
ನವದೆಹಲಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ಹಾಗೂ ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ ಬಂಧಿತರಾಗಿರುವ ಎಡಪಂಥೀಯ ಚಿಂತಕರ ಪರವಹಿಸಿ ಕಾಂಗ್ರೆಸ್ ಮಾತನಾಡುತ್ತಿದೆ. ಇವರ ಬಂಧನವನ್ನು ವಿಚಾರಗಳ ಕಗ್ಗೊಲೆ ಎಂದು ಕಾಂಗ್ರೆಸ್ ಹಾಗೂ ಅದರ ಬೆಂಬಲಿಗ ಪಕ್ಷಗಳು ಪದೇ ಪದೇ ಆರೋಪ ಮಾಡುತ್ತಿವೆ.
ಆದರೆ ಇದೇ ಕಾಂಗ್ರೆಸ್ ನೇತೃತ್ವದ ಯುಪಿಎ 2013ರ ನವೆಂಬರ್ನಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಕರಣವೊಂದರಲ್ಲಿ ಪ್ರತಿ-ಪ್ರಮಾಣಪತ್ರವೊಂದನ್ನು ಸಲ್ಲಿಸಿತ್ತು. ಅದರಲ್ಲಿ, ‘ಕಾಡಿನಲ್ಲಿ ವಾಸವಾಗಿರುವ ಗೆರಿಲ್ಲಾ ನಕ್ಸಲರಿಗಿಂತ ನಗರಪ್ರದೇಶಗಳಲ್ಲಿ ವಾಸಿಸುತ್ತ, ಮಾನವ ಹಕ್ಕುಗಳ ನೆಪದಲ್ಲಿ ಮಾವೋವಾದಿ ವಿಚಾರಗಳನ್ನು ಪಸರಿಸುವ ಕಾರ್ಯಕರ್ತರು ಹಾಗೂ ಶಿಕ್ಷಣ ತಜ್ಞರು ಬಲು ಅಪಾಯಕಾರಿ’ ಎಂದು ಹೇಳಿತ್ತು ಎಂದು ಬೆಳಕಿಗೆ ಬಂದಿದೆ.
ಈ ಮೂಲಕ ‘ನಗರ ನಕ್ಸಲರು’ ಎಂದೇ ಕರೆಯಲ್ಪಡುವ ನಗರವಾಸಿ ಎಡಪಂಥೀಯ ಚಿಂತಕರ ವಿರುದ್ಧ ಹೇಗೆ ಸರ್ಕಾರಗಳು ಪಕ್ಷಾತೀತ ಮನೋಭಾವ ಹೊಂದಿದ್ದವು ಎಂಬುದು ವಿದಿತವಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
‘ನಗರಗಳಲ್ಲಿನ ಶಿಕ್ಷಣ ತಜ್ಞರು ಹಾಗೂ ಕಾರ್ಯಕರ್ತರು ಮಾನವ ಹಕ್ಕುಗಳ ಹೆಸರಿನಲ್ಲಿ, ಮಾವೋವಾದಿಗಳಿಗೆ ಸಂಬಂಧಿಸಿದ ಸಂಘಟನೆಗಳನ್ನು ನಿಯಂತ್ರಿಸುತ್ತಿದ್ದಾರೆ. ಇನ್ನು ಪಿಪಿಐ ಮಾವೋವಾದಿ ಸಂಘಟನೆಯ ಸಶಸ್ತ್ರ ಸಂಘಟನೆಯಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್ಜಿಎ) ಸದಸ್ಯರಿಗಿಂತ ನಗರದಲ್ಲಿ ವಾಸಿಸುವ ಕಾರ್ಯಕರ್ತರೇ ಬಲು ಅಪಾಯಕಾರಿ’ ಎಂದು ಕೋರ್ಟಿಗೆ ಯುಪಿಎ ಸರ್ಕಾರ ಪ್ರತಿ-ಪ್ರಮಾಣಪತ್ರ ಸಲ್ಲಿಸಿತ್ತು ಎಂದು ಮಾಧ್ಯಮ ವರದಿ ಹೇಳಿದೆ. ಆಗ ಸುಶೀಲ್ಕುಮಾರ್ ಶಿಂಧೆ ಕೇಂದ್ರ ಗೃಹ ಸಚಿವರಾಗಿದ್ದರು.
ಗೆರಿಲ್ಲಾ ಆರ್ಮಿಯು 2001ರಿಂದ 5969 ಮಂದಿಯನ್ನು ಹತ್ಯೆ ಮಾಡಿದೆ. 2147 ಭದ್ರತಾ ಸಿಬ್ಬಂದಿಯನ್ನು ಕೊಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.