
ನವದೆಹಲಿ (ಸೆ.09): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ವಾಗ್ದಾಳಿ ನಡೆಸಿದೆ. ಗೌರಿ ಲಂಕೇಶ್ ನಕ್ಸಲೀಯರನ್ನು ಸರ್ಕಾರದ ಮುಂದೆ ಶರಣಾಗುವಂತೆ ಮಾಡಿದ್ದರು. ಆದರೂ ಅವರಿಗೆ ಕರ್ನಾಟಕ ಸರ್ಕಾರ ಭದ್ರತೆಯನ್ನೇಕೆ ನೀಡಲಿಲ್ಲ ಎಂದು ಪ್ರಶ್ನಿಸಿದೆ.
ಗೌರಿ ಲಂಕೇಶ್ ಹತ್ಯೆ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಗೌರಿ ಲಂಕೇಶ್ ನಕ್ಸಲೀಯರನ್ನು ಶರಣಾಗುವಂತೆ ಮಾಡಲು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಯತ್ನಿಸುತ್ತಿದ್ದರು ಎಂದು ಅವರ ಸಹೋದರ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಈ ಯತ್ನವನ್ನು ಸರ್ಕಾರದ ಒಪ್ಪಿಗೆಯಿಂದಲೇ ಮಾಡುತ್ತಿದ್ದರಾ? ಹಾಗಿದ್ದರೆ ಅವರಿಗೆ ಸರ್ಕಾರ ಸೂಕ್ತ ಭದ್ರತೆಯನ್ನೇಕೆ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ನಕ್ಸಲೀಯರು ಈ ಶರಣಾಗತಿಯ ಬಗ್ಗೆ ಅಸಮಾಧಾನವಿತ್ತು ಎಂದು ಹೇಳಲಾಗಿದೆ. ಆದರೂ ಭದ್ರತೆ ನೀಡದೇ ಸುಮ್ಮನಿದ್ದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಈ ವಿಷಾದನೀಯ ಹಾಗೂ ದುರಾದೃಷ್ಟಕರ ಹತ್ಯೆ ಬಗ್ಗೆ ಅನೇಕ ದುರುದ್ದೇಶ ಹೇಳಿಕೆಗಳು, ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿವೆ. ಇವು ಸರಿಯಲ್ಲಿ ಎಂದು ರವಿಶಂಕರ್ ಪ್ರಸಾದ್ ಖಂಡಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಬಗ್ಗೆ ಆರ್'ಎಸ್'ಎಸ್ ಮತ್ತು ಬಿಜೆಪಿಯನ್ನು ದೂಷಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿರುವ ರವಿಶಂಕರ್ ಪ್ರಸಾದ್, ಪಕ್ಷದ ಜವಾಬ್ದಾರಿಯುವ ಸ್ಥಾನದಲ್ಲಿರುವವರೇ ಈ ರೀತಿ ಹೇಳಿಕೆ ನೀಡಿದಾಗ ಈ ಪಕ್ಷದ ಅಧೀನದಲ್ಲಿ ಕೆಲಸ ಮಾಡುವ ಪೊಲೀಸರು ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿಯಾರು ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.