ವಿದ್ಯಾರ್ಥಿನಿ ನಾಪತ್ತೆ: ಬಿಜೆಪಿ ಮಾಜಿ ಕೇಂದ್ರ ಸಚಿವನ ವಿರುದ್ಧ FIR

By Web DeskFirst Published Aug 28, 2019, 4:51 PM IST
Highlights

ಕೇಂದ್ರ ಸಚಿವನ ವಿರುದ್ಧ ಗಂಭೀರ ಆರೋಪ ಮಾಡಿದ್ದ ವಿದ್ಯಾರ್ಥಿನಿ| ಸಾಕ್ಷಿ ಇದೆ ಎಂದು ವಿಡಿಯೋ ಮೂಲಕ ತಿಳಿಸಿದ್ದ ಯುವತಿ| ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿದ್ಯಾರ್ಥಿನಿ ನಾಪತ್ತೆ

ಲಕ್ನೋ[ಆ.28]: ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ವಿರುದ್ಧ ಉತ್ತರ ಪ್ರದೆಶ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. 

ಉತ್ತರ ಪ್ರದೇಶದ ಎಸ್‌ಎಸ್‌ ಕಾನೂನು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ವಾರದ ಹಿಂದೆ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, 'ಕಾಲೇಜಿನ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ಅನೇಕರ ಜೀವನ ಹಾಳು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಕೆಲ ಸಾಕ್ಷಿಗಳಿವೆ. ಈ ವಿಚಾರ ತಿಳಿದ ಮಾಜಿ ಸಚಿವ ನನ್ನನ್ನು ಹಾಗೂ ನನ್ನ ಕುಟುಂಬವನ್ನು ನಾಶಗೊಳಿಸುವುದಾಗಿ ಬೆದರಿಕೆ ಹಾಕಿದ್ದರು' ಎಂದು ಆರೋಪಿಸಿದ್ದರು. ಅಲ್ಲದೇ ಈ ವಿಚಾರದಲ್ಲಿ ಸಹಾಯ ಮಾಡುವಂತೆ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರಿಗೆ ಮನವಿ ಮಾಡಿಕೊಂಡಿದ್ದಳು. 

ವಿದ್ಯಾರ್ಥಿನಿ ನಾಪತ್ತೆ

ಯುವತಿ ಈ ವಿಡಿಯೋವನ್ನು ತಾನು ಉಳಿದುಕೊಂಡಿದ್ದ ಹಾಸ್ಟೆಲ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದ.ಳೆನ್ನಲಾಗಿದೆ. ವಿಡಿಯೋ ಗಮನಿಸಿದ್ದ ಸಂಬಂಧಿಕರು ಈ ವಿಚಾರವನ್ನು ವಿದ್ಯಾರ್ಥಿನಿಯ ಹೆತ್ತವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಮಗಳನ್ನು ಭೇಟಿಯಾಗಲು ತಾಯಿ ಹಾಸ್ಟೆಲ್‌ಗೆ ತೆರಳಿದ್ದಾರೆ. ಈ ವೇಳೆ ಆಕೆ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಆಕೆಯಲ್ಲಿದ್ದ ಎರಡು ಮೊಬೈಲ್ ಫೋನ್‌ಗಳೂ ಸ್ವಿಚ್ ಆಫ್ ಆಗಿವೆ. ವಿದ್ಯಾರ್ಥಿನಿಯ ತಂದೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನನ್ವಯ ಮಾಜಿ ಸಚಿವ ಚಿನ್ಮಯಾನಂದ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಓಪಿ ಸಿಂಗ್ ನೀಡಿದ್ದಾರೆ. 

ಈ ಮೊದಲೂ ಕೇಳಿ ಬಂದಿತ್ತು ಅತ್ಯಾಚಾರ ಆರೋಪ

1999-2004ರ ನಡುವೆ ವಾಜಪೇಯಿ ಸರ್ಕಾರದಲ್ಲಿ ಸ್ವಾಮಿ ಚಿನ್ಮಯಾನಂದ ಅವರು ಕೇಂದ್ರ ಸಚಿವರಾಗಿದ್ದರು. 2011ರಲ್ಲಿ ಹರಿದ್ವಾರದಲ್ಲಿರುವ ಚಿನ್ಮಯಾನಂದ ಆಶ್ರಮದಲ್ಲಿದ್ದ ಯುವತಿಯೊಬ್ಬಳು ಚಿನ್ಮಯಾನಂದರ ವಿರುದ್ಧ ಅತ್ಯಾಚಾರವೆಸಗಿರುವ ದೂರು ನೀಡಿದ್ದರು. ಈ ಪ್ರಕರಣವನ್ನು ಆದಿತ್ಯನಾಥ ಸರ್ಕಾರ ಕಳೆದ ವರ್ಷ ಕೈಬಿಟ್ಟಿತ್ತು.

 

click me!