
ನವದೆಹಲಿ(ಮೇ.28): ಭ್ರಷ್ಟಾಚಾರ, ಕಪ್ಪು ಹಣ ಮತ್ತು ಭಯೋತ್ಪಾದನೆ ಹುಟ್ಟಡಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ನೋಟು ನಿಷೇಧ ಜಾರಿಗೊಳಿಸಿ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡಿದ್ದು ತಿಳಿದಿರುವ ವಿಚಾರವೇ. ಆದರೆ, ಇತ್ತೀಚೆಗೆ ಆರ್ಬಿಐ 1,000 ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ರಾಷ್ಟ್ರ ಲಾಂಛನ ಹೊಂದಿರುವ ಅರಿಶಿನ ಬಣ್ಣದ ಈ ನಾಣ್ಯ ವಾಟ್ಸ್ಆ್ಯಪ್ ಸೇರಿದಂತೆ ಇತರ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಆರ್ಬಿಐ ಇತ್ತೀಚೆಗಷ್ಟೇ ನೂತನ 1000 ರು. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದ್ದು, ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ ಎಂಬ ಸಂದೇಶ ವಾಟ್ಸ್ಆ್ಯಪ್, ಫೇಸ್ಬುಕ್ ಸೇರಿ ಇನ್ನಿತರ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಇದನ್ನು ಕಂಡ ಹಲವರು 2000 ಮುಖಬೆಲೆಯ ನೋಟಿಗೆ ಚಿಲ್ಲರೆ ಹುಡುಕುವ ಬಾಧೆ ತಪ್ಪಿದಂತಾಯಿತು ಎಂದು ನಿರಾಳರಾಗಿದ್ದರು. ಆದರೆ, ವಾಸ್ತವದ ಸಂಗತಿಯೆಂದರೆ, 1000 ಮುಖಬೆಲೆಯ ನಾಣ್ಯವನ್ನು ಆರ್ಬಿಐ ಬಿಡುಗಡೆ ಮಾಡಿಯೇ ಇಲ್ಲ. ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿದಂತೆ ಇನ್ನಿತರ ತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿರುವ ನಾಣ್ಯವು, ತಮಿಳುನಾಡಿನ ತಂಜಾವೂರಿನಲ್ಲಿರುವ ಬೃಹದೇಶ್ವರ ಮಂದಿರ 1000 ವರ್ಷ ಪೂರೈಸಿದ ನೆನಪಿನಾರ್ಥವಾಗಿ ಠಂಕಿಸಿದ್ದಾಗಿದೆ ಎಂಬುದು ತಿಳಿದುಬಂದಿದೆ. ಇಂಥ ನಾಣ್ಯಗಳಿಗೆ ಚಲಾವಣೆ ಮಾನ್ಯತೆ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.