ಮುಂಜಾಗ್ರತೆ ಯೋಜನೆ ರೂಪಿಸಲು ಬ್ಯಾಂಕುಗಳಿಗೆ 15 ದಿನ ಗಡುವು

By Suvarna Web DeskFirst Published Feb 28, 2018, 10:46 AM IST
Highlights

ಬ್ಯಾಂಕುಗಳಿಗೆ ಶ್ರೀಮಂತ ಉದ್ಯಮಿಗಳು ಸಾವಿರಾರು ಕೋಟಿ ರು. ವಂಚನೆ ಮಾಡುತ್ತಿರುವ ಪ್ರಕರಣಗಳು ಒಂದಾದ ಮೇಲೊಂದರಂತೆ ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತ ಕೇಂದ್ರ ವಿತ್ತ ಸಚಿವಾಲಯ ಇನ್ನು 15 ದಿನಗಳಲ್ಲಿ ಇಂತಹ ಹಗರಣಗಳನ್ನು ಮೊದಲೇ ತಡೆಯುವುದು ಹೇಗೆಂಬ ಬಗ್ಗೆ ವರದಿ ಸಿದ್ಧಪಡಿಸುವಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಟ್ಟಪ್ಪಣೆ ಮಾಡಿದೆ.

ನವದೆಹಲಿ : ಬ್ಯಾಂಕುಗಳಿಗೆ ಶ್ರೀಮಂತ ಉದ್ಯಮಿಗಳು ಸಾವಿರಾರು ಕೋಟಿ ರು. ವಂಚನೆ ಮಾಡುತ್ತಿರುವ ಪ್ರಕರಣಗಳು ಒಂದಾದ ಮೇಲೊಂದರಂತೆ ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತ ಕೇಂದ್ರ ವಿತ್ತ ಸಚಿವಾಲಯ ಇನ್ನು 15 ದಿನಗಳಲ್ಲಿ ಇಂತಹ ಹಗರಣಗಳನ್ನು ಮೊದಲೇ ತಡೆಯುವುದು ಹೇಗೆಂಬ ಬಗ್ಗೆ ವರದಿ ಸಿದ್ಧಪಡಿಸುವಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಟ್ಟಪ್ಪಣೆ ಮಾಡಿದೆ. ಅಲ್ಲದೆ, ಅಕ್ರಮಗಳು ನಡೆದಾಗ ಅದರ ಹೊಣೆಯನ್ನು ಬ್ಯಾಂಕಿನ ಹಿರಿಯ ಅಧಿಕಾರಿಗಳ ಮೇಲೆ ಹೊರಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದೂ ಸೂಚನೆ ನೀಡಿದೆ.

ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ಕಾರ್ಯಕಾರಿ ನಿರ್ದೇಶಕರು ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿಗಳು ಬ್ಯಾಂಕುಗಳಲ್ಲಿ ಹೆಚ್ಚುತ್ತಿರುವ ಅವ್ಯವಹಾರಗಳನ್ನು ತಡೆಯಲು ಮುಂಜಾಗ್ರತಾ ವರದಿಯ ನೀಲನಕ್ಷೆಯೊಂದನ್ನು ರೂಪಿಸಬೇಕು. ಇದಕ್ಕೆ 15 ದಿನ ಮಾತ್ರ ಕಾಲಾವಕಾಶವಿದೆ. ಬ್ಯಾಂಕುಗಳ ಕಾರ್ಯನಿರ್ವಹಣೆ ಹಾಗೂ ತಂತ್ರಜ್ಞಾನದಲ್ಲಿ ಏನು ಲೋಪಗಳಿವೆ ಎಂಬುದನ್ನು ಪತ್ತೆಹಚ್ಚಿ, ಅವುಗಳನ್ನು ಸರಿಪಡಿಸುವುದು ಹೇಗೆಂಬ ಬಗ್ಗೆ ಈ ವರದಿಯಲ್ಲಿ ವಿವರಗಳಿರಬೇಕು. ಹಾಗೆಯೇ, ಅಕ್ರಮಗಳು ನಡೆದರೆ ಅದರ ಹೊಣೆಯನ್ನು ಯಾರು ಹೊರಬೇಕು ಎಂಬ ಬಗ್ಗೆಯೂ ವಿವರಣೆಯಿರಬೇಕು ಎಂದು ಬ್ಯಾಂಕುಗಳಿಗೆ ಸೂಚಿಸಿರುವುದಾಗಿ ವಿತ್ತ ಸಚಿವಾಲಯದ ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿರುವ ಅತ್ಯುತ್ತಮ ಕಾರ್ಯವಿಧಾನಗಳನ್ನು ಆಧರಿಸಿ ತಯಾರಿಯಾಗುವ ಈ ವರದಿಯನ್ನು ಬ್ಯಾಂಕುಗಳಲ್ಲಿ ಶೀಘ್ರದಲ್ಲೇ ಅಳವಡಿಕೆ ಮಾಡಿಕೊಳ್ಳುವುದು ಹಾಗೂ ಅವ್ಯವಹಾರಗಳಿಗೆ ಹೊಣೆ ನಿಗದಿಪಡಿಸುವುದು ಬ್ಯಾಂಕುಗಳ ಆಡಳಿತ ಮಂಡಳಿಯ ಹೊಣೆ ಎಂದೂ ವಿತ್ತ ಸಚಿವಾಲಯ ಹೇಳಿದೆ.

click me!