
ನವದೆಹಲಿ(ಫೆ.24): ಭಾರತದ ತಾರಾ ಕುಸ್ತಿಪಟುಗಳಾದ ಜಿತೇಂದರ್ ಕುಮಾರ್, ದೀಪಕ್ ಪೂನಿಯಾ ಹಾಗೂ ರಾಹುಲ್ ಅವಾರೆ, ಇಲ್ಲಿ ಭಾನುವಾರ ಮುಕ್ತಾಯವಾದ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್: ಚಿನ್ನಕ್ಕೆ ಮುತ್ತಿಟ್ಟ ರವಿ
ಕೊನೆಯ ದಿನದ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿಗಳು 1 ಬೆಳ್ಳಿ, 2 ಕಂಚು ಗೆದ್ದರು. ಒಟ್ಟಾರೆ ಭಾರತ 5 ಚಿನ್ನ, 6 ಬೆಳ್ಳಿ ಹಾಗೂ 9 ಕಂಚಿನೊಂದಿಗೆ 20 ಪದಕ ಗೆದ್ದಿದ್ದು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 8 ಚಿನ್ನದೊಂದಿಗೆ 16 ಪದಕ ಗೆದ್ದ ಜಪಾನ್ ಮೊದಲ ಸ್ಥಾನ ಪಡೆದರೆ, 7 ಚಿನ್ನದೊಂದಿಗೆ 17 ಪದಕ ಗೆದ್ದ ಇರಾನ್ 2ನೇ ಸ್ಥಾನ ಪಡೆಯಿತು.
74 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಫೈನಲ್ನಲ್ಲಿ ಜಿತೇಂದರ್, ಕಜಕಸ್ತಾನದ ದನಿಯರ್ ಕೈಸಾನೊವ್ ವಿರುದ್ಧ 1-3 ರಿಂದ ಸೋಲು ಕಂಡರು. ಫೈನಲ್ಗೇರುವ ಮೂಲಕ ಜಿತೇಂದರ್ ಟೋಕಿಯೋ ಒಲಿಂಪಿಕ್ಗೆ ಟಿಕೆಟ್ ಪಡೆದರು. 61 ಕೆ.ಜಿ. ವಿಭಾಗದ ಕಂಚು ಪದಕದ ಸ್ಪರ್ಧೆಯಲ್ಲಿ ರಾಹುಲ್ ಅವಾರೆ, ಇರಾನ್ನ ಮಜಿದ್ ಅಲ್ಮಾಸ್ ದಸ್ತಾನ್ ವಿರುದ್ಧ 5-2 ರಿಂದ ಗೆಲುವು ಸಾಧಿಸಿ ಕಂಚಿನ ಪದಕ ಗೆದ್ದರು. ಕಳೆದ ವರ್ಷ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ರಾಹುಲ್ ಕಂಚು ಗೆದ್ದಿದ್ದರು.
ಏಷ್ಯನ್ ಕುಸ್ತಿ: ಸಾಕ್ಷಿಗೆ ಬೆಳ್ಳಿ, ವಿನೇಶ್ಗೆ ಕಂಚು
86 ಕೆ.ಜಿ. ವಿಭಾಗದ ಕಂಚಿನ ಪದಕದ ಸ್ಪರ್ಧೆಯಲ್ಲಿ ದೀಪಕ್ ಪೂನಿಯಾ, ಇರಾಕ್ನ ಇಸಾ ಅಬ್ದುಸ್ಲಾಮ್ ಅಬ್ದುವಹಾಬ್ ವಿರುದ್ಧ 10-0 ಯಿಂದ ಜಯ ಪಡೆದರು. ಈಗಾಗಲೇ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿರುವ ದೀಪಕ್, ಕಳೆದ ವರ್ಷ ನಡೆದಿದ್ದ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.