ತುಳುನಾಡಿನ ದೈವಾರಾದನೆ ನೋಡಿ ಸಂಭ್ರಮಪಟ್ಟ ಯದುವೀರ್

By Suvarna Web DeskFirst Published Mar 9, 2018, 2:59 PM IST
Highlights

ತುಳುನಾಡಿನ ದೈವಗಳ ಶಕ್ತಿಯೇ ಹಾಗೆ. ತಿಂಗಳೆ ಗರಡಿಗೆ ಮೈಸೂರಿನ ಅರಸರನ್ನು ಕರೆಸಬೇಕು ಎಂದು ಗುತ್ತಿನ ಮನೆಯ ಹೆಗ್ಗಡೆಯವರು ಎಂದೋ ಅಪೇಕ್ಷಿಸಿದ್ದರು. ಕೊನೆಗೂ ಕಾಲ ಕೂಡಿ ಬಂತು. ಕರಾವಳಿಯ ಕಾರಣಿಕದ ಶಿವಗಣ ಶಿವರಾಯ ದೈವವನ್ನು ಕಾಣಲು ಸ್ವತ: ಯದುವೀರರು ಆಗಮಿಸಿದ್ದು ವಿಶೇಷವಾಗಿತ್ತು. 

ಉಡುಪಿ (ಮಾ.09): ತುಳುನಾಡಿನ ದೈವಗಳ ಶಕ್ತಿಯೇ ಹಾಗೆ. ತಿಂಗಳೆ ಗರಡಿಗೆ ಮೈಸೂರಿನ ಅರಸರನ್ನು ಕರೆಸಬೇಕು ಎಂದು ಗುತ್ತಿನ ಮನೆಯ ಹೆಗ್ಗಡೆಯವರು ಎಂದೋ ಅಪೇಕ್ಷಿಸಿದ್ದರು. ಕೊನೆಗೂ ಕಾಲ ಕೂಡಿ ಬಂತು. ಕರಾವಳಿಯ ಕಾರಣಿಕದ ಶಿವಗಣ ಶಿವರಾಯ ದೈವವನ್ನು ಕಾಣಲು ಸ್ವತ: ಯದುವೀರರು ಆಗಮಿಸಿದ್ದು ವಿಶೇಷವಾಗಿತ್ತು.

ಪಶ್ಚಿಮ ಘಟ್ಟದ ತಪ್ಪಲಿನ ದಟ್ಟ ಕಾನನದಲ್ಲಿ ನಿನ್ನೆ ಅರಮನೆಯ ವೈಭವ. ಉಡುಪಿಯ ಹೆಬ್ರಿ ಸಮೀಪದ ರಕ್ಷಿತಾರಣ್ಯದ ನಡುವೆ ಇರುವ ತಿಂಗಳೆ ಗರಡಿಗೆ ಮೈಸೂರು ಅರಸರು ಬಂದಿದ್ದರು. ತಡರಾತ್ರಿಯವರೆಗೂ ದಟ್ಟ ಅರಣ್ಯದಲ್ಲಿ ಕುಳಿತು ದೈವದ ದರ್ಶನ ನೋಡಿದರು. ತಿಂಗಳೆ ಗರಡಿಯಲ್ಲಿ ದಶಕಗಳಿಂದ ದೈವಾರಾಧನೆ ನಡೆಯುತ್ತಿದೆ. ಅದರಲ್ಲೂ ಶಿವಗಣವಾದ ಶಿವರಾಯ ದೈವದ ಆರಾಧನೆ ಇಲ್ಲಿನ ವಿಶೇಷ. ಶಿವರಾಯ ಕೊಟ್ಟ ಅಭಯ ಎಂದೂ ಸುಳ್ಳಾಗಿಲ್ಲ ಅನ್ನೋದು ತುಳುವರ ನಂಬಿಕೆ. ಚಾವಡಿಯ ಆಸನದಲ್ಲಿ ಕುಳಿತು ದೈವ ನರ್ತನ ವೀಕ್ಷಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರೋಮಾಂಛನಗೊಂಡಿದ್ದರು. ದೈವದ ಆವೇಶ, ನರ್ತನ, ಅಭಯದ ಭರವಸೆಯಿಂದ ಖುಷಿಯಾಗಿದ್ದರು. ತಡರಾತ್ರಿ 12 ಗಂಟೆಯವರೆಗೂ ಗರಡಿಯ ಚಾವಡಿಯಲ್ಲಿ ಆಸೀನರಾಗಿ ದೈವದ ಕೋಲ ನೋಡಿದರು.

ತುಳುನಾಡಿನ ದೈವಗಳ ಬಗ್ಗೆ ಅನೇಕ ನಂಬಿಕೆಗಳಿವೆ. ಈ ಸನ್ನಿಧಿಯಲ್ಲಿ ಬೇಡಿದ್ದು ಈಡೇರುತ್ತೆ ಅನ್ನೋ ವಿಶ್ವಾಸವಿದೆ. ಗರಡಿಯ ಮುಖ್ಯಸ್ಥ ವಿಕ್ರಮಾರ್ಜುನ ಹೆಗ್ಗಡೆಯವರು ಮೈಸೂರಿಗೆ ಹೋದಾಗ ತನ್ನ ಹಳ್ಳಿಗೆ ಅರಸರನ್ನು ಕರೆಸುವ ಕನಸು ಕಂಡಿದ್ದರು. ಇದಕ್ಕಾಗಿ ದೈವದಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸಿದ್ದರು. ಕೊನೆಗೂ ಒಲಿದ ದೈವ, ಅರಸರನ್ನು ತಿಂಗಳೆ ಗರಡಿಗೆ ಕರೆಸಿಕೊಂಡು ಅಭಯಕೊಟ್ಟಿತು. ದೈವವು ಅರಸರಿಂದ ಕೇಳಿ ಹೂವಿನ ಮಾಲೆ ಹಾಕಿಸಿಕೊಂಡದ್ದು ವಿಶೇಷವಾಗಿತ್ತು. ಶಿವರಾಯ ಕೋಲ ಈ ಭಾಗದಲ್ಲಿ ನಡೆಯುವ ಅಪರೂದ ದೈವ ನರ್ತನವಾಗಿದ್ದು, ಅರಸರ ಈ ಬೇಟಿ ತುಳುನಾಡಿನ ಇತಿಹಾಸದಲ್ಲಿ ದಾಖಲಾಗಲಿದೆ.

ದೈವಗಳಿಗೆ ಶರಣೆಂದ ಅರಸರು, ಗರಡಿಯ ಕೆರೆಯಲ್ಲಿರುವ ದೇವರ ಮೀನಿಗೆ ಆಹಾರ ಉಣ್ಣಿಸಿದರು. ನಗರ ಜೀವನದಿಂದ ಹೊರತಾದ ಪ್ರಾಕೃತಿಕ ಅರಮನೆಯಲ್ಲಿ ವಿಹರಿಸಿದ್ದು ಅರಸರಿಗೂ ಹೊಸ ಅನುಭವ ನೀಡಿತ್ತು.

 

click me!