ಪಣಜಿ: ಗೋಮಾಂಸ ವರ್ತಕರ ವಿರುದ್ಧ ಯಾವುದೇ ದೌರ್ಜನ್ಯ ನಡೆಯದಂತೆ ಖಾತ್ರಿ ಪಡಿಸುವ ಬಗ್ಗೆ ಗೋವಾ ಸರ್ಕಾರ ಭರವಸೆ ನೀಡಿದ್ದು, ಗೋಮಾಂಸ ವರ್ತಕರು ಮುಷ್ಕರವನ್ನು ವಾಪಾಸು ಪಡೆದಿದ್ದಾರೆ.
ಕಳೆದ ನಾಲ್ಕು ದಿನದಿಂದ ರಾಜ್ಯದಲ್ಲಿ ಬೀಫ್ ವರ್ತಕರು ಮುಷ್ಕರ ನಡೆಸಿದ್ದ ಹಿನ್ನೆಲೆಯಲ್ಲಿ ಗೋವಾದಲ್ಲಿ ಬೀಫ್ ಕೊರತೆಯುಂಟಾಗಿತ್ತು.
ಕಾನೂನುಬದ್ಧ ಗೋಮಾಂಸ ಸಾಗಾಟದಲ್ಲಿ ಯಾರೇ ತಡೆಯೊಡ್ಡಿದರೂ ಅವರಿಗೆ ಶಿಕ್ಷೆಯಾಗಲಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.
ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ, ದಾಖಲೆಗಳು ಸಮರ್ಪಕವಾಗಿದ್ದಲಿ ವರ್ತಕರಿಗೆ ಯಾವುದೇ ತೊಂದರೆಯಾಗಕೂಡದು, ಎಂದು ಪರ್ರಿಕರ್ ಹೇಳಿದ್ದಾರೆ.
ನಕಲಿ ‘ಗೋರಕ್ಷಕ’ರ ಕಾಟದಿಂದ ಕರ್ನಾಟಕದ ಬೀಫ್ ವರ್ತಕರು ಮಾಂಸದ ಸರಬರಾಜು ನಿಲ್ಲಿಸಿದ್ದರು. ಸ್ವಯಂಘೋಷಿತ ಗೋರಕ್ಷಕರು ಗೋಮಾಂಸ ಸಾಗಾಟಗಾರರಿಗೆ ಕಿರುಕುಳ ನೀಡುತ್ತಿದ್ದು, ಸರ್ಕಾರ ಕ್ರಮ ಕೈಗೊಳ್ಳುವವರೆಗೆ ಮಾಂಸ ಪೂರೈಸದಿರಲು ವರ್ತಕರು ನಿರ್ಧರಿಸಿದ್ದರು.
ಮಹಾರಾಷ್ಟ್ರ ಬೀಫ್ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ಬಳಿಕ, ಗೋವಾಕ್ಕೆ ಕರ್ನಾಟಕದ ಬೆಳಗಾವಿಯಿಂದ ಸುಮಾರು 25 ಟನ್ ಗೋಮಾಂಸ ಪೂರೈಕೆಯಾಗುತ್ತದೆ.