ಈ ಇಬ್ಬರು ನಾಯಕರು ಬಿಜೆಪಿ ತೊರೆದು ಮತ್ತೊಂದು ಪಕ್ಷವನ್ನು ಸೇರ್ಪಡೆಗೊಳ್ಳಲು ಸಜ್ಜಾಗುತ್ತಿದ್ದಾರೆ. ಆಪ್ ನಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.
ನವದೆಹಲಿ: ಸದಾ ಕಾಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಹಾಗೂ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಅವರು ಆಪ್ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ಲದೆ, ಯಶವಂತ್ ಸಿನ್ಹಾ ಅವರು ನವದೆಹಲಿ ಕ್ಷೇತ್ರ ಮತ್ತು ಶತ್ರುಘ್ನ ಅವರು ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರೆ ಎಂದು ರಿಪಬ್ಲಿಕ್ ಟೀವಿ ಚಾನೆಲ್ ವರದಿ ಮಾಡಿದೆ. ಆದರೆ, ಈ ವರದಿಯನ್ನು ಆಪ್ ಇದುವರೆಗೂ ಖಚಿತ ಪಡಿಸಿಲ್ಲ.
ಆದಾಗ್ಯೂ, ಪಕ್ಷ ಸೇರ್ಪಡೆ ಕುರಿತು ಆಪ್ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ನೇರವಾಗಿ ಯಶವಂತ್ ಹಾಗೂ ಶತ್ರುಘ್ನ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ.
ಯಶವಂತ್ ಸಿನ್ಹಾ ಅವರು 2018ರ ಏ.21ರಂದೇ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಶತ್ರುಘ್ನ ಅವರು ಪಕ್ಷ ತ್ಯಜಿಸದೇ ಇದ್ದರೂ, ಕೇಂದ್ರ ಸರ್ಕಾರದ ಪ್ರತಿಯೊಂದು ನಿಲುವುಗಳನ್ನು ಟೀಕಿಸುತ್ತಲೇ ಬಂದಿದ್ದಾರೆ.