ಪ್ರಧಾನಮಂತ್ರಿ ಆವಾಸ್ ಯೋಜನೆ(ವಸತಿ ಯೋಜನೆ), ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರಿನ ಯೋಜನೆ, ನೀರ್ ನಿರ್ಮಲ್, ಗ್ರಾಮೀಣ ಪೇಜಲ್ ಯೋಜನೆ ಇತ್ಯಾದಿ ವಿವಿಧ ಯೋಜನೆಗಳಿಗೆ ಯೋಗಿ ಇನ್ನಷ್ಟು ಚುರುಕು ಮುಟ್ಟಿಸಿದ್ದಾರೆ.
ಲಕ್ನೋ(ಏ. 23): ಸರಕಾರಿ ಕಚೇರಿಯಲ್ಲಿ ಸರಿಯಾಗಿ ಹಾಜರಾತಿ ಇರುವುದಿಲ್ಲ ಎಂಬ ಆರೋಪ ಸರ್ವೇಸಾಮಾನ್ಯ. ಈ ನಿಟ್ಟಿನಲ್ಲಿ ಸರಕಾರಿ ಆಡಳಿತಕ್ಕೆ ಚುರುಕು ಮುಟ್ಟಿಸಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದಾರೆ. ಬ್ಲಾಕ್ ಮಟ್ಟದ ಎಲ್ಲಾ ಸರಕಾರೀ ಕಚೇರಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಅಳವಡಿಸುವಂತೆ ಯೋಗಿ ಸೂಚನೆ ಹೊರಡಿಸಿದ್ದಾರೆ. ಎಲ್ಲಾ ಸರಕಾರಿ ನೌಕರರು ತಪ್ಪದೇ ಬಯೋಮೆಟ್ರಿಕ್ ಬಳಸಬೇಕಾಗುತ್ತದೆ.
ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ನಿನ್ನೆ ರಾತ್ರಿ ನಡೆದ ಸಭೆಯಲ್ಲಿ ಆದಿತ್ಯನಾಥ್ ಈ ಸೂಚನೆಯನ್ನು ಹೊರಡಿಸಿದ್ಧಾರೆ. ಇದೇ ವೇಳೆ, ಪ್ರತಿಯೊಂದು ಗ್ರಾಮಪಂಚಾಯಿತಿಯಲ್ಲೂ ಪಂ. ಅಧ್ಯಕ್ಷನ ಸಂಪರ್ಕ ವಿವರ ಹಾಗೂ ಚಾಲನೆಯಲ್ಲಿರುವ ಕಾಮಗಾರಿಗಳ ವಿವರಗಳನ್ನು ತೋರಿಸುವ ಬೋರ್ಡ್'ವೊಂದನ್ನು ಹಾಕಬೇಕು ಎಂದೂ ಯೋಗಿ ಆದೇಶ ಹೊರಡಿಸಿದ್ದಾರೆ.
ಪ್ರಧಾನಮಂತ್ರಿ ಆವಾಸ್ ಯೋಜನೆ(ವಸತಿ ಯೋಜನೆ), ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರಿನ ಯೋಜನೆ, ನೀರ್ ನಿರ್ಮಲ್, ಗ್ರಾಮೀಣ ಪೇಜಲ್ ಯೋಜನೆ ಇತ್ಯಾದಿ ವಿವಿಧ ಯೋಜನೆಗಳಿಗೆ ಯೋಗಿ ಇನ್ನಷ್ಟು ಚುರುಕು ಮುಟ್ಟಿಸಿದ್ದಾರೆ.