
ಬೆಳಗಾವಿ (ಜೂ.10): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಲ್ಲಿನ ನೌಕರರಿಗೆ ಸಂಬಳ ಕೊಡೋದಿಕ್ಕೂ ಪರದಾಡುತ್ತಿದೆ. ಇನ್ನೊಂದೆಡೆ ವಿಜಯಪುರದಲ್ಲಿರುವ ಮಹಿಳಾ ವಿಶ್ವವಿದ್ಯಾಲಯ ಕಟ್ಟಡದ ಬಾಡಿಗೆ ಹಣವನ್ನು ಕೊಡ್ಲಿಕ್ಕೆ ಕಾಸಿಲ್ಲ ಅಂತಿದೆ. ಸಕಾಲದಲ್ಲಿ ಬಾಡಿಗೆ ಕೊಡ್ದೇ ಇದ್ದಿದ್ದಕ್ಕೆ ಬಡ್ಡಿ, ಚಕ್ರ ಬಡ್ಡಿ ಸೇರಿ ಕೋಟಿ ರೂಪಾಯಿ ದಾಟಿದೆ.
ಚಕ್ರ ಬಡ್ಡಿ ಸುಳಿಯಲ್ಲಿ ಮಹಿಳಾ ವಿಶ್ವವಿದ್ಯಾಲಯ
ರಾಜ್ಯದ ವಿಶ್ವವಿದ್ಯಾಲಯಗಳು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗ್ತಾನೆ ಇರ್ತಾವೆ. ಮೊನ್ನೆ ಮೊನ್ನೆ ಬೆಳಗಾವಿಯಲ್ಲಿರುವ ವಿ.ಟಿ.ಯು. ತನ್ನ ನೌಕರರಿಗೆ ಸಂಬಳ ಕೊಡೋದಿಕ್ಕೂ ಹಣ ಇಲ್ಲದೆ ದಿವಾಳಿ ಆಗೋಗಿರೋ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಇವತ್ತು ವಿಜಯಪುರದಲ್ಲಿರುವ ಮಹಿಳಾ ವಿಶ್ವವಿದ್ಯಾಲಯ ಚಕ್ರ ಬಡ್ಡಿಯ ಸುಳಿಯಲ್ಲಿ ಸಿಲುಕಿ ಚರ್ಚೆಗೆ ಗ್ರಾಸವಾಗಿದೆ. ಮಹಿಳಾ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲ್ ಮಯೂರ ಆದಿಲ್ ಶಾಹಿ ಕಟ್ಟಡವನ್ನು ಬಾಡಿಗೆಗೆ ಪಡೆದಿತ್ತು. 2010ರಿಂದ 2014ರವರೆಗೆ ಬಾಡಿಗೆ ಮೊತ್ತ ಕೊಡಬೇಕಾಗಿದ್ದದ್ದು 1 ಕೋಟಿ 81 ಲಕ್ಷ 43 ಸಾವಿರ 188 ರೂಪಾಯಿ. ಅಲ್ಲದೆ ಕಟ್ಟಡದ ದುರಸ್ತಿ ಸೇರಿ ಒಟ್ಟು 2 ಕೋಟಿ ರೂಪಾಯಿಗಳನ್ನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಪಾವತಿಸಬೇಕಿತ್ತು. 12 ಪರ್ಸೆಂಟ್ ಬಡ್ಡಿ ಮತ್ತು ಚಕ್ರಬಡ್ಡಿಯೂ ಇದರಲ್ಲಿ ಸೇರಿತ್ತು.
ಮಹಿಳಾ ವಿಶ್ವವಿದ್ಯಾಲಯ 2 ಕೋಟಿ ರೂಪಾಯಿಯನ್ನು ಪಾವತಿಸದೇ ಸತಾಯಿಸುತ್ತಿದೆ ಅಂತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಪತ್ರ ಆಧರಿಸಿ ಸರ್ಕಾರ ವಿಶ್ವವಿದ್ಯಾಲಯಕ್ಕೆ ಹಣ ಪಾವತಿಸಬೇಕು ಎಂದು ಪತ್ರ ಬರೆದಿತ್ತು. ಎರಡೆರಡು ಬಾರಿ ರಿಮೈಂಡರ್ ಕಳಿಸಿದರೂ ಸಹ ವಿಶ್ವವಿದ್ಯಾಲಯ ಸರ್ಕಾರದ ಪತ್ರವನ್ನು ನಿರ್ಲಕ್ಷ್ಯಿಸಿತ್ತು. ವಿಶ್ವವಿದ್ಯಾಲಯ ವಹಿಸಿರುವ ನಿರ್ಲಕ್ಷ್ಯವನ್ನು ಸರ್ಕಾರ ಈಗ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ ವಿಶ್ವವಿದ್ಯಾಲಯಗಳಿಗೆ ಪ್ರತಿ ವರ್ಷ ರಾಜ್ಯ ಸರ್ಕಾರ ಕೋಟಿ ಕೋಟಿಗಟ್ಟಲೇ ಅನುದಾನವನ್ನು ಕೊಡ್ತಾನೇ ಇದೆ. ಇದಲ್ಲದೆ, ಕೇಂದ್ರ ಸರ್ಕಾರದ ಹೊಸ ಯೋಜನೆಯಾಗಿರೋ ರೂಸಾ ಯೋಜನೆ ಪ್ರಕಾರ ಬಹು ಕೋಟಿ ರೂಪಾಯಿಗಳಷ್ಟು ಅನುದಾನದ ಹೊಳೆಯೇ ಹರಿದಿದೆ. ಆದರೂ ಮಹಿಳಾ ವಿಶ್ವವಿದ್ಯಾಲಯ ಮಾತ್ರ 2 ಕೋಟಿ ರೂಪಾಯಿಯನ್ನು ಪ್ರವಾಸೋದ್ಯಮ ಅಭಿವೃದ್ದಿ ನಿಗಮಕ್ಕೆ ಕೊಡದೇ ಇರೋದು ಅನುಮಾನಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.