
ಬೆಂಗಳೂರು:ನಮ್ಮ ದೇಶದ ಕಾರ್ಯಾಂಗದ ಮುಖ್ಯಸ್ಥರಾಗಿರುವ ಪ್ರಧಾನಿಯವರು ಒಕ್ಕೂಟ ವ್ಯವಸ್ಥೆ ಧಕ್ಕೆಬರದ ರೀತಿ ನಡೆದುಕೊಳ್ಳಬೇಕು. ಆದರೆ, ಮೊನ್ನೆ ಬೆಂಗಳೂರಿಗೆ ಬಂದಾಗ ಪ್ರಧಾನಿ ಸ್ಥಾನಕ್ಕೆ ಅಪಚಾರ ತರುವ ರೀತಿಯಲ್ಲಿ, ಸಂವಿಧಾನಕ್ಕೆ ಧಕ್ಕೆ ತರುವ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ರೀತಿ ನಡೆದುಕೊಂಡಿದ್ದಾರೆ’ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಬಿಜೆಪಿ ಪ್ರಧಾನಿ ವಾಜಪೇಯಿ ಸೇರಿದಂತೆ ಯಾವ ಪ್ರಧಾನಿಯೂ ವೈಯಕ್ತಿಕವಾಗಿ ಈ ರೀತಿ ಮಾತನಾಡಿರಲಿಲ್ಲ. ಅಮಿತ್ ಷಾ ಪಕ್ಷದ ಅಧ್ಯಕ್ಷರು ಮಾತಾಡ್ತಾರೆ ಅಂದುಕೊಳ್ಳಬಹುದು. ಆದರೆ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಕುಡಿಯುವ ನೀರು ಪಡೆಯುವುದು ಮೂಲಭೂತ ಹಕ್ಕು ಎಂಬುದು ಎಲ್ಲರಿಗೂ ಗೊತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರೇ ಕುಡಿಯುವ ನೀರಿಗಾಗಿ ಅವಕಾಶ ನೀಡಿದ್ದರು. ಅದಾದ ನಂತರ ತಡೆ ನೀಡಲಾಗಿದೆ. ಗೋವಾ ರಾಜ್ಯ ಸರ್ಕಾರದ ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಕೇಂದ್ರ ಸರ್ಕಾರ ಗಮನಿಸಬೇಕಿತ್ತು. ಮೋದಿ ಬೆಂಗಳೂರಿಗೆ ಬರುವ ಮೊದಲೇ ಯಡಿಯೂರಪ್ಪ ಮೋದಿ ಮಹದಾಯಿ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ದಾರೆ. ಇದು ಯಡಿಯೂರಪ್ಪ ರಾಜ್ಯದ ಜನರಿಗೆ ಮಾಡಿದ ದ್ರೋಹ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರ ಪರ್ಸೆಂಟೇಜ್ ಭ್ರಷ್ಟಾಚಾರ ನಡೆದಿದ್ದರೆ ದೂರು ನೀಡಬೇಕು. ಯಾವುದೇ ಸಾರ್ವಜನಿಕ ವ್ಯಕ್ತಿ ಬೇಕಾದರೂ ದೂರು ನೀಡಬಹುದು. ಸ್ಟೀಲ್ ಬ್ರಿಡ್ಜ್ ನಲ್ಲಿ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುದೂ ಸೇರಿ ಹಲವು ವಿಚಾರ ಮಾತಾನಾಡಿದ್ದಾರೆ. ಪ್ರಧಾನಿ ಹೇಳುವಂತಹದ್ದು ನಿಜಕ್ಕೂ ನಡೆದಿದ್ದರೇ ಸರ್ಕಾರ ವಜಾ ಆಗಬೇಕು.ಮೋದಿ ಹೇಳುವಂತಹದ್ದು ನಡೆದಿದ್ದರೇ ರಾಜ್ಯ ಸರ್ಕಾರವನ್ನು ವಜಾ ಮಾಡಲಿ ಎಂದು ಸವಾಲ್ ಹಾಕಿದರು.
ನಂಗನಾಚ್ ಸರ್ಕಾರ ಎಂಬ ಪದ ಬಳಕೆ ಮಾಡಿ 6 ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ಈ ರೀತಿಯ ಕೃತ್ಯಗಳನ್ನು ವಿಧಾನ ಸಭೆಯಲ್ಲಿ ಮಾಡಿದ್ದರು. ಸರ್ಕಾರದ ಯಾವತ್ತೂ ನಂಗನಾಚ್ ರೀತಿಯ ಕೃತ್ಯ ರಾಜ್ಯದಲ್ಲಿ ನಡೆದಿಲ್ಲ. ರಾಜ್ಯದ ಜನರಿಗೆ ಅಪಚಾರ ಮಾಡಿದ್ದಾರೆ. ಕೂಡಲೇ ರಾಜ್ಯದ ಜನರಿಗೆ ಪ್ರಧಾನಿಯವರು ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯಲು ಮೋದಿ ಯೋಗ್ಯರಲ್ಲ. ಕ್ಷಮೆ ಕೇಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ವಿಚಾರವನ್ನು ಜನರ ಮುಂದೆ ಕೊಂಡ್ಯೊಯ್ಯುತ್ತೇವೆ’ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.