
ನವದೆಹಲಿ(ಸೆ.06): ಭಾರತ ಶಾಂತಿ ಬಯಸುವ ರಾಷ್ಟ್ರವಾಗಿದ್ದು, ಶಾಂತಿಗಾಗಿ ಅದರ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಆದರೆ ಭಾರತದ ಮೇಲೆ ಯಾರಾದರೂ ದಾಳಿಗೆ ಮುಂದಾದರೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡುವುದು ನಮ್ಮ ಜವಾಬ್ದಾರಿ ಕೂಡ ಹೌದು ಎಂದು ವೆಂಕಯ್ಯ ನಾಯ್ಡು ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳೆದ ಎರಡು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ 95 ಭಾಷಣಗಳ ಸಂಗ್ರಹ ‘ಲೋಕತಂತ್ರ ಕೆ ಸ್ವರ್’ ಹಿಂದಿ ಅವತರಣಿಕೆ ಮತ್ತು‘ರಿಪಬ್ಲಿಕನ್ ಎಥಿಕ್’ ಇಂಗ್ಲಿಷ್ ಅವತರಣಿಕೆ ಕೃತಿಗಳನ್ನು ಲೋಕಾರ್ಪಣೆ ಮಾಡಿ ವೆಂಕಯ್ಯ ನಾಯ್ಡು ಮಾತನಾಡಿದರು.
ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯಲ್ಲಿ ಭಾರತಕ್ಕೆ ನಂಬಿಕೆ ಇದ್ದು, ಇಡೀ ವಿಶ್ವವೇ ಒಂದು ಕುಟುಂಬ ಎಂದು ನಂಬಿರುವ ನಾವು ಯಾವುದೇ ದೇಶದ ಮೇಲೆ ತಾನಾಗಿ ದಾಳಿ ಮಾಡಿಲ್ಲ ಎಂದು ನಾಯ್ಡು ನುಡಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಾದ ಮತ್ತು ಚರ್ಚೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶಗಳಿವೆ. ಅದೇ ರೀತಿ ಯಾವುದೇ ಸಮಸ್ಯೆಯನ್ನು ಮಾತುಕತೆ ಮತ್ತು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬ ನಂಬಿಕೆಯೂ ನಮ್ಮದಾಗಿದೆ ಎಂದು ನಾಯ್ಡು ಈ ವೇಳೆ ಹೇಳಿದರು.
ಭಾರತ ಆಕ್ರಮಣಶೀಲ ರಾಷ್ಟ್ರವಲ್ಲ ಆದಾಗ್ಯೂ, ಯಾರಾದರೂ ಭಾರತದ ಮೇಲೆ ದಾಳಿ ಮಾಡಿದರೆ, ನಾವು ಅವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಉಪರಾಷ್ಟ್ರಪತಿ ಗುಡುಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.