‘ಕರಾಳತೆಯ ಪಡೆಗಳಿಂದ’ ಪ್ರಜಾಸತ್ತೆ ಹಾಳಾಗುತ್ತಿದೆ ಎಂದು ಭೀತಿ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕ್ವಿಟ್ ಇಂಡಿಯಾ ಚಳವಳಿಯನ್ನು ಆರೆಸ್ಸೆಸ್ ಹಾಗೂ ಇನ್ನಿತರ ಕೆಲವು ಸಂಘಟನೆಗಳು ವಿರೋಧಿಸಿದ್ದವು. ಈ ಸಂಘಟನೆಗಳು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಏನೂ ಮಾಡಿಲ್ಲ ಎಂದು ಅವುಗಳ ಹೆಸರೆತ್ತದೇ ಕಿಡಿಕಾರಿದ್ದಾರೆ.
ನವದೆಹಲಿ(ಆ.10): ‘ಕರಾಳತೆಯ ಪಡೆಗಳಿಂದ’ ಪ್ರಜಾಸತ್ತೆ ಹಾಳಾಗುತ್ತಿದೆ ಎಂದು ಭೀತಿ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕ್ವಿಟ್ ಇಂಡಿಯಾ ಚಳವಳಿಯನ್ನು ಆರೆಸ್ಸೆಸ್ ಹಾಗೂ ಇನ್ನಿತರ ಕೆಲವು ಸಂಘಟನೆಗಳು ವಿರೋಧಿಸಿದ್ದವು. ಈ ಸಂಘಟನೆಗಳು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಏನೂ ಮಾಡಿಲ್ಲ ಎಂದು ಅವುಗಳ ಹೆಸರೆತ್ತದೇ ಕಿಡಿಕಾರಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಸೋನಿಯಾ, ‘ಕೆಲವು ಸಂಘಟನೆಗಳು ಕ್ವಿಟ್ ಇಂಡಿಯಾ ಚಳವಳಿಯನ್ನೇ ವಿರೋಧಿಸಿದವು. ಈ ಸಂಘಟನೆಗಳ ಕೊಡುಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶೂನ್ಯ’ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಹುತೇಕ ಬಿಜೆಪಿ ಸದಸ್ಯರು ಸುಮ್ಮನಿದ್ದರು. ಬಿಜೆಪಿ ಸದಸ್ಯೆ ಕಿರಣ್ ಖೇರ್ ಮಾತ್ರ ‘ಸುಳ್ಳು.. ಸುಳ್ಳು’ ಎಂದು ಕೂಗಿದರೂ ಇತರ ಬಿಜೆಪಿ ಸದಸ್ಯರು ಅವರನ್ನು ಸುಮ್ಮನೇ ಕೂರಿಸಿದರು.
‘ಜಾತ್ಯತೀತ, ಪ್ರಜಾಸತ್ತಾತ್ಮಕ ಹಾಗೂ ಮುಕ್ತ ಮೌಲ್ಯಗಳು ಇಂದು ಅಪಾಯದಲ್ಲಿವೆ. ಚರ್ಚೆ ಮತ್ತು ಭಿನ್ನಮತದ ನಡುವಿನ ಸಾರ್ವಜನಿಕ ಸ್ಥಳ ಕ್ಷೀಣಿಸುತ್ತಿದೆ’ ಎಂದು ಅವರು ಕುಟುಕಿದರು.