ಐಎಂಎ ಬಹುಕೋಟಿ ವಂಚಕ ಮನ್ಸೂರ್ ಖಾನ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು 24 ಗಂಟೆ ಒಳಗೆ ಬೆಂಗಳೂರಿಗೆ ಬರುತ್ತೇನೆ ಎಂದಿದ್ದಾನೆ. ಆದರೆ ಈ ವಿಡಿಯೋ ರಾಜಕೀಯವಾಗಿಯೂ ಅನೇಕ ಪ್ರಶ್ನೆಗಳನ್ನು ಎತ್ತಿಹಾಕಿದೆ.
ಬೆಂಗಳೂರು(ಜು.15) ರಾಜ್ಯ ರಾಜಕಾರಣದ ಗೊಂದಲಗಳಿಗೂ, ರಾಜೀನಾಮೆ ಪರ್ವಕ್ಕೂ ಐಎಂಎ ವಂಚನೆ ಪ್ರಕರಣಕ್ಕೂ ಸಂಬಂಧ ಇದೆಯಾ? ಈ ಪ್ರಶ್ನೆ ಹಲವಾರು ಸಾರಿ ಎದ್ದಿದ್ದು ಸ್ಪಷ್ಟ ಉತ್ತರ ಸಿಗದೆ ಮರೆಯಾಗಿದೆ. ತನಿಖಾ ತಂಡ ವಂಚನೆ ಪ್ರಕರಣವನ್ನು ತನಿಖೆ ಮಾಡುತ್ತಿರುವುದು ಒಂದು ಮುಖ.. ರಾಜಕೀಯ ವಿಚಾರಗಳು ಇನ್ನೊಂದು ಮುಖ..
ರಾಜೀನಾಮೆ ಪರ್ವ ಆರಂಭಕ್ಕೆ ಕಾರಣ: ಜೂನ್ 6 ರಂದು ರಾಜ್ಯ ರಾಜಕಾರಣದಲ್ಲಿ ಹಿಂದೆಂದೂ ಕಾಣದ ಬೆಳವಣಿಗೆ ಆಗಿಹೋಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರಕಾರದ ಶಾಸಕರು ಒಬ್ಬೊಬ್ಬರಾಗಿ ವಿಧಾನಸೌಧಕ್ಕೆ ತೆರಳಿ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆ ಹಿಂದೆ ಐಎಂಎ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಕಾಣದ ಕೈ ಒಂದು ಕೆಲಸ ಮಾಡಿತ್ತು ಎಂಬ ಮಾಹಿತಿಯೂ ವ್ಯಕ್ತವಾಗಿತ್ತು. ವಿದೇಶದಲ್ಲಿದ್ದ ಸಿಎಂ ತಮ್ಮದೇ ಸರಕಾರದ ಸಚಿವರೊಬ್ಬರನ್ನು ಬಂಧಿಸಿ ಎಂದು ಹೇಳಿದ್ದು ಇಲ್ಲಿ ರಾಜೀನಾಮೆ ಪರ್ವವಾಗಿ ಬದಲಾಗಿತ್ತು ಎಂದು ಹೇಳಲಾಗಿತ್ತು.
ಮೌಲ್ವಿಗಳಿಗೂ ಸಖತ್ ಉಡುಗೊರೆ ನೀಡಿದ್ದ ಮನ್ಸೂರ್
ಆಪ್ತ ಅರೆಸ್ಟ್: ಐಎಂಎ ಪ್ರಕರಣ ವಿಚಾರಣೆ ಹಂತದಲ್ಲಿ ಇದ್ದರೂ ಮಾಜಿ ಸಿಎಂ ಒಬ್ಬರ ಆಪ್ತ ಅರೆಸ್ಟ್ ಆಗುತ್ತಾರೆ ಎಂಬ ಮಾತು ಹರಿದಾಡಿತ್ತು. ಜನರನ್ನು ಸೇರಿದಂತೆ ಘಟನಾವಳಿಗಳನ್ನು ಬೇರೆ ಕಡೆಗೆ ಡೈವೋರ್ಟ್ ಮಾಡಲು ರಾಜಕಾರಣದ ಬೃಹನ್ನಾಟಕ ಶುರುವಾಯಿತು ಎಂಬ ಮಾತು ಇದೆ.
ಸರಕಾರಕ್ಕೆ ಸವಾಲ್: ದೂರದದಲ್ಲಿ ಕುಳಿತುಕೊಂಡಿರುವ ಮನ್ಸೂರ್ ಸರಕಾರಕ್ಕೆ ಮತ್ತು ಬೆಂಗಳೂರು ಪೊಲೀಸರಿಗೆ ಸವಾಲು ಹಾಕುತ್ತಿದ್ದಾನೆ. ನಾನು ವಾಪಸ್ ಬಂದರೆ ನನ್ನನ್ನು ಕಾಪಾಡುವ ಶಕ್ತಿ ನಿಮಗೆ ಇದೇಯಾ? ಎಂದು ಪ್ರಶ್ನೆ ಮಾಡುತ್ತಿದ್ದಾನೆ. ವಿಡಿಯೋದಲ್ಲಿಯೂ ಸಹ ಎರಡು ಸಾರಿ ಇದನ್ನೇ ಹೇಳಿದ್ದಾನೆ.
ವಿಚಾರಣೆ ನಡೆಯುತ್ತಿದ್ದು ಒಂದು ಕಡೆ ಮರೆಯಾಗಿದ್ದ ಮನ್ಸೂರ್ ಈಗ ಹಿಂದಕ್ಕೆ ಬರುವ ಮಾತನ್ನಾಡುತ್ತಿದ್ದಾನೆ ಎಂದರೆ ಇದರ ಹಿಂದೆ ಇನ್ನೊಂದು ಪಕ್ಷದವರ ಕೈವಾಡ ಇದೆಯೇ? ಇದ್ದಕ್ಕಿದ್ದಂತೆ ಮನ್ಸೂರ್ ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ? ಅಳಿದು ಹೋಗುತ್ತಿರುವ ಸರಕಾರ ಉಳಿಸಿಕೊಳ್ಳಲು ಮನ್ಸೂರ್ ಖಾನ್ ಅಸ್ತ್ರವಾಗಲಿದ್ದಾನೆಯೇ? ಹೀಗೆ ಸರಣಿ ಪ್ರಶ್ನೆಗಳು ನಮ್ಮ ಮುಂದೆ ವಿಡಿಯೋ ಬಿಡುಗಡೆ ನಂತರ ಧುತ್ ಎಂದು ಎದ್ದು ನಿಂತಿವೆ.