
ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಉಗ್ರಸಂಘಟನೆಯು ನಿನ್ನೆ ಇರಾನ್ ದೇಶದ ರಾಜಧಾನಿಯಲ್ಲಿ ದಾಳಿ ನಡೆಸಿ ಹಲವು ಮಂದಿಯನ್ನು ಕೊಂದ ಘಟನೆ ವರದಿಯಾಗಿದೆ. ಇರಾನ್ ದೇಶ ಸಾಂಪ್ರದಾಯಿಕ ಇಸ್ಲಾಮಿಕ್ ದೇಶವಾಗಿದ್ದರೂ ಐಸಿಸ್ ಯಾಕೆ ಇಂಥ ದಾಳಿ ನಡೆಸಿತು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಮುಸ್ಲಿಮರಲ್ಲಿ ಸುನ್ನಿ ಮತ್ತು ಶಿಯಾ ಎಂಬ ಎರಡು ಪಂಗಡಗಳಿವೆ. ಮುಸ್ಲಿಂ ರಾಷ್ಟ್ರಗಳಲ್ಲಿ ಹಿಂಸಾಚಾರ ನಡೆಯುತ್ತಿರುವುದು ಇವೆರಡು ಪಂಡಗಳ ಅಭಿಪ್ರಾಯಭೇದದಿಂದಲೇ. ಇರಾನ್ ದೇಶವು ಶಿಯಾ ಪ್ರಧಾನ ದೇಶವಾಗಿದೆ. ಆದರೆ, ಐಸಿಸ್ ಉಗ್ರರು ಸುನ್ನಿ ಪಂಗಡದವರಾಗಿದ್ದಾರೆ. ಐಸಿಸ್ ಸಂಘಟನೆಯು ಶಿಯಾ ಪಂಡಗದವರನ್ನು ಧರ್ಮದ್ರೋಹಿಗಳೆಂದು ಪರಿಗಣಿಸುತ್ತದೆ. ಅಲ್ಲದೆ ಸಿರಿಯಾ ಮತ್ತು ಇರಾಕ್'ನಲ್ಲಿ ಐಸಿಸ್ ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಇರಾನ್ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ, ಸೇಡು ತೀರಿಸಿಕೊಳ್ಳಲು ಐಸಿಸ್ ಉಗ್ರರು ಈ ದಾಳಿ ನಡೆಸಿದ್ದಾರೆ.
ಇರಾನ್ ದೇಶದ ಮೇಲೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ದಾಳಿ ನಡೆಸಿದ್ದು ಇದೇ ಮೊದಲು. ಭಾರತದ ಸಂಸತ್ತಿನ ಮೇಲೆ 2001ರಲ್ಲಿ ನಡೆಸಿದ ದಾಳಿಯ ರೀತಿಯಲ್ಲೇ ಇರಾನ್'ನ ಸಂಸತ್ತಿನ ಮೇಲೆ ದಾಳಿ ನಡೆದಿದೆ. ಜೊತೆಗೆ ದೇಶದ ಕ್ರಾಂತಿಕಾರಿ ನಾಯಕ ಅಯಾತುಲ್ಲಾ ಖೊಮೇನಿ ಅವರ ಸ್ಮಾರಕದ ಮೇಲೆ ‘ಮಹಿಳಾ ವೇಷಧಾರಿ' ಪುರುಷ ಬಂದೂಕುಧಾರಿಗಳು ಹಾಗೂ ಆತ್ಮಹತ್ಯಾ ದಾಳಿಕೋರರು ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ 12 ಮಂದಿ ಸಾವನ್ನಪ್ಪಿ, 45 ಗಾಯಗೊಂಡಿದ್ದಾರೆ. ಇದೇ ವೇಳೆ, ದಾಳಿ ಮಾಡಿದ ಐವರೂ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.
ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಈಗಾಗಲೇ ಸಿರಿಯಾ, ಇರಾಕ್ ಮೊದಲಾದ ದೇಶಗಳಲ್ಲಿ ಸಾಕಷ್ಟು ಪ್ರಾಬಲ್ಯ ಸಾಧಿಸಿದೆ. ಭಾರತದಲ್ಲಿ ಇತ್ತೀಚೆಗೆ ಬಾಲಬಿಚ್ಚಲು ಪ್ರಯತ್ನಿಸುತ್ತಿದೆ. ಇಡೀ ವಿಶ್ವದಲ್ಲಿ ಏಕಮೇವ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುವುದು ಆ ಸಂಘಟನೆಯ ಧ್ಯೇಯೋದ್ದೇಶ.
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.