
ತುಮಕೂರು(ಅ.23): ಮಗನ ಫೋಟೋ ಹಿಡಿದು ಅಸಹಾಯಕತೆಯಿಂದ ನಿಂತಿರೋ ಈ ವೃದ್ಧ ದಂಪತಿ ತುಮಕೂರು ಜಿಲ್ಲೆಯ ಪಾವಗಡದವರು. ಕೋಣನಕುರಿಕೆ ಗ್ರಾಮದ ಗಿರಿಯಪ್ಪ ಹಾಗೂ ನಾಗಮ್ಮ ದಂಪತಿ. ಇವರ ಮಗ ವೆಂಕಟೇಶ್ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸ್ತಾ ಇದ್ದಾರೆ. ಆದ್ರೆ ಈ ದಂಪತಿಗೆ ಗ್ರಾಮದಲ್ಲಿ ಕುಡಿಯಲು ಗುಟುಕು ನೀರು ಸಿಗುತ್ತಿಲ್ಲ. ಕುಡಿಯೋ ನೀರಿಗಾಗಿ ಇವರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಕಳೆದ ಐದಾರು ತಿಂಗಳಿನಿಂದ ದೂರದಿಂದ ನೀರು ಹೊತ್ತು ತಂದು ಜೀವನ ನಡೆಸ್ತಾ ಇದ್ದಾರೆ. ರಾಜಕೀಯ ದುರುದ್ದೇಶದಿಂದ ಗುಜ್ಜನೂಡು ಗ್ರಾಮಪಂಚಾಯಿತಿ ಅಧಿಕಾರಿಗಳು ನೀರಿನ ಸಂಪರ್ಕ ನೀಡದೆ ಸತಾಯಿಸುತ್ತಿದ್ದಾರೆ. ಸ್ಥಳೀಯರು ಹೇಳೋ ಪ್ರಕಾರ ಇವರು ಜೆಡಿಎಸ್ ಗೆ ಮತ ಹಾಕಿಲ್ಲ ಹೀಗಾಗಿ ಇವರಿಗೆ ನೀರಿನ ವ್ಯವಸ್ಥೆ ಮಾಡ್ತಿಲ್ಲ ಅಂತಿದ್ದಾರೆ.
ಗ್ರಾ. ಪಂಚಾಯಿತಿ ಈ ಧೋರಣೆಗೆ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿ ಕೇಳಿದ್ರೆ ಖಾಸಗಿ ಕೊಳವೆ ಬಾವಿ ಬಾಡಿಗೆ ತೆಗೆದುಕೊಂಡು ಗ್ರಾಮಕ್ಕೆ ನೀರು ಪೂರೈಸುತ್ತಿದ್ದೇವೆ. ಇನ್ನೆರೆಡು ದಿನದಲ್ಲಿ ಯೋಧನ ಕುಟುಂಬಕ್ಕೂ ನೀರು ಕೊಡ್ತೀವಿ ಅಂತ 6 ತಿಂಗಳಿಂದ ಹೇಳಿದ್ದನ್ನೇ ಮತ್ತೆ ಮತ್ತೇ ಹೇಳ್ತಿದ್ದಾರೆ.
ಒಟ್ಟಾರೆ ಗಡಿ ಕಾಯುವ ಯೋಧನ ಹೆತ್ತವರು ನೀರಿಗೂ ಗತಿಿಯಿಲ್ಲದೆ ಒದ್ದಾಡುತ್ತಿದ್ದಾರೆ. ಈ ವರದಿ ನೋಡಿಯಾದರೂ ಅಧಿಕಾರಿಗಳು ಎಚ್ಚೆತ್ತು ನೀರಿನ ಸಮಸ್ಯೆ ಬಗೆಹರಿಸುತ್ತಾರಾ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.