ಸಾಯಿ ಪ್ರಣೀತ್‌, ಎಚ್‌.ಎಸ್‌.ಪ್ರಣಯ್‌ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಾನ್‌ ಅವರು ಭಾರತದ ಅತ್ಯುತ್ತಮ ಡಬಲ್ಸ್‌ ಜೋಡಿ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿಗೆ ಮಾರ್ಗದರ್ಶನ ನೀಡಿದ್ದರು. ಈ ಜೋಡಿ 2018ರ ಕಾಮನ್‌ವೆಲ್ತ್‌ನಲ್ಲಿ ಬೆಳ್ಳಿ ಮತ್ತು ತಂಡ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿತ್ತು.

BWF World Tour Finals: ಫೈನಲ್‌ನಲ್ಲಿ ಎಡವಿದ ಸಿಂಧುಗೆ ಬೆಳ್ಳಿ

ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಪ್ರಮುಖರಲ್ಲಿ ಮುಲ್ಯೊ ಮತ್ತು ತಾನ್‌ ಸೇರಿದ್ದು, ಭಾರತದ ಆಟಗಾರರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವುದರಿಂದ ಅವರ ಸೇವೆಗಳನ್ನು ಪಡೆಯಲು ಸಂಸ್ಥೆ ಬಯಸುತ್ತದೆ ಎಂದ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ ಕಾರ್ಯದರ್ಶಿ ಅಜಯ್‌ ಸಿಂಘಾನಿಯಾ ಹೇಳಿದ್ದಾರೆ.

ಐಒಸಿ ಚುನಾವಣೆ: ಸಚಿವ ರಾಜ್‌ನಾಥ್‌ ಪುತ್ರ ಸ್ಪರ್ಧೆ?

ನವದೆಹಲಿ: ಭಾರತೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) (Indian Olympic Association) ಅಧ್ಯಕ್ಷ ಸ್ಥಾನಕ್ಕೆ ಡಿಸೆಂಬರ್ 19ರಂದು ಚುನಾವಣೆ ನಡೆಯಲಿದ್ದು, ಈ ಬಾರಿ ಹಾಲಿ ಅಧ್ಯಕ್ಷ ನರೇಂದ್ರ ಬಾತ್ರಾಗೆ (Narinder Batra) ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ. ಕೆಲ ವರದಿಗಳ ಪ್ರಕಾರ, ಕೇಂದ್ರ ಸಚಿವ ರಾಜ್‌ನಾಥ್‌ ಸಿಂಗ್‌ (Rajnath Singh) ಪುತ್ರ, ಶಾಸಕ ಪಂಕಜ್‌ ಸಿಂಗ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ. 

Los Angeles Olympics 2028: ತಾತ್ಕಾಲಿಕ ಪಟ್ಟಿಯಿಂದ ಕ್ರಿಕೆಟ್ ಔಟ್..!

42 ವರ್ಷದ ಪಂಕಜ್‌ ಸದ್ಯ ಭಾರತದ ಫೆನ್ಸಿಂಗ್‌ ಒಕ್ಕೂಟ (ಎಫ್‌ಎಐ) ಅಧ್ಯಕ್ಷರಾಗಿದ್ದು, ಈ ಸ್ಥಾನಕ್ಕೆ ಕಳೆದ ವರ್ಷ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಪಂಕಜ್‌ ಸ್ಪರ್ಧೆಗೆ ಇಬ್ಬರು ಕೇಂದ್ರ ಸಚಿವರು ಬೆಂಬಲ ನೀಡಿದ್ದು, ಪಕ್ಷದ ವರಿಷ್ಠರು ಒಪ್ಪಿಗೆ ನೀಡಿದರೆ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

click me!