
ಬೆಂಗಳೂರು(ಜೂ.28): ಮುಂಬರುವ ಚುನಾವಣಾ ಸಮರಕ್ಕೆ ಕಾಂಗ್ರೆಸ್ ತಾಲೀಮು ಜೋರಾಗಿದೆ. ಉಸ್ತುವಾರಿ ವೇಣುಗೋಪಾಲ ಪಕ್ಷದ ಎಲ್ಲ ಘಟಕಗಳ ಮುಖಂಡರಿಗೆ ಚುನಾವಣೆಗೆ ತಯಾರಾಗಿ ಅನ್ನೋ ಖಡಕ್ ಸೂಚನೆ ನೀಡಿದ್ದಾರೆ. ಇದೇ ವೇಳೆ, ಕೆಲ ಘಟಕದ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ನೇತೃತ್ವದಲ್ಲಿ ಇವತ್ತು ಕೂಡ ಕಾಂಗ್ರೆಸ್ ಮುಖಂಡರ ಸಭೆ ಮುಂದುವರಿಯಿತು. KPCC ಕಚೇರಿಯಲ್ಲಿ 16 ಘಟಕಗಳ ಪದಾಧಿಕಾರಿಗಳ ಸಭೆ ನಡೆಯಿತು. ಮಹಿಳಾ ಘಟಕ, ಯುವ ಘಟಕ, ಕಿಸಾನ್ ಘಟಕ, NSUI ಸೇರಿದಂತೆ ಇತರೆ ಸೆಲ್ ಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಆರಂಭದಲ್ಲಿ ಯುವ ಘಟಕದ ಸಭೆ ನಡೆಸಿ ನೂತನ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿಯನ್ನ ವೇಣುಗೋಪಾಲ್ ತರಾಟೆಗೆ ತೆಗೆದುಗೊಂಡರು. ಎಷ್ಟು ಹೋರಾಟಗಳನ್ನ ಮಾಡಿದ್ದೀರಿ? ನಿಮ್ಮ ಹೋರಾಟದ ಪ್ಲಾನ್ ಏನು? ಕೇರಳದಲ್ಲಿ ಯುವ ಘಟಕ ಹೇಗೆ ಕೆಲಸ ಮಾಡುತ್ತೇ ಗೊತ್ತಾ ? ಅಂತ ಏರಿದ ದನಿಯಲ್ಲಿ ತರಾಟೆ ತಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಟೈಮ್ನಲ್ಲಿ ಇಂಗ್ಲಿಷ್ ಬಾರದೆ ಬಾದರ್ಲಿ ಪರದಾಡಿದ ಪ್ರಸಂಗವೂ ನಡೆದಿದೆ. ಕೊನೆಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಬಾದರ್ಲಿ ನೆರವಿಗೆ ನಿಂತಿದ್ದಾರೆ. ಇನ್ನು ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡುವಂತೆ ಮಹಿಳಾ ಘಟಕ ಒತ್ತಾಯಿಸಿದೆ. ಟಿಕೆಟ್ ಬೇಕಾದರೆ ಗ್ರಾಮ ವಾಸ್ತವ್ಯ ಮಾಡುವಂತೆ ರಾಜ್ಯ ಉಸ್ತುವಾರಿ ಮಹಿಳೆಯರಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದ ಬಗ್ಗೆ ಪ್ರಚಾರ ಮಾಡುವುದು. ಕೇಂದ್ರ ವಾಣಿಜ್ಯ ಬ್ಯಾಂಕ್ ಗಳ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಹೋರಾಟ ರೂಪಿಸಲು ರೈತ ಘಟಕಕ್ಕೆ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸರ್ವ ರೀತಿಯಲ್ಲಿ ಸಂಘಟಿತವಾಗಬೇಕು ಅಂತ ವೇಣುಗೋಪಾಲ್ ಎಲ್ಲಾ ಘಟಕಗಳಿಗೆ ತಾಕೀತು ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ವರದಿ ಕೂಡ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.