
ನವದೆಹಲಿ: ಹತ್ತನೇ ತರಗತಿ ಗಣಿತ ಪ್ರಶ್ನಾ ಪತ್ರಿಕೆ ಸೋರಿಕೆಯ ಶಂಕೆ ಹಿನ್ನೆಲೆಯಲ್ಲಿ, ಮರು ಪರೀಕ್ಷೆ ನಡೆಸುವ ಯೋಜನೆ ಏನಾದರೂ ಇದೆಯಾ? ಎಂದು ದೆಹಲಿ ಹೈಕೋರ್ಟ್ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯನ್ನು ಪ್ರಶ್ನಿಸಿದೆ. ಮರು ಪರೀಕ್ಷೆ ನಡೆಸುವ ಸಾಧ್ಯತೆಯ ಕುರಿತಂತೆ ಮಾಹಿತಿ ನೀಡುವಂತೆ ಪ್ರಭಾರಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾ. ಹರಿಶಂಕರ್ ನ್ಯಾಯಪೀಠ ನಿರ್ದೇಶಿಸಿದೆ.
ಅಲ್ಲದೆ, 10ನೇ ತರಗತಿ ಗಣಿತ ಮತ್ತು 12ನೇ ತರಗತಿ ಅರ್ಥಶಾಸ್ತ್ರ ಪ್ರಶ್ನಾಪತ್ರಿಕೆ ಸೋರಿಕೆಯಾಗಿರುವ ಕುರಿತು ಕೋರ್ಟ್ ನಿಯಂತ್ರಿತ ಸಮಗ್ರ ತನಿಖೆ ನಡೆಸುವ ಕುರಿತಂತೆ ತಮ್ಮ ನಿಲುವು ತಿಳಿಸುವಂತೆ ಕೇಂದ್ರ ಹಾಗೂ ಸಿಬಿಎಸ್ಇಗೆ ಕೋರ್ಟ್ ನೋಟಿಸ್ ಕೂಡ ಜಾರಿಗೊಳಿಸಿದೆ.
ಜುಲೈನಲ್ಲಿ ಮರು ಪರೀಕ್ಷೆ ನಡೆಸುವುದಾದರೆ, ಅಲ್ಲಿ ವರೆಗೆ ವಿದ್ಯಾರ್ಥಿಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವುದು ಹೇಗೆ? ಎಂದು ಸಿಬಿಎಸ್ಇಯನ್ನು ಕೋರ್ಟ್ ಪ್ರಶ್ನಿಸಿದೆ. ವಿದ್ಯಾರ್ಥಿಗಳ ಒಂದು ಶೈಕ್ಷಣಿಕ ವರ್ಷವನ್ನು ಸಿಬಿಎಸ್ಇ ನಷ್ಟಮಾಡುತ್ತಿದೆ ಮಾತ್ರವಲ್ಲದೆ, ಅವರ ತಲೆಗಳ ಮೇಲೆ ತೂಗುಗತ್ತಿ ನೆಟ್ಟಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. 10ನೇ ತರಗತಿ ಗಣಿತ ಪರೀಕ್ಷೆಯನ್ನು ಮತ್ತೆ ನಡೆಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ. ಮರು ಪರೀಕ್ಷೆ ದೇಶಾದ್ಯಂತ ನಡೆಸಬೇಕೇ? ಅಥವಾ ದೆಹಲಿ, ಹರ್ಯಾಣಕ್ಕೆ ಮಾತ್ರ ಸೀಮಿತಗೊಳಿಸಬೇಕೇ? ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಸಿಬಿಎಸ್ಇ ಕೋರ್ಟ್ಗೆ ತಿಳಿಸಿದೆ.
ಏ.16ರೊಳಗೆ ನಿರ್ಧಾರ ತೆಗೆದುಕೊಂಡು ಮಾಹಿತಿ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಸೋಶಿಯಲ್ ಜ್ಯೂರಿಸ್ಟ್ ಎಂಬ ಎನ್ಜಿಒ ಈ ಕುರಿತು ಅರ್ಜಿ ಸಲ್ಲಿಸಿತ್ತು. ಮರು ಪರೀಕ್ಷೆ ನಡೆಸುವುದಾದರೆ, ಜುಲೈ ಬದಲು ಏಪ್ರಿಲ್ನಲ್ಲೇ ನಡೆಸುವಂತೆ ನಿರ್ದೇಶಿಸಲು ಅದು ಕೋರ್ಟ್ಗೆ ವಿನಂತಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.