ಬರಕ್ಕೆ ₹1029.39 ಕೋಟಿ, ನೆರೆಗಿಲ್ಲ ನಯಾಪೈಸೆ!

By Web DeskFirst Published Aug 21, 2019, 12:03 PM IST
Highlights

ಬರಕ್ಕೆ ₹1029.39 ಕೋಟಿ, ನೆರೆಗಿಲ್ಲ ನಯಾಪೈಸೆ!| ಹಿಂಗಾರು ಬೆಳೆನಷ್ಟಕ್ಕೆ ಸಾವಿರ ಕೋಟಿ ಬಿಡುಗಡೆ ಮಾಡಿದ ಕೇಂದ್ರ | ರಾಜ್ಯ ಕೇಳಿದು ್ದ ಈ ಬಾರಿಯ ಪ್ರವಾಹಕ್ಕೆ ಸಂಬಂಧಿಸಿ ಮೌನ ಮುರಿಯದ ಕೇಂದ್ರ 

ರಾಕೇಶ್ ಎನ್.ಎಸ್.

ನವದೆಹಲಿ[ಆ.21]: ರಾಜ್ಯದಲ್ಲಿ ಭಾರೀ ಪ್ರವಾಹ ಸಂಭವಿಸಿ ಮೂರು ೧೮ ದಿನ ಕಳೆದರೂ ಈವರೆಗೂ ನಯಾಪೈಸೆ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ಕಳೆದ ವರ್ಷದ ಬರ ಪರಿಹಾರವನ್ನು ಮಾತ್ರ ಈಗ ಘೋಷಣೆ ಮಾಡಿದೆ! ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಹಿಂಗಾರು ಮಳೆ ಕೈಕೊಟ್ಟು ರಾಜ್ಯದ 156 ತಾಲೂಕುಗಳನ್ನು ಆವರಿಸಿಕೊಂಡಿದ್ದ ತೀವ್ರ ಬರಕ್ಕೆ ಈಗ ಸ್ಪಂದಿಸಿರುವ ಕೇಂದ್ರ ಸರ್ಕಾರ, ಪರಿಹಾರವಾಗಿ ₹1029.39 ಕೋಟಿಯನ್ನು ನೆರವಿನ ರೂಪದಲ್ಲಿ ಪ್ರಕಟಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಗೃಹ, ಹಣಕಾಸು, ಕೃಷಿ ಮತ್ತು ನೀತಿ ಆಯೋಗದ ಹಿರಿಯ ಅಧಿಕಾರಿಗಳು ಮಂಗಳವಾರ ಭಾಗಿಯಾಗಿದ್ದ ಉನ್ನತಮಟ್ಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್)ಯಿಂದ ಕರ್ನಾಟಕ, ಒಡಿಶಾ ಮತ್ತು ಹಿಮಾಚಲ ಪ್ರದೇಶದಲ್ಲಿನ ನೈಸರ್ಗಿಕ ವಿಪತ್ತಿಗೆ ಪರಿಹಾರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕಳೆದ ವರ್ಷವೂ ನೈಸರ್ಗಿಕ ವಿಕೋಪ:

ಕರ್ನಾಟಕವು 2018ರ ಸಾಲಿನಲ್ಲಿ ಅತಿವೃಷ್ಟಿ ಮತ್ತು ಅನಾವೃ ಷ್ಟಿಯ ಭಾರಿ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿತ್ತು. ಕೊಡಗು ಸೇರಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಭೂ ಕುಸಿತ, ಪ್ರವಾಹ ಉಂಟಾಗಿತ್ತು. ರಾಜ್ಯದ ಮನವಿ ಮೇರೆಗೆ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ್ದ ಕೇಂದ್ರ ಸರ್ಕಾರ ರಾಜ್ಯಕ್ಕೆ ₹546.21 ಕೋಟಿ ನೆರವು ನೀಡಿತ್ತು. ಇದೇ ವೇಳೆ ಮುಂಗಾರು ಮಳೆ (ಜೂನ್ ನಿಂದ ಆಗಸ್ಟ್) ವಿಫಲಗೊಂಡ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿನ ಬರಕ್ಕೆ ಪರಿಹಾರವಾಗಿ ₹949.49 ಕೋಟಿಯನ್ನು ಕೇಂದ್ರ ಸರ್ಕಾರ ಘೋಷಿಸಿತ್ತು.

ಪ್ರವಾಹಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಏತನ್ಮಧ್ಯೆ, ಕರ್ನಾಟಕದಲ್ಲಿ ರಬಿ ಬೆಳೆ ಬೆಳೆಯುವ ಪ್ರಮುಖ ಜಿಲ್ಲೆಗಳಾಗಿರುವ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಯಾದಗಿರಿ, ಕೊಪ್ಪಳ, ರಾಯಚೂರು, ಗದಗ, ಧಾರವಾಡ ಮತ್ತು ಬಳ್ಳಾರಿಯಲ್ಲಿ ಶೇ.66ರಷ್ಟು ಮಳೆ ಕೊರತೆಯಾಗಿ ಹಿಂಗಾರು ವೈಫಲ್ಯ ಕಂಡಿತ್ತು. ಇದರಿಂದ ಒಟ್ಟು ₹11,384.47 ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅಡಿ ₹2064.30 ಕೋಟಿ ನೆರವನ್ನೂ ಕೋರಿತ್ತು. ಅದಕ್ಕೆ ಸಂಬಂಧಿಸಿ ಈಗ ಸಭೆ ನಡೆಸಿದ ಕೇಂದ್ರ ಸರ್ಕಾರ ರಾಜ್ಯ ಕೋರಿದ್ದ ಮೊತ್ತದ ಹೆಚ್ಚು ಕಡಿಮೆ ಅರ್ಧದಷ್ಟು ಮೊತ್ತವನ್ನು ನೆರವಿನ ರೂಪದಲ್ಲಿ ಘೋಷಿಸಿದೆ. ರಾಜ್ಯ ಸರ್ಕಾರವು 2018ರಲ್ಲಿನ ಪ್ರವಾಹ ಪರಿಹಾರವಾಗಿ ಕೇಂದ್ರದಿಂದ ₹1199 ಕೋಟಿ ನೆರವು ಬಯಸಿತ್ತು. ಮುಂಗಾರು ವೈಫಲ್ಯಕ್ಕೆ ₹2432 ಕೋಟಿ ಪರಿಹಾರ ನಿರೀಕ್ಷಿಸಿತ್ತು. ಒಟ್ಟಾರೆ ಕಳೆದ ವರ್ಷ ಅತಿವೃಷ್ಟಿ, ಅನಾವೃಷ್ಟಿಯಿಂದ ಒಟ್ಟಾರೆ ರಾಜ್ಯದಲ್ಲಿ ₹32 ಸಾವಿರ ಕೋಟಿ ನಷ್ಟ ಅಂದಾಜಿಸಲಾಗಿತ್ತು.

click me!