ಗಾಯಗೊಂಡು ರಸ್ತೆ ಮಧ್ಯದಲ್ಲಿ ಬಿದ್ದಿದ್ದ ವ್ಯಕ್ತಿಯೋರ್ವನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾನವೀಯತೆ ಮೆರೆದಿದ್ದಾರೆ.
ಹುಬ್ಬಳ್ಳಿ: ಬೆಳಗಾವಿಯಿಂದ ಹಂಪಿಗೆ ತೆರಳುತ್ತಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ರಸ್ತೆ ಮಧ್ಯೆ ಗಾಯಗೊಂಡು ಬಿದ್ದಿದ್ದ ಬೈಕ್ ಸವಾರನೊಬ್ಬನನ್ನು ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ
ಸೇರಿಸಿ ಮಾನವೀಯತೆ ಮೆರೆದ ಘಟನೆ ಹುಬ್ಬಳ್ಳಿಯಲ್ಲಿ ಭಾನುವಾರ ನಡೆದಿದೆ.
ಬೆಳಗ್ಗೆ 11 ಗಂಟೆಗೆ ನಗರದ ಗೋಕುಲ ರಸ್ತೆ ಮೂಲಕ ವಾಹನದಲ್ಲಿ ವಾಟಾಳ್ ನಾಗರಾಜ್ ತೆರಳುತ್ತಿದ್ದಾಗ, ಬೈಕ್ ಸ್ಕಿಡ್ ಆಗಿ ಸವಾರರೊಬ್ಬ ರು ರಸ್ತೆಯ ಮಧ್ಯೆ ಬಿದ್ದಿದ್ದರು.
ಆಗ ತಮ್ಮ ವಾಹನ ನಿಲ್ಲಿಸಿದ ವಾಟಾಳ್ ಬೈಕ್ ಸವಾರನನ್ನು ರಸ್ತೆ ಬದಿಗೆ ಕರೆದುಕೊಂಡು ಹೋಗಿ ಕುಡಿಯಲು ನೀರು ಕೊಟ್ಟಿದ್ದಾರೆ. ನಂತರ ಸಂತೈಸಿ ಧೈರ್ಯ ತುಂಬಿದ್ದಾರೆ. ಬಳಿಕ ವಾಟಾಳ್ ಅವರೊಂದಿಗೆ ಸ್ಥಳೀಯರು ಸಾಥ್ ನೀಡಿ ಗಾಯಾಳು ವ್ಯಕ್ತಿಯನ್ನು ಗೋಕುಲ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಗೋಕುಲ ಪೊಲೀಸರು ಪರಿಶೀಲಿಸಿದರು.