
ಮೈಸೂರು(ಜು.14): ತಮ್ಮ ಪುತ್ರ ಯತೀಂದ್ರರನ್ನ ರಾಜ್ಯ ರಾಜಕಾರಣದಲ್ಲಿ ಪ್ರತಿಷ್ಠಾಪಿಸೋಕೆ ಸಿದ್ದರಾಮಯ್ಯ ರೆಡಿಯಾಗಿದ್ದು,ಮುಂದಿನ ಚುನಾವಣೆಗೆ ವರುಣಾ ಕ್ಷೇತ್ರದಿಂದ ಯತೀಂದ್ರರನ್ನು ಕಣಕ್ಕಿಳಿಸಲು ಸಜ್ಜಾಗಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಲ್ಲಿ ಯತೀಂದ್ರ ಸ್ವಲ್ಪ ಜಾಸ್ತಿನೇ ಆಕ್ಟೀವ್ ಆಗಿದ್ದಾರೆ.
ಇದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ .ಡಿ .ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಎತ್ತಿರುವ ಪ್ರಶ್ನೆ. ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಹಾಗಿರಲಿ, ಖುದ್ದು ಸಿದ್ದರಾಮಯ್ಯ ಗೆಲ್ತಾರೋ ಇಲ್ಲವೋ ಅನ್ನೋದನ್ನ ಖಾತರಿ ಪಡಿಸಿಕೊಳ್ಳುವಂತೆ ಹೇಳ್ತಿರೋದನ್ನು ನೋಡಿದ್ರೆ ಸಿದ್ದರಾಮಯ್ಯರನ್ನ ಸೋಲಿಸಲು ಜೆಡಿಎಸ್ ಗೇಮ್ ಪ್ಲಾನ್ ಮಾಡಿಕೊಂಡಿರೋದಂತೂ ಸ್ಪಷ್ಟ. ಆದರೆ, ಇನ್ನೊಂದೆಡೆ ಇವತ್ತೇ ಸಿಎಂ ಸಿದ್ದರಾಮಯ್ಯ ತಮ್ಮ ವರುಣಾ ಕ್ಷೇತ್ರದಲ್ಲಿ ಪುತ್ರನ ಪ್ರತಿಷ್ಠಾಪನೆಯ ಮುನ್ಸೂಚನೆ ನೀಡಿದ್ದಾರೆ.
ಸೋಲಿನ ಭೀತಿಯೋ ? ಪುತ್ರನ ಪ್ರತಿಷ್ಠಾಪನೆಯೋ ?
ಈ ಮೊದಲು ಸಿದ್ದರಾಮಯ್ಯ ತಮ್ಮ ಪುತ್ರ ರಾಕೇಶರನ್ನ ವರುಣಾದಿಂದ ಕಣಕ್ಕಿಳಿಸೋ ಪ್ಲಾನ್ ಮಾಡಿದ್ದರು. ಆದರೆ ಅವರ ಅಕಾಲಿಕ ಮರಣದ ನಂತರ ಮತ್ತೋರ್ವ ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡಲು ತೀರ್ಮಾನಿಸಿದ್ದಾರೆ. ಇವತ್ತು ಮಾತನಾಡಿದ ಸಿದ್ದರಾಮಯ್ಯ, ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಫರ್ಧಿಸುತ್ತೇನೆ. ಮಗ ಯತೀಂದ್ರ, ಡಾಕ್ಟರ್ ಕೆಲಸ ಬಿಟ್ಟು ಬಂದಿದ್ದಾನೆ. ಕಳೆದ ಬಾರಿ ನನಗೆ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಿದಂತೆ, ಮುಂದಿನ ಸಲ ಅವನಿಗೂ ಆಶೀರ್ವದಿಸಿ ಅಂತಾ ಕೇಳಿಕೊಂಡರು.
ಆದರೆ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಬದಲಿಸುವ ಯೋಚನೆಯನ್ನು ನೋಡಿದರೆ ಕಳೆದ ನಾಲ್ಕು ವರ್ಷಗಳಲ್ಲಿ ವರುಣಾ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಎಡವಿದ್ದಾರಾ ಅನ್ನೋ ಪ್ರಶ್ನೆಯೂ ಎದ್ದೆಳುತ್ತೆ. ಹಾಗೆಯೇ ಚಾಮುಂಡೇಶ್ವರಿ ಕ್ಷೇತ್ರ ಕೂಡ ಸಿದ್ದರಾಮಯ್ಯನವರಿಗೆ ಮುಂದಿನ ಚುನಾವಣೆಯಲ್ಲಿ ಸುಲಭದ ತುತ್ತೇನೂ ಅಲ್ಲ. ಇದರ ನಡುವೆಯೇ ಪುತ್ರನಿಗೆ ಮಣೆ ಹಾಕಲು ಹೊರಟಿರುವ ಸಿಎಂ ನಡೆ ವಿಪಕ್ಷಗಳ ಟೀಕೆಗೆ ಕಾರಣವಾಗಿದೆ.
ಅದೇನೇ ಇರಲಿ, ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರನನ್ನ ರಾಜ್ಯ ರಾಜಕಾರಣದಲ್ಲಿ ಪ್ರತಿಷ್ಠಾಪಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ. ದೇವೇಗೌಡ, ಯಡಿಯೂರಪ್ಪ ನಂತರ ಇದೀಗ ಸಿದ್ದರಾಮಯ್ಯ ಕೂಡಾ ಮಗನ ರಾಜಕೀಯ ಬದುಕು ರೂಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.