
ಧರ್ಮಸ್ಥಳ(ಜ.09): ಧರ್ಮವನ್ನು ಗೌರವಿಸೋಣ. ಪ್ರತೀಕಾರ ಮತ್ತು ಸೇಡನ್ನು ಬದಿಗಿರಿಸೋಣ. ಎಲ್ಲರೂ, ವಿಶೇಷವಾಗಿ ಅಂದರೆ ತಂದೆ- ತಾಯಿ, ಸಹೋದರರು- ಸಹೋದರಿಯರು ತಮ್ಮ ಮನೆಗಳಲ್ಲಿ ತಾಳ್ಮೆ ಮತ್ತು ಶಾಂತಿಯನ್ನು ಕಾಪಾಡುವ ಬಗ್ಗೆ ಮಾತುಕತೆ ನಡೆಸಿ. ಸಹನೆ, ಸೌಹಾರ್ದ ಮತ್ತು ಸಂಯಮವನ್ನು ಬೆಳೆಸಿಕೊಂಡು ಎಲ್ಲರೂ ಶಾಂತಿ- ಸಾಮರಸ್ಯದಿಂದ ಬಾಳೋಣ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸಮಾಜಕ್ಕೆ ಸಂದೇಶ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ಕಳೆದ ಕೆಲವು ಸಮಯದಿಂದ ಅವಿರತವಾಗಿ ಅಶಾಂತಿಯ ವಾತಾವರಣ ಕಂಡು ಬರುತ್ತಿದೆ. ಅನೇಕ ಸಾವು- ನೋವುಗಳು ಸಂಭವಿಸಿವೆ. ಈ ಸಾವಿನಲ್ಲಿ ಎರಡೂ ಧರ್ಮದ ವ್ಯಕ್ತಿಗಳು ಬಲಿಯಾಗುತ್ತಿದ್ದಾರೆ. ಘಟನಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಒಂದು ಧರ್ಮದ ವ್ಯಕ್ತಿಯ ಕೊಲೆಯಾದ ಬಳಿಕ ಇನ್ನೊಂದು ಧರ್ಮದ ವ್ಯಕ್ತಿಯ ಕೊಲೆಯಾಗುತ್ತಿದೆ. ಕರಾವಳಿ ಭಾಗದ ಜನರು ಶಾಂತಿಪ್ರಿಯರಾಗಿದ್ದು ಪರಸ್ಪರ ನಂಬಿಕೆ, ಪ್ರೀತಿ- ವಿಶ್ವಾಸ ಮತ್ತು ಸ್ನೇಹದಿಂದ ಸಹಜ ಜೀವನ ನಡೆಸುತ್ತಿದ್ದ ಜನರಲ್ಲಿ ಸಂಶಯ, ಅಪನಂಬಿಕೆ ಮತ್ತು ಸೇಡಿನ ಭಾವನೆಗಳು ಕಾಣುತ್ತಿವೆ.
ಈ ಸಾವು- ನೋವಿನ ಸಂದರ್ಭದಲ್ಲಿ ನಿರ್ದಿಷ್ಟವಾದ ಉದ್ದೇಶಗಳು ತಿಳಿಯುತ್ತಿಲ್ಲವಾದರೂ ಪರಸ್ಪರ ಅಪನಂಬಿಕೆ ಮತ್ತು ಅಶಾಂತಿಗೆ ಕಾರಣವಾಗುತ್ತಿವೆ. ವಿಚಾರ ಭೇದಗಳಿದ್ದಲ್ಲಿ ಪರಸ್ಪರ ಮಾತುಕತೆ ಹಾಗೂ ವಿಚಾರ ವಿನಿಮಯದೊಂದಿಗೆ ಪರಿಹರಿಸಿಕೊಳ್ಳಬಹುದಾದುದನ್ನು ಹಿಂಸಾ ಹಂತಕ್ಕೆ ಕೊಂಡೊಯ್ಯುವುದು ಯಾವ ಧರ್ಮಕ್ಕೂ ಶ್ರೇಯಸ್ಕರವಲ್ಲ ಎಂದು ಧರ್ಮಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವಸರದ ಮತ್ತು ಉದ್ವೇಗದ ತೀರ್ಮಾನಗಳು ಹಾಗೂ ಘಟನೆಗಳಿಂದ ನಿರ್ಧಿಷ್ಟ ಗುರಿ ಮತ್ತು ಪರಿಹಾರವಿಲ್ಲದೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ದಯವಿಟ್ಟು ಎಲ್ಲರೂ ಶಾಂತಿ ಮತ್ತು ಸಾಮರಸ್ಯವನ್ನು ಬಯಸಿ ಜನ ಜೀವನದಲ್ಲಿ ಸಹಜತೆ ಹಾಗೂ ಸೌಹಾರ್ದ ಬರುವಂತೆ ನಡೆದುಕೊಳ್ಳಬೇಕಾಗಿದೆ. ಪ್ರತೀಕಾರದ ಮನೋಧರ್ಮವನ್ನು ತೊರೆದು ವಿಶ್ವಾಸ ಮತ್ತು ಸ್ನೇಹದ ವಾತಾವರಣವನ್ನು ಉಂಟು ಮಾಡಬೇಕು ಎಂದು ಅವರು ವಿನಂತಿಸಿದ್ದಾರೆ.
ಇತ್ತೀಚೆಗೆ ನಡೆದ ಹಲ್ಲೆಯ ಸಂದರ್ಭದಲ್ಲಿ ಎರಡು ಕೋಮಿನ ವ್ಯಕ್ತಿಗಳು ಗಾಯಗೊಂಡಾಗ ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದವರನ್ನು ಗಮನಿಸಿದರೆ ಅವರು ವ್ಯಕ್ತಿಯ ಧರ್ಮವನ್ನು ಗಮನಿಸದೆ ಸ್ಪಂದಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವೀಯತೆ ಮೆರೆಯುತ್ತದೆ. ಜಾತಿ, ಮತ, ಧರ್ಮವಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಈ ಸಂದರ್ಭದಲ್ಲಿ ವಿಶೇಷವಾಗಿ ಯುವ ಜನತೆ ಸಂಯಮ ಮತ್ತು ತಾಳ್ಮೆಯಿಂದ ವರ್ತಿಸಬೇಕಾದ ಅನಿವಾರ್ಯತೆ ಇದೆ. ಸದ್ಯದ ಸಂಶಯ ಮತ್ತು ಭಯದ ವಾತಾವರಣವನ್ನು ದೂರ ಮಾಡಿ ಧರ್ಮವನ್ನು ಗೌರವಿಸಿ ವ್ಯವಹಾರದಲ್ಲಿ ಭೇದಗಳನ್ನು ಪರಿಹರಿಸಿಕೊಳ್ಳುವ ನಡೆ-ನುಡಿಯನ್ನು ಅನುಸರಿಸಬೇಕು. ಧರ್ಮವನ್ನು ಗೌರವಿಸೋಣ ಎಂದು ಹೆಗ್ಗಡೆ ಅವರು ಆಶಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.